Asianet Suvarna News Asianet Suvarna News

ಮಗಳ ಸಾವು, ಜೈಲು ಸೇರಿದ ಮಗ : ನೊಂದ ತಾಯಿ ನೇಣಿಗೆ ಶರಣು

ಅನಾರೋಗ್ಯಕ್ಕೀಡಾಗಿದ್ದ ಪುತ್ರಿಯ ಸಾವು, ಇದ್ದೊಬ್ಬ ಮಗ ಜೈಲು ಸೇರಿದ್ದರಿಂದ ನೊಂದ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿಯ ವಲಗೇರಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

Bengaluru Lady Suicide

ಬೆಂಗಳೂರು: ಅನಾರೋಗ್ಯಕ್ಕೀಡಾಗಿದ್ದ ಪುತ್ರಿಯ ಸಾವು, ಇದ್ದೊಬ್ಬ ಮಗ ಜೈಲು ಸೇರಿದ್ದರಿಂದ ನೊಂದ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿಯ ವಲಗೇರಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ವಲಗೇರಹಳ್ಳಿ ನಿವಾಸಿ ವಿನೋದಮ್ಮ (45) ಆತ್ಮಹತ್ಯೆ ಮಾಡಿಕೊಂಡವರು. ವಿನೋದಮ್ಮ ಅವರ ಪತಿ  ವೆಂಕಟೇಶ್ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇವರಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನಿದ್ದಾನೆ. ಗಾರ್ಮೆಂಟ್ಸ್ ಕೆಲಸ ಮಾಡಿ ವಿನೋದಮ್ಮ ಜೀವನ ಸಾಗಿಸುತ್ತಿದ್ದರು.

ಆರು ತಿಂಗಳ ಹಿಂದೆ ಅನಾರೋಗ್ಯದಿಂದ ಹಿರಿಯ ಮಗಳು ಮೃತಪಟ್ಟಿದ್ದರು. ಇದ್ದೊಬ್ಬ ಮಗ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಕಿರಿಯ ಮಗಳಿಗೆ ವಿವಾಹವಾಗಿದ್ದು, ಪತಿ ಜತೆ ಮಾರುತಿ ನಗರದಲ್ಲಿ ವಾಸವಿದ್ದರು. ಈ ಎಲ್ಲಾ ಕಾರಣಗಳಿಂದ ವಿನೋದಮ್ಮ ಸಾಕಷ್ಟು ನೊಂದಿದ್ದರು. ಭಾನುವಾರ ರಾತ್ರಿ ಕಿರಿಯ ಮಗಳ ಮನೆಗೆ ತೆರಳಿದ್ದರು. ಈ ವೇಳೆ ಮಗಳ ಮುಂದೆ ಮಗ ಜೈಲು ಸೇರಿದ್ದು, ಮಗಳು ಸಾವನ್ನಪ್ಪಿದ್ದರ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದರು.

ತಾಯಿಯನ್ನು ಸಮಾಧಾನ ಪಡಿಸಿದ್ದ ಮಗಳು ವಿನೋದಮ್ಮ ಅವರನ್ನು ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಬಿಟ್ಟು ತಮ್ಮ ಮನೆಗೆ ಬಂದಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ತಾಯಿ ಏನು ಮಾಡುತ್ತಿದ್ದಾರೆ ಎಂದು ಕೇಳಲು ಪುತ್ರಿ ಕರೆ ಮಾಡಿದ್ದು, ವಿನೋದಮ್ಮ ಸ್ವೀಕರಿಸಿಲ್ಲ. ಆತಂಕದಿಂದ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.

Follow Us:
Download App:
  • android
  • ios