ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಚಾಲಕನಿಗೆ ೧.೫೧ ಕೋಟಿ ರೂ. ಬ್ಯಾಂಕ್‌ಗೆ ಜಮಾ ಮಾಡಲು ನೀಡಿದ್ದರು. ಚಾಲಕ ರಾಜೇಶ್ ಹಣದೊಂದಿಗೆ ಪರಾರಿಯಾಗಿ ಕೆಲವು ಲಕ್ಷ ಖರ್ಚು ಮಾಡಿ ಉಳಿದ ಹಣವನ್ನು ದೇವಸ್ಥಾನದ ಹುಂಡಿಗೆ ಹಾಕಿದ್ದಾನೆ. ಹುಂಡಿ ಹಣ ವಾಪಸ್ ಪಡೆಯಲು ಸಾಧ್ಯವಿಲ್ಲದ್ದರಿಂದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು (ಮೇ.16): ಭಾರತದಲ್ಲಿ ಹಲವಾರು ಕಳ್ಳತನಗಳು ಪ್ರತಿನಿತ್ಯ ನಡೆಯುತ್ತವೆ. ಮತ್ತು ಕೆಲವೇ ಕೆಲವು ಮಾತ್ರ ರಾಷ್ಟ್ರೀಯ ಸುದ್ದಗಳಾಗುತ್ತವೆ. ಆದರೆ ಬೆಂಗಳೂರಿನಲ್ಲಿ ನಡೆದ ಈ ಒಂದು ಕಳ್ಳತನವು ಅದರ "ಆಧ್ಯಾತ್ಮಿಕ ಕಾರಣಕ್ಕಾಗಿ" ಗಮನ ಸೆಳೆಯುತ್ತಿದೆ. ಬಹುಶಃ ಇದು ಆರೋಪಿಯು ಮಾಡಿದ ಪಾಪಕ್ಕಾಗಿ ದೇವರಲ್ಲಿ ಕ್ಷಮೆಯಾಚಿಸುವ ವಿಧಾನವೂ ಆಗಿರಬಹುದು ಎಂದು ಹೇಳಲಾಗುತ್ತಿದೆ. ದೇವರಿಗೆ ನೀಡಿದ ದೇಣಿಗೆಯನ್ನು ಕದ್ದ ಹಣವಾಗಿದ್ದರೂ ಸಹ ಹಿಂತಿರುಗಿಸಲು ಸಾಧ್ಯವಿಲ್ಲದ ಕಾರಣ ಕಥೆ ಇನ್ನಷ್ಟು ಇಂಟ್ರಸ್ಟಿಂಗ್‌ ಆಗಿದೆ. ಅಷ್ಟಕ್ಕೂ ಆತ ಕದ್ದ ಮೊತ್ತವೆಷ್ಟು ಗೊತ್ತಾ ಬರೋಬ್ಬರಿ 1.51 ಕೋಟಿ ರೂಪಾಯಿ.

Add Asianetnews Kannada as a Preferred SourcegooglePreferred

ಮೇ 5 ರಂದು ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಕೋದಂಡರಾಮಪುರದ ನಿವಾಸಿ 46 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ತಮ್ಮ 'ವಿಶ್ವಾಸಾರ್ಹ' ಚಾಲಕನಿಗೆ 1.51 ಕೋಟಿ ರೂಪಾಯಿಗಳಿದ್ದ ಚೀಲವನ್ನು ತಮ್ಮ ಮನೆಯಲ್ಲಿ ನೀಡಿದ್ದರು.

ಚಾಲಕ ರಾಜೇಶ್ ಬಿಎನ್ ಕಳೆದ 10 ವರ್ಷಗಳಿಂದ ಸಿಎ ಜೊತೆ ಕೆಲಸ ಮಾಡುತ್ತಿದ್ದರು. 46 ವರ್ಷದ ಸಿಎ ಬಾಸ್‌, ರಾಜೇಶ್ ಅವರಿಗೆ ಬ್ಯಾಗ್ ಅನ್ನು ನೀಡಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾಗಿರುವುದರಿಂದ ಕಾರಿನಲ್ಲಿ ಇಡಲು ಕೇಳಿಕೊಂಡರು. ಆದರೆ, ಬ್ಯಾಂಕಿಗೆ ಹೋಗಲು ಕೆಳಗೆ ಹೋದಾಗ, ರಾಜೇಶ್ ಅಥವಾ ಅವರ ಕಾರು ಸಿಗಲಿಲ್ಲ.

"ನಾನು ಬೇಗನೆ ನನ್ನ ಕಚೇರಿ ವಿಳಾಸಕ್ಕೆ ಹೋದಾಗ ನನ್ನ ಕಾರು ಅಲ್ಲಿ ನಿಂತಿರುವುದನ್ನು ಕಂಡೆ. ನಾನು ರಾಜೇಶ್‌ಗೆ ಕರೆ ಮಾಡಿದಾಗ, ಅವನು ಅಂಗಡಿಯಲ್ಲಿ ಔಷಧಿ ಖರೀದಿಸುತ್ತಿರುವುದಾಗಿ ಮತ್ತು 10 ನಿಮಿಷಗಳಲ್ಲಿ ಹಿಂತಿರುಗುವುದಾಗಿ ಹೇಳಿದ್ದ" ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. 'ಆದರೆ, 10 ನಿಮಿಷವಾದರೂ ಆತ ವಾಪಾಸ್‌ ಬಂದಿರಲಿಲ್ಲ. ನಂತರ ಆತನ ಮೊಬೈಲ್‌ ಕೂಡ ನಾಟ್‌ ರೀಚೆಬಲ್‌ ಆಗಿತ್ತು' ಎಂದಿದ್ದಾರೆ.

ಚಾರ್ಟರ್ಡ್ ಅಕೌಂಟೆಂಟ್‌ನಿಂದ ದೂರು ಸ್ವೀಕರಿಸಿದ ನಂತರ, ಪೊಲೀಸರು ರಾಜೇಶ್‌ನನ್ನು ಪತ್ತೆಹಚ್ಚಿ ನೋಟಿಸ್ ಜಾರಿ ಮಾಡಿದರು. ಮೇ 9 ರಂದು ಆತನನ್ನು ವಿಚಾರಣೆಗೆ ಹಾಜರುಪಡಿಸಲಾಯಿತು, ಆತ ಅಪರಾಧವನ್ನು ಒಪ್ಪಿಕೊಂದ ಬಳಿಕ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

ಕದ್ದ ಹಣದಿಂದ ಡ್ರೈವರ್‌ ಮಾಡಿದ್ದೇನು?

ಪೊಲೀಸ್ ತನಿಖೆಯಲ್ಲಿ ರಾಜೇಶ್ ಈ ಹಣವನ್ನು ಖರ್ಚು ಮಾಡಿದ ರೀತಿ ಹೇಳಿದ್ದಾರೆ. ತನ್ನ ಕುಟುಂಬದ ವಿವಿಧ ಖರೀದಿಗಳಿಗೆ ಸುಮಾರು 1 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ದೇವಸ್ಥಾನದ ಕಾಣಿಕೆ ಹುಂಡಿಗೆ ಹಲವಾರು ಸಾವಿರ ರೂಪಾಯಿಗಳನ್ನು ದಾನ ಮಾಡಿದ್ದೇನೆ ಎಂದಿದ್ದಾರೆ. ದಾನ ಮಾಡಿದ ಹಣವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


ದೇವಸ್ಥಾನಕ್ಕೆ ದಾನ ಮಾಡಿದ ಹಣವನ್ನು ಏಕೆ ಹಿಂತಿರುಗಿಸಲಾಗುವುದಿಲ್ಲ?

ದಕ್ಷಿಣ ಭಾರತದ ದೇವಾಲಯಗಳಲ್ಲಿ "ಹುಂಡಿ" ಮೂಲಕ ದಾನ ಮಾಡುವ ಹಣವನ್ನು ಸಾಮಾನ್ಯವಾಗಿ ದೇವರಿಗೆ ಉಡುಗೊರೆಯಾಗಿ ಪರಿಗಣಿಸಲಾಗುತ್ತದೆ ಮತ್ತು ಅದನ್ನು ಸಾಮಾನ್ಯವಾಗಿ ಮರುಪಾವತಿಸಲಾಗುವುದಿಲ್ಲ. ವರದಿಗಳ ಪ್ರಕಾರ, ಈ ದೇಣಿಗೆಗಳನ್ನು ದೇವಾಲಯ ನಿರ್ವಹಣೆ, ಚಟುವಟಿಕೆಗಳು ಮತ್ತು ಕೆಲವೊಮ್ಮೆ ಸರ್ಕಾರಿ ಯೋಜನೆಗಳಿಗೆ ಬಳಸಲಾಗುತ್ತದೆ. ದೇವಾಲಯದ ಅಧಿಕಾರಿಗಳು ಅಸಾಧಾರಣ ಪ್ರಕರಣಗಳನ್ನು ಪರಿಗಣಿಸಬಹುದಾದರೂ, ಹುಂಡಿಯಲ್ಲಿ ಒಮ್ಮೆ ಹಣವನ್ನು ಇಟ್ಟರೆ ಅದನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ ಎಂಬುದು ಪ್ರಮಾಣಿತ ಅಭ್ಯಾಸ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಒಬ್ಬ ಭಕ್ತನು ಚೆನ್ನೈನ ಪ್ರಸಿದ್ಧ ತಿರುಪೋರೂರ್ ಕಂದಸ್ವಾಮಿ ದೇವಾಲಯದ 'ಹುಂಡಿ'ಯಲ್ಲಿ ಒಂದು ಲಕ್ಷ ರೂಪಾಯಿ ಮೌಲ್ಯದ ತನ್ನ ದುಬಾರಿ ಐಫೋನ್ ಅನ್ನು "ಆಕಸ್ಮಿಕವಾಗಿ ಬೀಳಿಸಿದ್ದ". ಆದರೆ, ದೇವಾಲಯದ ಅಧಿಕಾರಿಗಳು 'ಹುಂಡಿ' (ದೇಣಿಗೆ ಪೆಟ್ಟಿಗೆ) ಗೆ ಹಾಕುವ ಯಾವುದೇ ವಸ್ತುವು ದೇವಾಲಯದ ಆಸ್ತಿ ಎಂದು ಅವನಿಗೆ ಸ್ಪಷ್ಟವಾಗಿ ಹೇಳಿದ್ದರು.