ಕಲಾಂ ಪ್ರತಿಮೆ ಬಳಿ ಭಗವದ್ಗೀತೆ: ವಿವಾದದ ಬಳಿಕ ಕುರಾನ್, ಬೈಬಲ್ ಇಟ್ಟ ಕುಟುಂಬ
ತಮಿಳುನಾಡಿನ ಪುರಾಣಪ್ರಸಿದ್ಧ ಕ್ಷೇತ್ರ ರಾಮೇಶ್ವರದಲ್ಲಿ ಮೂರು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್ ಕಲಾಂ ಸ್ಮಾರಕ ಇದೀಗ ವಿವಾದಕ್ಕೆ ಕಾರಣವಾಗಿದೆ.
ರಾಮೇಶ್ವರಂ(ಜು.31): ತಮಿಳುನಾಡಿನ ಪುರಾಣಪ್ರಸಿದ್ಧ ಕ್ಷೇತ್ರ ರಾಮೇಶ್ವರದಲ್ಲಿ ಮೂರು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್ ಕಲಾಂ ಸ್ಮಾರಕ ಇದೀಗ ವಿವಾದಕ್ಕೆ ಕಾರಣವಾಗಿದೆ.
ರಾಮೇಶ್ವರದಲ್ಲಿರುವ ಕಲಾಂ ಅವರ ಹುಟ್ಟೂರು ಪೀಕರಂಬುವಿನಲ್ಲಿ ಲೋಕಾರ್ಪಣೆಗೊಂಡಿರುವ ಕಲಾಂ ಅವರ ಸ್ಮಾರಕದಲ್ಲಿ ಕಲಾಂ ಅವರು ವೀಣೆ ನುಡಿಸುತ್ತಿರುವ ಪ್ರತಿಮೆಯೊಂದು ಇದೆ. ಅದರ ಬಳಿ ಭಗವದ್ಗೀತೆಯ ಪ್ರತಿ ಇಟ್ಟಿರುವುದು ವಿವಾದದ ಮೂಲ.
ಕಲಾಂ ಅವರ ಪರಂಪರೆಯನ್ನು ಕೇಂದ್ರ ಕೇಸರೀಕರಣ ಮಾಡಲು ಯತ್ನಿಸುತ್ತಿದೆ ಎಂಬ ಆರೋಪಗಳು ಬಂದಿವೆ. ಇದರ ಬೆನ್ನಲ್ಲೇ ಕಲಾಂ ಪ್ರತಿಮೆಯ ಬಳಿ ಕುರಾನ್ ಹಾಗೂ ಬೈಬಲ್ ಪ್ರತಿಯನ್ನೂ ತಂದಿಟ್ಟು, ವಿವಾದಕ್ಕೆ ತೇಪೆ ಹಚ್ಚಲು ಪ್ರಯತ್ನಿಸಲಾಗಿದೆ.