'ಬಯಸದೇ ಬಂದ ಭಾಗ್ಯ, ನನ್ನನ್ನು ಯಾರು ಮಂತ್ರಿ ಮಾಡಿದ್ರೋ ನನಗೆ ಗೊತ್ತಿಲ್ಲ'
ಮಂತ್ರಿ ಸ್ಥಾನ ಬಯಸದೇ ಬಂದ ಭಾಗ್ಯ: ಸಚಿವ ಸವದಿ| ನನ್ನನ್ನು ಯಾರು ಮಂತ್ರಿ ಮಾಡಿದ್ದಾರೋ ನನಗೆ ಗೊತ್ತಿಲ್ಲ
ಬೆಳಗಾವಿ[ಆ.22]: ನನ್ನನ್ನು ಯಾರು ಮಂತ್ರಿ ಮಾಡಿದ್ದಾರೆ ನನಗೆ ಗೊತ್ತಿಲ್ಲ. ಮಂತ್ರಿ ಸ್ಥಾನ ನನ್ನ ಪಾಲಿಗೆ ಬಯಸದೇ ಬಂದ ಭಾಗ್ಯ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.
ಬುಧವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕನಾಗಿದ್ದರೂ ಪಕ್ಷದ ಮೇಲಿನ ಬದ್ಧತೆ ಮತ್ತು ಸರ್ಕಾರದ ಹಿತದೃಷ್ಟಿಯಿಂದ ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷದ ವರಿಷ್ಠರು ಸಚಿವಸ್ಥಾನ ನೀಡಿದ್ದಾರೆ. ನನಗೆ ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ನನಗೆ ಸಚಿವ ಸ್ಥಾನ ನೀಡುವಂತೆ ಯಾರು ಲಾಬಿ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಗೋಕಾಕ್ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಗೋಕಾಕ್ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಸಂಬಂಧ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು.
ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ, ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನ ಸಹಜ. ಸಚಿವ ಸ್ಥಾನ ವಂಚಿತ ನಾಯಕರಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗುತ್ತದೆ. ಉಮೇಶ್ ಕತ್ತಿ ಹಿರಿಯರಾಗಿದ್ದು, ಅವರಿಗೆ ಪಕ್ಷದ ವರಿಷ್ಠರು ನ್ಯಾಯ ಒದಗಿಸುವ ವಿಶ್ವಾಸವಿದೆ ಎಂದು ಹೇಳಿದರು.