Asianet Suvarna News Asianet Suvarna News

ಪಟಾಕಿ ಹಚ್ಚುವ ಮುನ್ನ ಇರಲಿ ಎಚ್ಚರ!

ರಾತ್ರಿ 10 ಗಂಟೆ ನಂತರ ಪಟಾಕಿ ಸಿಡಿಸಬೇಡಿ | 125ಕ್ಕೂ ಹೆಚ್ಚು ಡೆಸಿಬಲ್‌ನ ಪಟಾಕಿ ಬಿಟ್ಹಾಕಿ | ಅನಾಹುತವಾದರೆ ತುರ್ತು ದೂರವಾಣಿ ಸಂಪರ್ಕಿಸಿ

Be Careful While Firing Crackers this Deepavali

ಬೆಂಗಳೂರು: ‘ಬೆಳಕಿನ ಹಬ್ಬ’ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಮಳೆರಾಯ ಕೊಂಚ ವಿರಾಮ ತೆಗೆದುಕೊಂಡಿದ್ದಾನೆ. ಹಾಗಾಗಿ ಮಳೆರಾಯ ದೀಪಾವಳಿ ಸಂತಸಕ್ಕೆ ಎಲ್ಲಿ ಅಡ್ಡಿ ಮಾಡುತ್ತಾನೋ ಎಂಬ ಆತಂಕದಲ್ಲಿದ್ದ ಜನರು ಹಬ್ಬವನ್ನು ಇನ್ನಷ್ಟು ಸಡಗರದಿಂದ ಆಚರಿಸಲು ಸಜ್ಜಾಗುತ್ತಿದ್ದಾರೆ. ಮನೆ ಮನೆಗಳ ಮುಂದೆ ಬಣ್ಣ ಬಣ್ಣದ ಆಕಾಶಬುಟ್ಟಿಗಳು ರಾರಾಜಿಸುತ್ತಿವೆ, ವೈವಿಧ್ಯಮ ಪಟಾಕಿಗಳು ಮನೆಯ ಗೂಡು ಸೇರಿಕೊಂಡಿವೆ, ನಿಧಾನವಾಗಿ ಅಲ್ಲಲ್ಲಿ ಪಟಾಕಿಗಳ ಸದ್ದು ಕೇಳಿ ಬರತೊಡಗಿದೆ.

ಬುಧವಾರದಿಂದ ಪಟಾಕಿಗಳ ಅಬ್ಬರ ಎಲ್ಲಡೆ ಇನ್ನಷ್ಟು ಜಾಸ್ತಿಯಾಗಲಿದೆ. ಆದರೆ, ಪಟಾಕಿಗಳ ಸಿಡಿಸುವ ಸಂಭ್ರಮದಲ್ಲಿ ಜಗತ್ತನ್ನೇ ನೋಡುವ ಪುಟ್ಟ ಕಂಗಳ ಬಗ್ಗೆ ಎಚ್ಚರ ವಹಿಸದಿದ್ದರೆ ಜೀವನವೇ ಕತ್ತಲಾಗಬಹುದು, ಇಲ್ಲವೇ ಕಿವುಡುತನ, ಸುಟ್ಟ ಗಾಯಗಳಿಂದ ನರಳಲೂಬಹುದು. ಅಲ್ಲದೆ, ಪಟಾಕಿಯಲ್ಲಿರುವ ರಾಸಾಯನಿಕಗಳು ವಾತಾವರಣದ ಆಮ್ಲಜನಕದಲ್ಲಿ ಸೇರಿ ಅಸ್ತಮಾ ಸೇರಿದಂತೆ ಉಸಿರಾಟದ ತೊಂದರೆಗಳು ಎದುರಾಗುವ ಸಾಧ್ಯತೆ ಇದ್ದೇ ಇದೆ.

ರಾತ್ರಿ ಪಟಾಕಿ ಬೇಡ: ರಾಜ್ಯದಲ್ಲಿರುವ ಎಲ್ಲಾ ನಗರಗಳಲ್ಲಿ ವಾಯು ಮತ್ತು ಶಬ್ದ ಮಾಲಿನ್ಯವನ್ನು ಅಪಾಯಕಾರಿ ಮಟ್ಟ ತಲುಪದಂತೆ ಮತ್ತು ಅವಘಡಗಳು ಸಂಭವಿಸದಂತೆ ಎಚ್ಚರವಹಿಸಿ ಸಂಭ್ರಮದಿಂದ ದೀಪಾವಳಿ ಆಚರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸಲಹೆ ನೀಡಿದೆ.

ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುವುದರಿಂದ ವಾತಾವರಣದಲ್ಲಿ ಕಾರ್ಬನ್, ಗಂಧಕ, ರಂಜಕ ಅಂಶಯುಕ್ತ ವಾಯು, ಅಪಾರ ಪ್ರಮಾಣದ ಕಾರ್ಬನ್ ಮೊನೋಕ್ಸೆಡ್’ನೊಂದಿಗೆ ಇನ್ನಿತರೆ ರಾಸಾಯನಿಕ ವಾತಾವರಣಕ್ಕೆ ಸೇರುತ್ತದೆ. ವಾಯು, ಶಬ್ದ ಮತ್ತು ತ್ಯಾಜ್ಯ ಮಾಲಿನ್ಯ ಪ್ರಮಾಣವು ಮಕ್ಕಳು, ವೃದ್ಧರು, ರೋಗಿಗಳು, ಶಿಶುಗಳ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತವೆ. ಹೀಗಾಗಿ ದೀಪ ಬೆಳಗುವ ಮೂಲಕ ಸಮುದಾಯ ಮಟ್ಟದಲ್ಲಿ ಹಬ್ಬ ಆಚರಿಸುವಂತೆ ಸಲಹೆ ನೀಡಿದೆ.

ದೀಪಾವಳಿ ಸಂದರ್ಭದಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಪಟಾಕಿ ಹಚ್ಚುವುದು ಮತ್ತು ಧ್ವನಿ ವರ್ಧಕಗಳನ್ನು ಬಳಸದಂತೆ ಸೂಚನೆ ನೀಡಿದೆ. ಹೆಚ್ಚು ಶಬ್ದ ಮಾಡುವ 125ಕ್ಕೂ ಹೆಚ್ಚಿನ ಡೆಸಿಬಲ್ ಮೀರದಂತೆ ಪಟಾಕಿಗಳನ್ನು ಬಳಸಿ ಸಹಕರಿಸುವಂತೆ ತಿಳಿಸಿದೆ.

Be Careful While Firing Crackers this Deepavali

ಕಣ್ಣುಗಳಿಗೆ ಗಾಯವಾದರೆ ಏನು ಮಾಡಬೇಕು?

1 ಪಟಾಕಿ ಸಿಡಿದು ಕಣ್ಣುಗಳಿಗೆ ಸಮಸ್ಯೆಯಾದಲ್ಲಿ ಕೈಯಿಂದ ಕಣ್ಣುಗಳನ್ನು ಒರೆಸದಂತೆ ಎಚ್ಚರವಹಿಸಿ

2 ಕಣ್ಣನ್ನು ಶುದ್ಧ ನೀರಿನಿಂದ ತೊಳೆಯಿರಿ, ನೀರು ಸಿಗದಿದ್ದರೆ ಒಣಗಿದ ಶುಭ್ರ ಬಟ್ಟೆಯಿಂದ ಶುದ್ಧಗೊಳಿಸಿ

3 ಹತ್ತಿರದ ನೇತ್ರ ಪರೀಕ್ಷಾ ಕೇಂದ್ರಗಳಲ್ಲಿ ತಕ್ಷಣ ಪರೀಕ್ಷಿಸಿಕೊಳ್ಳುವುದು ಉತ್ತಮ

ಆಸ್ಪತ್ರೆಗಳ ಸಹಾಯವಾಣಿ ಪಟಾಕಿಯಿಂದ ಕಣ್ಣಿಗೆ ಹಾನಿಯಾದರೆ ತುರ್ತು ಚಿಕಿತ್ಸೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಕಣ್ಣಿನ ಆಸ್ಪತ್ರೆಗಳಲ್ಲಿ 24X7 ತುರ್ತು ಸೇವೆಗಾಗಿ ಸಹಾಯವಾಣಿ ಆರಂಭಿಸಿವೆ. ನಗರ ಪ್ರಮುಖ ಕಣ್ಣಿನ ಆಸ್ಪತ್ರೆಯಾದ ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಹಾನಿಗೆ ತುರ್ತುಚಿಕಿತ್ಸೆಗಾಗಿ ವಿಶೇಷ ಕೊಠಡಿ ವ್ಯವಸ್ಥೆ ಮಾಡಿಕೊಂಡಿದೆ.  ಅ.18ರಿಂದ ಒಂದು ವಾರ ಕಾಲ 24X7  ಸೇವೆ ಒದಗಿಸಲು ಅಗತ್ಯ ಕ್ರಮ ಕೈಗೊಂಡಿದೆ.

ಏನ್ ಮಾಡ್ಬಾರ್ದು?

  • ಪಟಾಕಿ ಹಚ್ಚಲು ಗಾಜಿನ ಬಾಟಲ್, ಕಂಟೇನರ್‌ಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ
  • ಪಟಾಕಿ ಹಚ್ಚುವಾಗ ಜಾಗದಲ್ಲಿ ಸುಲಭವಾಗಿ ಹೊತ್ತಿಕೊಳ್ಳುವ ವಸ್ತುಗಳನ್ನು ಸಂಗ್ರಹಿಸಿ
  • ಇಡಬೇಡಿ.
  • ರೇಷ್ಮೆ, ಸಿಂಥೆಟಿಕ್ ಹಾಗೂ ಸಡಿಲವಾದ ಬಟ್ಟೆಗಳನ್ನು ಧರಿಸಬೇಡಿ
  • ಮಕ್ಕಳನ್ನು ಒಬ್ಬಂಟಿಯಾಗಿ ಪಟಾಕಿ ಹಚ್ಚಲು ಬಿಡಬೇಡಿ
  • ಅರ್ಧ ಸುಟ್ಟ ಪಟಾಕಿಗಳನ್ನು ಮತ್ತೊಮ್ಮೆ ಹಚ್ಚಲು ಪ್ರಯತ್ನಿಸಬೇಡಿ

ಏನ್ ಮಾಡ್ಬೇಕು?

  • ಪಟಾಕಿ ಸಿಡಿಸುವಾಗ ಕಾಟನ್ ಬಟ್ಟೆಗಳನ್ನು ಧರಿಸಿ
  • ಕನ್ನಡಕ ಹಾಕಿಕೊಂಡು ಪಟಾಕಿ ಸಿಡಿಸುವುದು ಉತ್ತಮ
  • ಬೆಂಕಿ ಹಚ್ಚಲು ಉದ್ದದ ಅಗರಬತ್ತಿ ಬಳಸಿ
  • ತೆರೆದ ಪ್ರದೇಶದಲ್ಲಿ ಪಟಾಕಿ ಸಿಡಿಸಿ
  • ಕಡಿಮೆ ಶಬ್ದ ಸಾಮರ್ಥ್ಯ ಇರುವ ಪಟಾಕಿ ಸಿಡಿಸಿ

 

Follow Us:
Download App:
  • android
  • ios