ಕಳೆದ ಬಾರಿ ಮೇಯರ್ ಹಾಗೂ ಉಪಮೇಯರ್ ಚುನಾವಣೆ ವೇಳೆ ಕೆಲ ಮತದಾರರು ತಡವಾಗಿ ಬಂದ ಹಿನ್ನೆಲೆಯಲ್ಲಿ ಅವರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿರಲಿಲ್ಲ.

ಬೆಂಗಳೂರು(ಸೆ.22): ಈ ಬಾರಿಯ ಬಿಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ನಿಗದಿತ ಸಮಯಕ್ಕಿಂತ ಯಾವುದೇ ಮತದಾರರು ತಡವಾಗಿ ಬಂದರೆ ಅಂತಹವರಿಗೆ ಚುನಾವಣೆ ನಡೆಯುವ ಕೆಂಪೇಗೌಡ ಪೌರಸಭಾಂಗಣದೊಳಗೆ ಪ್ರವೇಶ ನೀಡಬಾರದೆಂದು ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಬಾರಿ ಮೇಯರ್ ಹಾಗೂ ಉಪಮೇಯರ್ ಚುನಾವಣೆ ವೇಳೆ ಕೆಲ ಮತದಾರರು ತಡವಾಗಿ ಬಂದ ಹಿನ್ನೆಲೆಯಲ್ಲಿ ಅವರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿರಲಿಲ್ಲ. ಹಾಗಾಗಿ ಗದ್ದಲ ಉಂಟಾಗಿತ್ತು. ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎನ್ನುವುದಾದರೆ ಸ‘ಭಾಂಗಣಕ್ಕೆ ಪ್ರವೇಶ ಏಕೆ ನೀಡಿದಿರಿ ಎಂಬ ಪ್ರಶ್ನೆ ಉದ್ಭವಿಸಿತ್ತು. ಹಾಗಾಗಿ ಈ ಬಾರಿ ಚುನಾವಣೆಯನ್ನು ಕಟ್ಟುನಿಟ್ಟಾಗಿ ನಡೆಸುವ ಸಲುವಾಗಿ ತಡವಾಗಿ ಬರುವ ಯಾವುದೇ ಮತದಾರರಿಗೆ ಚುನಾವಣೆ ನಡೆಯುವ ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರಸಭಾಂಗಣಕ್ಕೆ ಪ್ರವೇಶವನ್ನೇ ನೀಡದಂತೆ ಅಧಿಕಾರಿಗಳಿಗೆ ಜಯಂತಿ ಸೂಚಿಸಿದ್ದಾರೆ. ಸೆ.28ರಂದು ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಂದು ಬೆಳಗ್ಗೆ 11.30ರ ನಂತರ ಬರುವ ಯಾವುದೇ ಮತದಾರರಿಗೆ ಸಭಾಂಗಣಕ್ಕೆ ಬರಲು ಅವಕಾಶ ನೀಡಬಾರದು ಎಂದು ಸೂಚಿಸಲಾಗಿದ್ದು, ಜತೆಗೆ ಮತದಾರರನ್ನು ಗುರುತಿಸಲು ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.