ಬಸವಣ್ಣ, ಬುದ್ಧ ಕೂಡ ಎಡಪಂಥೀಯರು: ಚಂಪಾ
ಬದಲಾವಣೆ ಬಯಸೋರೆಲ್ಲಾ ಎಡಪಂಥೀಯರು
ಮೈಸೂರು: ಬದಲಾವಣೆ ಬಯಸುವವರೆಲ್ಲಾ ಎಡಪಂಥೀಯರು, ಬಯಸದವರು ಬಲಪಂಥೀಯರು ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ವ್ಯಾಖ್ಯಾನಿಸಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ಪ್ರೊ.ಮಲೆಯೂರು ಗುರುಸ್ವಾಮಿ-70 ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಚಲಿತ ರಾಜಕೀಯ ನುಡಿಗಟ್ಟು, ವ್ಯಾಕರಣ ತುಲನೆ ಮಾಡಿದಾಗ ಎಡಪಂಥೀಯ, ಬಲಪಂಥೀಯ ಎಂಬ ಸೈದ್ಧಾಂತಿಕ ಪ್ರಚಾರ ನಡೆದಿದೆ. ಸಮಾಜದಲ್ಲಿ ಸಮಾನತೆ ಬಯಸಿದ ಬಸವಣ್ಣ, ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಎಡಪಂಥೀಯರೇ ಎಂದು ಹೇಳಿದರು.
ಯಾವಾಗಲೋ, ಎಲ್ಲಿಂದಲೋ ಬಂದವರೆಲ್ಲಾ ನಮ್ಮವರೇ. ಯಾರನ್ನೂ ದೇಶ ಬಿಟ್ಟು ಹೋಗಿ ಎನ್ನಬಾರದು. ಈ ರೀತಿಯ ಮನಸ್ಥಿತಿಯಿಂದಲೇ ದೇಶ ಹಾಳಾಗಿ ಹೋಗುತ್ತಿದೆ ಎಂದು ಅವರು ಹೇಳಿದರು.
ಆರು ಸಾವಿರ ಶ್ರೀ ಆಗುತ್ತಿದ್ದೆ: ಚಂಪಾ
ನಾನೇನಾದರೂ ಸ್ವಾಮೀಜಿ ಆಗಿದ್ದಿದ್ರೆ ಸಿಕ್ಸ್ ಥೌಸೆಂಡ್ ಸ್ವಾಮೀಜಿ ಆಗಿರುತ್ತಿದ್ದೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಭಾನುವಾರ ನಗರದಲ್ಲಿ ಪ್ರೊ. ಮಲೆಯೂರು ಗುರುಸ್ವಾಮಿ-70 ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾನು ಸ್ವಾಮೀಜಿ ಆಗಬೇಕಿತ್ತು. ಆದರೆ ಆಗಲಿಲ್ಲ. ಆಗಿದ್ದರೆ ಏನೇನು ಅನಾಹುತ ಆಗ್ತಿದ್ದವೋ ಗೊತ್ತಿಲ್ಲ ಎಂದರು. ಹುಬ್ಬಳ್ಳಿಯಲ್ಲಿ ಮೂರು ಸಾವಿರ ಮಠ ಇದೆ. ಆ ಸ್ವಾಮೀಜಿಯನ್ನು ನಾನು ಥ್ರೀ ಥೌಸೆಂಡ್ ಸ್ವಾಮೀಜಿ ಅಂತಾನೆ ಕರೆಯೋದು. ನಾನೇನಾದ್ರು ಸ್ವಾಮೀಜಿ ಆಗಿದ್ರೆ ಸಿಕ್ಸ್ ಥೌಸೆಂಡ್ ಸ್ವಾಮೀಜಿ ಆಗ್ತಿದ್ದೆ ಎಂದು ಚಂಪಾ ಮತ್ತೊಮ್ಮೆ ನಗಿಸಿದರು.