ಅಪಮೌಲ್ಯೀಕರಣ ಕ್ರಮದಿಂದ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ, ಹಲವಾರು ಜೀವಗಳು ಹೋಗಿವೆ ಎಂದಿರುವ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಉಪಾಧ್ಯಕ್ಷ ಡಿ.ಥಾಮಸ್ ಫ್ರಾಂಕೋ, ಗವರ್ನರ್ ಊರ್ಜಿತ್ ಪಟೇಲ್ ನೈತಿಕ ಹೊನೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ನವದೆಹಲಿ (ನ.21): ಕೇಂದ್ರ ಸರ್ಕಾರ ಕೈಗೊಂಡಿರುವ ಅಪಮೌಲ್ಯೀಕರಣ ಕ್ರಮವನ್ನು ಟೀಕಿಸಿರುವ ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದೆ.
ಅಪಮೌಲ್ಯೀಕರಣ ಕ್ರಮದಿಂದ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ, ಹಲವಾರು ಜೀವಗಳು ಹೋಗಿವೆ ಎಂದಿರುವ ಒಕ್ಕೂಟದ ಉಪಾಧ್ಯಕ್ಷ ಡಿ.ಥಾಮಸ್ ಫ್ರಾಂಕೋ, ಗವರ್ನರ್ ಊರ್ಜಿತ್ ಪಟೇಲ್ ನೈತಿಕ ಹೊನೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ನಮ್ಮ ಪ್ರಧಾನಿಯವರಾಗಲಿ ಅಥವಾ ಹಣಕಾಸು ಸಚಿವರಾಗಲಿ ಅರ್ಥಶಾಶ್ತ್ರಜ್ಞರಲ್ಲ, ಅಂತಹುದರಲ್ಲಿ ದೇಶದ ಆರ್ಥಿಕತೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಕುರಿತು ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಲಹೆ ನೀಡಬೇಕಾದ ಹೊಣೆಗಾರಿಕೆ ರಿಸರ್ವ್ ಬ್ಯಾಂಕಿನಲ್ಲಿರುವ ಆರ್ಥಿಕ ತಜ್ಞರದ್ದು. ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಗವರ್ನರ್ ವಿಫಲರಾಗಿದ್ದಾರೆ, ಎಂದು ಫ್ರಾಂಕೋ ಹೇಳಿದ್ದಾರೆಂದು ಇಂಡಿಯನ್ ಎಕ್ಸ್’ಪ್ರೆಸ್ ವರದಿ ಮಾಡಿದೆ.
ಬ್ಯಾಂಕುಗಳಲ್ಲಿ ಜನರು ಅಳುತ್ತಿದ್ದಾರೆ, 11 ಬ್ಯಾಂಕ್ ಅಧಿಕಾರಿಗಳು ಕೆಲಸದ ಒತ್ತಡದಿಂದಾಗಿ ಸಾವನಪ್ಪಿದ್ದಾರೆ. ಬ್ಯಾಂಕು ಉದ್ಯೋಗಿಗಳು ವಿರಾಮವನ್ನು ಪಡೆಯದೇ ಸರಾಸರಿ 16-18 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿದೆ, ಎಂದು ಫ್ರಾಂಕೋ ಹೇಳಿದ್ದಾರೆ.
