ಕರ್ನಾಟಕ ರಾಜಕೀಯದಲ್ಲಿ ರಾಜೀನಾಮೆ ಹೈ ಡ್ರಾಮಾ ನಡೆಯುತ್ತಿರುವ ಬೆನ್ನಲ್ಲೇ ಮತ್ತೊಬ್ಬ ಕಾಂಗ್ರೆಸ್ ಶಾಸಕರು ಸ್ಪೀಕರ್ ಭೇಟಿ ಮಾಡಲು ಕಚೇರಿಗೆ ಆಗಮಿಸಿದ್ದು ಅಚ್ಚರಿ ಉಂಟು ಮಾಡಿದೆ. 

ಬೆಂಗಳೂರು [ಜು.12]: ಸಮ್ಮಿಶ್ರ ಸರ್ಕಾರದಲ್ಲಿ ದಿನಕ್ಕೊಬ್ಬರು ಶಾಸಕರು ರಾಜೀನಾಮೆ ನೀಡುತ್ತಿರುವ ಹೊತ್ತಿನಲ್ಲೇ ಗುರುವಾರ ಬಂಗಾರಪೇಟೆ ಕಾಂಗ್ರೆಸ್‌ ಶಾಸಕ ನಾರಾಯಣಸ್ವಾಮಿ ಅವರು ಸ್ಪೀಕರ್‌ ಕಚೇರಿಗೆ ಆಗಮಿಸಿ ಅಚ್ಚರಿ ಉಂಟು ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ಬೆಳಗ್ಗೆ ಕಚೇರಿಗೆ ಆಗಮಿಸಿದ ಅವರು, ಸ್ಪೀಕರ್‌ ಆಗಮಿಸದ ಕಾರಣ ಕೆಲಹೊತ್ತು ಕಾದು ಹೊರ ನಡೆದರು. ಬಳಿಕ ಸಿದ್ದರಾಮಯ್ಯ ಅವರು ಸ್ಪೀಕರ್‌ ಕಚೇರಿಯಲ್ಲಿ ಚರ್ಚೆ ನಡೆಸುತ್ತಿರುವಾಗಲೇ ಕಾಂಗ್ರೆಸ್‌ ಶಾಸಕರಾದ ಭೀಮಾನಾಯ್ಕ್ ಹಾಗೂ ಬೈರತಿ ಸುರೇಶ್‌ ಅವರು ಸ್ಪೀಕರ್‌ ಕಚೇರಿಗೆ ಭೇಟಿ ನೀಡಿದ್ದರು.

ಸಿದ್ದರಾಮಯ್ಯ ಸ್ಪೀಕರ್‌ ಕಚೇರಿಯಿಂದ ಹೊರಟ ಬೆನ್ನಲ್ಲೇ ಬಿಜೆಪಿ ಶಾಸಕರಾದ ಸಿ.ಟಿ. ರವಿ ಅವರು ಸ್ಪೀಕರ್‌ ಕಚೇರಿಗೆ ಹೋಗಿ ಚರ್ಚೆ ನಡೆಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್‌ ಕೆ.ಆರ್‌. ರಮೇಶ್‌ಕುಮಾರ್‌, ನನಗೂ ಹಾಗೂ ಸಿದ್ದರಾಮಯ್ಯ ಅವರಿಗೆ ಏನೂ ಕೆಲಸ ಇರಲಿಲ್ಲ. ಹೀಗಾಗಿ ಲೋಕಾಭಿರಾಮವಾಗಿ ಮಾತನಾಡಿಕೊಂಡು ಕುಳಿತಿದ್ದೆವು. ಸಿ.ಟಿ. ರವಿ ಅವರು ಕೂಡ ಹಾಗೆಯೇ. ಅವರಿಗೂ ಏನೂ ಕೆಲಸ ಇರಲಿಲ್ಲ ಹಾಗಾಗಿ ಬಂದಿದ್ದರು ಎಂದರು.