ದಿನವಿಡಿ ಸಂಚಾರ ದಟ್ಟಣೆಯಿಂದ ಗಿಜಗುಡುತ್ತಿದ್ದ ಹಲವು ರಸ್ತೆಗಳು ಇಂದು ಬಿಕೋ ಎನ್ನುತ್ತಿವೆ. ಪ್ರಮುಖ ರಸ್ತೆಗಳಲ್ಲಿ ಕನ್ನಡ ಪರ ಸಂಘಟನೆಗಳ ಗುಂಪು ಬೈಕ್ ರ್ಯಾಲಿ ನಡೆಸಿದರು. ಬಂದ್ ಇದ್ದರೂ ಕೆಲವು ಐಟಿ ಕಂಪನಿಗಳು ಕೆಲಸ ನಿರ್ವಹಿಸುತ್ತಿರುವುದಕ್ಕೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು(ಸೆ.9): ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ ಖಂಡಿಸಿ ಇಂದು ಹಮ್ಮಿಕೊಂಡಿರುವ ಕರ್ನಾಟಕ ಬಂದ್ ಬಿಸಿ ರಾಜಧಾನಿಯಲ್ಲಿ ಜೋರಾಗಿದೆ. ಸಿಲಿಕಾನ್ ಸಿಟಿಯ ಹಲವು ನಗರಗಳಲ್ಲಿ ಕನ್ನಡ ಪರ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೂ ಸಣ್ಣ ಪುಟ್ಟ ಅಹಿತಕರ ಘಟನೆಗಳು ಜರುಗಿದರೂ ದೊಡ್ಡಮಟ್ಟದಲ್ಲಿ ಹಿಂಸಾಚಾರ ನಡೆದ ಬಗ್ಗೆ ದಾಖಲಾಗಿಲ್ಲ.

ದಿನವಿಡಿ ಸಂಚಾರ ದಟ್ಟಣೆಯಿಂದ ಗಿಜಗುಡುತ್ತಿದ್ದ ಹಲವು ರಸ್ತೆಗಳು ಇಂದು ಬಿಕೋ ಎನ್ನುತ್ತಿವೆ. ಪ್ರಮುಖ ರಸ್ತೆಗಳಲ್ಲಿ ಕನ್ನಡ ಪರ ಸಂಘಟನೆಗಳ ಗುಂಪು ಬೈಕ್ ರ್ಯಾಲಿ ನಡೆಸಿದರು. ಬಂದ್ ಇದ್ದರೂ ಕೆಲವು ಐಟಿ ಕಂಪನಿಗಳು ಕೆಲಸ ನಿರ್ವಹಿಸುತ್ತಿರುವುದಕ್ಕೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಚಿತ್ರರಂಗದ ನಟ,ನಟಿಯರು ಹಾಗೂ ತಾಂತ್ರಿಕ ವಲಯದ ಸಿಬ್ಬಂದಿ ಶಿವಾನಂದ ಸರ್ಕಲ್ ಬಳಿಯ ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಧರಣಿ ಹಮ್ಮಿಕೊಂಡಿದ್ದರು.

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಲವು ಕನ್ನಡ ಪರ ಸಂಘಟನೆಗಳ ಮುಖಂಡರು ಸಾವಿರಾರು ಕಾರ್ಯಕರ್ತರ ಜೊತೆಯಲ್ಲಿ ಮೆರವಣಿಗೆ ಹೊರಟು ಟೌನ್ ಹಾಲ್ ಬಳಿ ಜಮಾವಣೆಯಾಗಿದ್ದಾರೆ. ಸಿಎಂ ನಿವಾಸದ ಬಳಿಯಲ್ಲಿಯೂ ಕೆಲವು ಕಾರ್ಯಕರ್ತರು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಆದರೆ ಪೊಲೀಸರು ಅವರ ಯತ್ನವನ್ನು ತಡೆದು ಬಂಧನಕ್ಕೊಳಪಡಿಸಿದ್ದಾರೆ.