ಜಗತ್ತು ಎಷ್ಟೇ ಅಧುನಿಕತೆಯತ್ತ ಮುಖ ಮಾಡಿದ್ರು, ಕರ್ನಾಟಕದಲ್ಲಿ ಮೌಢ್ಯ ಮಾಟ ಮಂತ್ರ, ಭಾನಾಮತಿಯತಂಹ ಮೌಢ್ಯಗಳು ಮಾತ್ರ ಇನ್ನೂ ನಿಂತಿಲ್ಲ. ಕಲಬುರ್ಗಿಯಲ್ಲಿ ಭಾನಾಮತಿಯ ಹಾವಳಿ ಎಗ್ಗಿಲ್ಲದೆ ನಡೆಯುತ್ತಲೇ ಇದೆ.
ಕಲಬುರ್ಗಿ(ಅ.03): ಒಂದು ಕಡೆ ರಾಜ್ಯ ಸರ್ಕಾರ ಮಾಟ ಮಂತ್ರ ಭಾನಮತಿಯಂತಹ ಮೌಢ್ಯಗಳನ್ನ ನಿಷೇಧ ಮಾಡೋದಕ್ಕೆ ಮುಂದಾಗಿದ್ರೆ, ಕಲಬುರಗಿಯಲ್ಲಿ ಮಾತ್ರ ಭಾನಾಮತಿಯ ಹಾವಳಿ ಹೆಚ್ಚಾಗಿದೆ. ಜೇವರ್ಗಿ ತಾಲೂಕಿನ ಹಂಚಿನಾಳ ಹೆಚ್.ಎನ್ ಗ್ರಾಮದ ಕುಟುಂಬವೊಂದು ಭಾನಾಮತಿ ಕಾಟದಿಂದ ನಲುಗಿ ಹೋಗಿದೆ. ಆಸ್ತಿ ವಿಚಾರಕ್ಕೆ ಶರಣಯ್ಯ ಕುಟುಂಬದ ವಿರುದ್ಧ ಭಾನಾಮತಿ ಎಂಬ ಮೌಢ್ಯದ ಅಸ್ತ್ರವನ್ನ ಪ್ರಯೋಗ ಮಾಡಲಾಗಿದೆ.
ವಿಜಯದಶಮಿ ದಿನ ಗ್ರಾಮದ ಮುಂದೆ ಶರಣಯ್ಯ ಕುಟುಂಬದ 14 ಜನರ ಹೆಸರುಗಳನ್ನು ಕುಂಬಳಕಾಯಿ ಮೇಲೆ ಬರೆದು ಅದರ ಮೇಲೆ ತೆಂಗಿನ ಚಿಪ್ಪು ಮತ್ತು ದೀಪವಿಟ್ಟು ಅರಿಶಿಣ ಕುಂಕುಮದಿಂದ ಪೂಜೆ ಮಾಡಿ ಭಾನಾಮತಿ ಪ್ರಯೋಗಿಸಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಈ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ಪುಟ್ಟ ಪುಟ್ಟ ಮಕ್ಕಳ ಹೆಸರುಗಳನ್ನೂ ಸಹ ಕುಂಬಳಕಾಯಿ ಮೇಲೆ ಬರೆದಿರುವುದು ಕುಟುಂಬದವರಲ್ಲಿ ಆತಂಕ ಹೆಚ್ಚಿದೆ.
ನಮ್ಮ ಸಂಬಂಧಿಯೊಬ್ಬರ ಜೊತೆ ನಿವೇಶನ ವ್ಯಾಜ್ಯವಿದೆ. ಅವರೇ ಈ ಕೃತ್ಯ ನಡೆಸಿದ್ದಾರೆ ಎಂದು ಕುಟುಂಬದ ಮುಖ್ಯಸ್ಥ ಶರಣಯ್ಯ ಆರೋಪ ಮಾಡ್ತಿದ್ದಾರೆ. ಈ ಬಗ್ಗೆ ನೆಲೋಗಿ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದರೂ ಕಲಬುರಗಿಯಲ್ಲಿ ಮಾತ್ರ ಭಾನಾಮತಿಯಂತಹ ಅನಿಷ್ಟಗಳು ಎಗ್ಗಿಲ್ಲದೆ ನಡೆಯುತ್ತಲೇ ಇವೆ.
