ಕೇಳಬನ್ನಿ ಬಲೋಚ್ ವೀರರ ಕಹಾನಿ: ಅವರಿಗಾಗಿ ಮಿಡಿಯಲಿ ಕಂಬನಿ!
ಇಂದು ಬಲೂಚಿಸ್ತಾನ ಒಗ್ಗಟ್ಟು ದಿನ| ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಬಲೂಚಿಸ್ತಾನ ವೀರರು| ಮಾತೃಭೂಮಿಗಾಗಿ ಶಸ್ತ್ರ ಕೈಗೆತ್ತಿಕೊಂಡ ವೀರರ ಕಹಾನಿ| ಪಾಕಿಸ್ತಾನ ಸರ್ಕಾರ ಹಾಗೂ ಸೇನಾಪಡೆಗಳ ದೌರ್ಜನ್ಯಕ್ಕೆ ಕೊನೆಯಿಲ್ಲವೇ?| ಬಲೂಚಿಸ್ತಾನದ ಪರಿಸ್ಥಿತಿ ಕೇಳಿದರೆ ಎಂತವರ ಕಣ್ಣಲ್ಲೂ ನೀರು ಬರದಿರದು|
ಬೆಂಗಳೂರು(ಆ.14): ಇಂದು ಬಲೂಚಿಸ್ತಾನ ಒಗ್ಗಟ್ಟಿನ ದಿನ. ಪಾಕಿಸ್ತಾನದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಬಲೂಚಿಸ್ತಾನ ವೀರರ ಕುರಿತು ನಮಲ್ಲಿ ಬಹುತೇಕರಿಗೆ ಅರಿವು ಕಡಿಮೆ.
ಪಾಕಿಸ್ತಾನ ಸರ್ಕಾರ ಹಾಗೂ ಸೇನಾಪಡೆಗಳ ದೌರ್ಜ್ಯನ್ಯದ ವಿರುದ್ಧ ಸಿಡಿದೆದ್ದಿರುವ ಬಲೂಚಿ ನಾಗರಿಕರು, ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ತಮ್ಮ ರಕ್ತವನ್ನು ಹರಿಸುತ್ತಿದ್ದಾರೆ.
ಬಲೂಚಿಸ್ತಾನದಲ್ಲಿ ನಿರಂತರವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನಿ ಸೇನಾಪಡೆಗಳು, ಸರ್ಕಾರದ ಅಣತಿಯ ಮೇರೆಗೆ ನಡೆಸಿರುವ ಅಮಾನವೀಯ ಕೃತ್ಯಗಳು ಮಾನವ ನಾಗರಿಕತೆಯ ತಲೆ ತಗ್ಗಿಸಿವೆ.
ಅದರಂತೆ ಸ್ವತಂತ್ರ ನೆಲಕ್ಕಾಗಿ ಹೋರಾಡುತ್ತಿರುವ ವೀರರ ಬಗ್ಗೆ ಹಾಗೂ ಪಾಕಿಸ್ತಾನದ ದೌರ್ಜನ್ಯದ ಬಗ್ಗೆ ನಮಗೆ ಗೊತ್ತಿರದ 5 ಸಂಗತಿಗಳು ಇಲ್ಲಿವೆ.
1. ಕ್ವೆಟ್ಟಾ ಪಾಕಿಸ್ತಾನದ ಹಣ್ಣುಗಳ ಉದ್ಯಾನವನ ಎಂದೇ ಜನಜನಿತ. ಆದರೆ ಬಲೂಚಿಸ್ತಾನದ ಶೇ.63ರಷ್ಟು ಜನ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆ. ಬಹುತೇಕ ಬಲೂಚಿಸ್ತಾನಿಗಳು ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿರುವುದು ಪಾಕ್ ಸರ್ಕಾರ ಈ ಪ್ರದೇಶದ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ ಸಾಕ್ಷಿ.
2. ಬಲೂಚಿಸ್ತಾನದ ಶೇ. 85ಕ್ಕೂ ಹೆಚ್ಚು ಜನರಿಗೆ ಶುದ್ಧ ಕುಡಿಯುವ ನೀರು ದೊರೆಯವುದಿಲ್ಲ. ಅಲ್ಲದೇ ಶೇ.80ರಷ್ಟು ಮನೆಗಳಿಗೆ ವಿದ್ಯುತ್ ಸೌಲಭ್ಯವೇ ಒದಗಿಸಿಲ್ಲ.
3. ಬಲಚಿಸ್ತಾನದಲ್ಲಿ ಕೇವಲ 2 ಮೆಡಿಕಲ್ ಕಾಲೇಜ್’ಗಳು ಇದ್ದು, ಇದರಲ್ಲಿ ಒಂದು ಸರ್ಕಾರದ ಒಡೆತನದಲ್ಲಿದ್ದರೆ ಮತ್ತೊಂದು ಸೇನಾ ಒಡೆತನದಲ್ಲಿದೆ.
4. ಪಾಕಿಸ್ತಾನಕ್ಕೆ ನೈಸರ್ಗಿಕ ಅನಿಲ ಪೂರೈಸುವ ಎರಡನೇ ಬೃಹತ್ ಪ್ರದೇಶ ಬಲೂಚಿಸ್ತಾನ. ಆದರೆ ಬಲೂಚಿಸ್ತಾನಿಯರಿಗೆ ಅಡುಗೆ ಅನಿಲದ ಸೌಲಭ್ಯ ಒದಗಿಸದಿರುವುದು ಪಾಕಿಸ್ತಾನದ ಕರಾಳ ಮುಖ ಪರಿಚಯಿಸುತ್ತದೆ.
5. ಸ್ವಜನಪಕ್ಷಪಾತ ಮತ್ತು ಭ್ರಷ್ಟಾಷಾರದ ಪರಿಣಾಮ ಬಲೂಚಿಸ್ತಾನ ಪಾಕಿಸ್ತಾನ ಸರ್ಕಾರದ ಅವಗಣನೆಗೆ ಪಾತ್ರವಾಗಿದ್ದು, ಸೇನೆ ಬಲೂಚಿ ನಾಗರಿಕರ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ ಕೊನೆಯಿಲ್ಲದಾಗಿದೆ. ಇದೇ ಕಾರಣಕ್ಕೆ ಬಲೂಚಿ ವೀರರು ಸ್ವಾತಂತ್ರ್ಯಕ್ಕಾಗಿ ಹಾಗೂ ಗೌರವದ ಬದುಕಿಗಾಗಿ ಶಸ್ತ್ರ ಕೈಗೆತ್ತುಕೊಂಡಿದ್ದಾರೆ.