Asianet Suvarna News Asianet Suvarna News

ಕಾಂಗ್ರೆಸ್‌ ಪಕ್ಷದಲ್ಲಿ ಫೋರ್ಜರಿ?

ಕಾಂಗ್ರೆಸ್ ನಲ್ಲಿ ಇದೀಗ ಫೋರ್ಜರಿ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಸ್ಥಳೀಯ ಸಂಸ್ಥೆ ಚುನಾವಣೆಯ ಸುಮಾರು 14 ಕ್ಷೇತ್ರಗಳಿಗೆ ಎರಡೆರಡು ಬಿ-ಫಾರಂ ವಿತರಣೆಯಾಗಿದೆ ಎಂದು ಆರೋಪ ಮಾಡಲಾಗಿದೆ. 

B Form Forgery In Congress
Author
Bengaluru, First Published Aug 25, 2018, 9:04 AM IST

ಬೆಂಗಳೂರು : ಇಂತಹದೊಂದು ಅನುಮಾನ ಹುಟ್ಟಲು ರಾಯಚೂರು ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಸುಮಾರು 14 ಕ್ಷೇತ್ರಗಳಿಗೆ ಎರಡೆರಡು ಬಿ-ಫಾರಂ ವಿತರಣೆಯಾಗಿರುವುದು ಕಾರಣ. ಈ ಜಾದೂ ಹೇಗೆ ನಡೆಯಿತು ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಹೊತ್ತಿರುವ ಕೆಪಿಸಿಸಿ ಕಾರ್ಯದರ್ಶಿ ಅಲ್ಲಮ ಪ್ರಭು ಪಾಟೀಲ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಪತ್ರ ಬರೆದಿದ್ದಾರೆ.

ರಾಯಚೂರು ಸ್ಥಳೀಯ ಸಂಸ್ಥೆ ಚುನಾವಣೆ ಉಸ್ತುವಾರಿ ಹೊಣೆ ಹೊತ್ತಿರುವ ಅಲ್ಲಮ ಪ್ರಭು ಪಾಟೀಲ, ಸಂಸದ ಬಿ.ವಿ.ನಾಯಕ್‌, ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ ಹಾಗೂ ಸ್ಥಳೀಯ ನಾಯಕರ ತಂಡವು ರಾಯಚೂರಿನಲ್ಲಿ ಸತತ ಸಭೆ ನಡೆಸಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಣಕ್ಕಿಳಿಸಲು 35 ಮಂದಿಯನ್ನು ಗುರುತಿಸಿ ಅವರಿಗೆ ಎ ಹಾಗೂ ಬಿ ಫಾಮ್‌ರ್‍ ನಿತರಿಸಲು ಜಿಲ್ಲಾಧ್ಯಕ್ಷರಿಗೆ ಹೊಣೆ ನೀಡಿ ಬಂದಿತ್ತು. ಈ ಹೊಣೆ ನಿರ್ವಹಿಸಲು ಜಿಲ್ಲಾಧ್ಯಕ್ಷರಿಗೆ ಕೆಪಿಸಿಸಿ ಅಧ್ಯಕ್ಷರ ಸಹಿ ಹೊಂದಿರುವ 35 ಬಿ-ಫಾರಂಗಳು ಮತ್ತು ಒಂದು ವೇಳೆ ಬಿ-ಫಾರಂ ತುಂಬುವಾಗ ತಪ್ಪಾದರೆ ಇರಲಿ ಎಂದು ಐದು ಬಿ-ಫಾರಂಗಳನ್ನು ಹೆಚ್ಚುವರಿಯಾಗಿ ನೀಡಿತ್ತು.

ಅದರಂತೆ ಜಿಲ್ಲಾಧ್ಯಕ್ಷರು ಅಲ್ಲಮ ಪ್ರಭು ನೇತೃತ್ವದ ತಂಡ ಗುರುತಿಸಿದ್ದ 35 ಮಂದಿಗೆ ಬಿ-ಫಾರಂ ಸಹ ವಿತರಿಸಿತ್ತು. ಆದರೆ, ಸ್ಥಳೀಯ ಸಂಸ್ಥೆಯ 35 ಸ್ಥಾನಗಳ ಪೈಕಿ 14 ಸ್ಥಾನಗಳಲ್ಲಿ ಅಧಿಕೃತ ಅಭ್ಯರ್ಥಿಯ ಜತೆಗೆ ಪಕ್ಷದ ಇತರೆ 14 ಮಂದಿ ಕಾರ್ಯಕರ್ತರು ಕೂಡ ‘ಅಧಿಕೃತ’ ಬಿ-ಫಾರಂ ಪಡೆದುಕೊಂಡುಬಿಟ್ಟಿದ್ದಾರೆ. ಅಲ್ಲದೆ, ಅದನ್ನು ನಾಮಪತ್ರದೊಂದಿಗೆ ಲಗತ್ತಿಸಿ ಸಲ್ಲಿಕೆ ಮಾಡಿದ್ದು ಗೊಂದಲ ನಿರ್ಮಾಣ ಮಾಡಿತ್ತು. ಇದರಿಂದಾಗಿ ಕಾಂಗ್ರೆಸ್‌ ಮತ್ತೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿ, ಇವರನ್ನು ಮಾತ್ರ ಪಕ್ಷದ ಅಧಿಕೃತ ಅಭ್ಯರ್ಥಿಗಳು ಎಂದು ಪರಿಗಣಿಸುವಂತೆ ಮಾಡುವ ಹಾಗೂ ಸಿ-ಫಾರಂ ನೀಡಬೇಕಾದ ಪ್ರಹಸನ ನಡೆಸಬೇಕಾಗಿ ಬಂತು.

ಆದರೆ, ಕೆಪಿಸಿಸಿಯೇ ನಿಯೋಜಿಸಿದ ಅಧಿತೃತ ಉಸ್ತುವಾರಿ ನೇತೃತ್ವದ ತಂಡವು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಬಿ-ಫಾರಂ ವಿತರಿಸಿದ ನಂತರ ಮತ್ತೆ 14 ಬಿ-ಫಾರಂಗಳು ದೊರಕಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಯಚೂರು ಉಸ್ತುವಾರಿ ಅಲ್ಲಮ ಪ್ರಭು ಪಾಟೀಲ ಅವರು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರವೊಂದನ್ನು ಬರೆದಿದ್ದು, ಹೆಚ್ಚುವರಿ ನಾಮಪತ್ರ ಬಿಡುಗಡೆಯಾಗಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಅದರಂತೆ ಕೆಪಿಸಿಸಿಯು ತನಿಖೆ ಆರಂಭಿಸಿದೆ ಎಂದು ಮೂಲಗಳು ಹೇಳಿವೆ.

ಅಧಿಕೃತ ಅಭ್ಯರ್ಥಿಗಳಲ್ಲದ 14 ಮಂದಿಗೆ ಬಿ-ಫಾರಂ ವಿತರಣೆಯಾಗಿದೆ. ಈ ಹೆಚ್ಚುವರಿ ಬಿ-ಫಾರಂಗಳು ಸ್ಪರ್ಧೆ ಆಕಾಂಕ್ಷಿಗಳಿಗೆ ದೊರಕಿದ್ದು ಹೇಗೆ ಎಂಬುದು ಪ್ರಶ್ನೆ. ಕೆಪಿಸಿಸಿಯು ಆಕಾಂಕ್ಷಿಗಳನ್ನು ಕರೆಸಿ ಅವರಿಗೆ ಈ ಬಿ-ಫಾರಂ ನೀಡಿದ್ದು ಯಾರು ಎಂದು ತನಿಖೆ ಮಾಡಿದರೆ ಸತ್ಯಾಂಶ ಹೊರಬೀಳುತ್ತದೆ. ಇಂತಹ ಬೆಳವಣಿಗೆ ರಾಯಚೂರಿನಲ್ಲಿ ಇದೇ ಮೊದಲೇನೂ ಅಲ್ಲ. ಈ ಹಿಂದೆ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲೂ ಇದೇ ರೀತಿಯ ಬೆಳವಣಿಗೆ ನಡೆದಿತ್ತು.

- ಅಲ್ಲಮ ಪ್ರಭು ಪಾಟೀಲ್‌, ಕಾರ್ಯದರ್ಶಿ, ಕೆಪಿಸಿಸಿ

Follow Us:
Download App:
  • android
  • ios