ಇಂದು ಕೈವಶವಾಗುತ್ತಿದ್ದಾರೆ ಅಶೋಕ್ ಖೇಣಿ
ಮತ್ತೊಬ್ಬ ಶಾಸಕ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದು, ಕರ್ನಾಟಕ ಮಕ್ಕಳ ಪಕ್ಷದ ಸಂಸ್ಥಾಪಕ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಅವರು ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ.
ಬೆಂಗಳೂರು : ಮತ್ತೊಬ್ಬ ಶಾಸಕ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದು, ಕರ್ನಾಟಕ ಮಕ್ಕಳ ಪಕ್ಷದ ಸಂಸ್ಥಾಪಕ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಅವರು ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ.
ಜೆಡಿಎಸ್ ಬಂಡಾಯ ಶಾಸಕರ ಹೊರತಾಗಿ ಇತ್ತೀಚೆಗಷ್ಟೇ ಬಿಜೆಪಿಯ ಆನಂದ್ಸಿಂಗ್, ಪಕ್ಷೇತರ ಶಾಸಕ ನಾಗೇಂದ್ರ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಅಶೋಕ್ ಖೇಣಿ ಸೇರ್ಪಡೆಯಾಗಲಿದ್ದಾರೆ.
ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆದ ಅಶೋಕ್ ಖೇಣಿ ಕರ್ನಾಟಕ ಮಕ್ಕಳ ಪಕ್ಷ ಸ್ಥಾಪಿಸಿ 2013ರ ಚುನಾವಣೆಯಲ್ಲಿ ಬೀದರ್ನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇದೀಗ ಕಾಂಗ್ರೆಸ್ ಪರ ರಾಜ್ಯದಲ್ಲಿರುವ ಅಲೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಲು ತೀವ್ರ ಕಸರತ್ತು ನಡೆಸಿದ್ದರು. ಕಾಂಗ್ರೆಸ್ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್ ನೀಡಲು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೂ ಮೊದಲು ಕಾಂಗ್ರೆಸ್ ಅಥವಾ ಬಿಜೆಪಿ ಎರಡರಲ್ಲಿ ಯಾವ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಬಿಜೆಪಿಗೆ ಸೇರಲು ತೀವ್ರ ಕಸರತ್ತು ನಡೆಸಿದರಾದರೂ ಟಿಕೆಟ್ ಬಗ್ಗೆ ಸ್ಪಷ್ಟಭರವಸೆ ದೊರೆತಿರಲಿಲ್ಲ ಎನ್ನಲಾಗಿದೆ.