ಇಂದು ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ : 12 ಸಾಧಕರಿಗೆ ಕನ್ನಡಪ್ರಭ-ಸುವರ್ಣನ್ಯೂಸ್ ನೀಡುವ ಪ್ರಶಸ್ತಿ
ತುಮಕೂರಿನ ಯಶೋದಾ ಹಾಗೂ ಬಸವರಾಜು, ಬೆಂಗಳೂರಿನ ವಿಜಯ್ ನಿಶಾಂತ್, ಹಾವೇರಿಯ ಮೂಕಪ್ಪ ಪೂಜಾರ್, ಮೈಸೂರಿನ ವಿಜಯಾ ಸಿಂಧುವಳ್ಳಿ, ದಕ್ಷಿಣ ಕನ್ನಡದ ರಾಯಿ ನಾರಾಯಣ ನಾಯಕ್, ಮಳವಳ್ಳಿಯ ಕಾಮೇಗೌಡ, ಉಡುಪಿಯ ಹೆರ್ಗೆ ಗೋಪಾಲ ಭಟ್, ಹುಬ್ಬಳ್ಳಿಯ ಶೈಲಾ ದೊಡ್ಡಮನಿ, ಜಗದೀಶ್ ಹಿರೇಮಠ, ಮಡಿಕೇರಿಯ ಐಚೆಟ್ಟೀರ ಪೊನ್ನಪ್ಪ ಹಾಗೂ ಬೆಳಗಾವಿಯ ಮಹೇಶ್ ಜಾಧವ್ ಅವರು ಅಸಾಮಾನ್ಯ ಕನ್ನಡಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರು(ಮಾ.30): ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಕಳೆದ ಮೂರು ವರ್ಷಗಳಿಂದ ನೀಡುತ್ತಿರುವ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಟೌನ್ಹಾಲ್ನಲ್ಲಿ ನಡೆಯಲಿದೆ. ಖ್ಯಾತ ನಟ, ಅಭಿನಯ ಚಕ್ರವರ್ತಿ ಸುದೀಪ್ ಈ ಪ್ರಶಸ್ತಿಗಳನ್ನು ವಿಜೇತರಿಗೆ ಪ್ರದಾನ ಮಾಡಲಿದ್ದಾರೆ.
2017ನೇ ಸಾಲಿನ ಪ್ರಶಸ್ತಿ ಇದಾಗಿದ್ದು, 14 ಅಸಾಮಾನ್ಯ ಕನ್ನಡಿಗರಿಗೆ ಪ್ರಶಸ್ತಿ ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳ ಪೈಕಿ ವಿಜೇತರನ್ನು ಚಲನಚಿತ್ರ ನಟಿ ಹಾಗೂ ವಿಧಾನಪರಿಷತ್ ಸದಸ್ಯೆ ತಾರಾ, ಖ್ಯಾತ ಕವಿ ದೊಡ್ಡರಂಗೇಗೌಡ ಹಾಗೂ ನಟ ಸಂಚಾರಿ ವಿಜಯ್ ಸದಸ್ಯರಾಗಿದ್ದ ತೀರ್ಪುಗಾರರ ತಂಡವು ಕಳೆದ ಗುರುವಾರ ಆಯ್ಕೆ ಮಾಡಿತ್ತು.
ಈ ಸಲದ ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ: ತುಮಕೂರಿನ ಯಶೋದಾ ಹಾಗೂ ಬಸವರಾಜು, ಬೆಂಗಳೂರಿನ ವಿಜಯ್ ನಿಶಾಂತ್, ಹಾವೇರಿಯ ಮೂಕಪ್ಪ ಪೂಜಾರ್, ಮೈಸೂರಿನ ವಿಜಯಾ ಸಿಂಧುವಳ್ಳಿ, ದಕ್ಷಿಣ ಕನ್ನಡದ ರಾಯಿ ನಾರಾಯಣ ನಾಯಕ್, ಮಳವಳ್ಳಿಯ ಕಾಮೇಗೌಡ, ಉಡುಪಿಯ ಹೆರ್ಗೆ ಗೋಪಾಲ ಭಟ್, ಹುಬ್ಬಳ್ಳಿಯ ಶೈಲಾ ದೊಡ್ಡಮನಿ, ಜಗದೀಶ್ ಹಿರೇಮಠ, ಮಡಿಕೇರಿಯ ಐಚೆಟ್ಟೀರ ಪೊನ್ನಪ್ಪ ಹಾಗೂ ಬೆಳಗಾವಿಯ ಮಹೇಶ್ ಜಾಧವ್ ಅವರು ಅಸಾಮಾನ್ಯ ಕನ್ನಡಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಕೊಪ್ಪಳದ ರಮೇಶ್ ಬಳೂಟಗಿ ಮತ್ತು ತಂಡ ಹಾಗೂ ಕುಂದಗೋಳದ ಹನುಮನಹಳ್ಳಿಯ ಯಲ್ಲಪ್ಪ ಮತ್ತು ತಂಡ ಕೂಡ ಪ್ರಶಸ್ತಿಗೆ ಪಾತ್ರವಾಗಲಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೀರ್ಪುಗಾರರಾದ ತಾರಾ, ಸಂಚಾರಿ ವಿಜಯ್, ದೊಡ್ಡರಂಗೇಗೌಡ ಹಾಗೂ ಚಿತ್ರರಂಗದ ಖ್ಯಾತ ನಟ-ನಟಿಯರು ಭಾಗವಹಿಸಲಿದ್ದಾರೆ.