ಯಾವತ್ತಿದ್ರೂ ಇದು ಮಹಾರಾಷ್ಟ್ರಕ್ಕೆ ಸೇರಿದ್ದು; ಬೆಳಗಾವಿಯಲ್ಲಿ ಎಂಇಎಸ್ ಶಾಸಕನ ಉದ್ಧಟತನ
'ಕೆಲವೇ ದಿನಗಳಲ್ಲಿ ಗಡಿ ವಿವಾದ ಇತ್ಯರ್ಥವಾಗಿ ನಾವು ಮಹಾರಾಷ್ಟ್ರಕ್ಕೆ ಹೋಗೇ ಹೋಗ್ತೀವಿ...' ಕೆಡಿಪಿ ಸಭೆಯಲ್ಲಿ ಎಂಇಎಸ್ ಶಾಸಕ ಅರವಿಂದ್ ಪಾಟೀಲ ಉದ್ಧಟತನ; ತಿನ್ನೋದು ಕರ್ನಾಟಕದ ಅನ್ನ.. ಬಾಯಲ್ಲಿ ಮಹಾರಾಷ್ಟ್ರ ಜಪ;
ಬೆಳಗಾವಿ: ಎಂಇಎಸ್'ನ ನಾಡದ್ರೋಹಿ ಹೇಳಿಕೆಗಳು ಮುಂದುವರಿಯುತ್ತಲೇ ಇವೆ. ನಿನ್ನೆ ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲೂ ಎಂಇಎಸ್ ಜನನಾಯಕರ ಉದ್ಧಟತನದ ಪ್ರದರ್ಶನವಾಯ್ತು. ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಖಾನಾಪುರ ಎಂಇಎಸ್ ಶಾಸಕ ಅರವಿಂದ್ ಪಾಟೀಲ್, "ನಾವು ಕರ್ನಾಟಕದಲ್ಲಿ ಇರೋಲ್ಲ.. ಮಹಾರಾಷ್ಟ್ರಕ್ಕೆ ಸೇರೋದು ಪಕ್ಕಾ" ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು.
ಜನರ ಸಮಸ್ಯೆ ಬಗ್ಗೆ ಚರ್ಚಿಸೋದು ಬಿಟ್ಟು ಜನನಾಯಕ ಪಾಟೀಲ್ ಸಾಹೇಬ್ರು ನಾಡದ್ರೋಹಿ ಹೇಳಿಕೆ ನೀಡಿ ಉದ್ಧಟತನ ತೋರಿದರು. ಆದರೆ ಇದಕ್ಕೆ ಸಚಿವ ರಮೇಶ್ ಜಾರಕಿಹೊಳಿ, "ನಾವು ಮಹಾಜನ ಆಯೋಗದ ವರದಿಯನ್ನು ಒಪ್ಪಿದ್ದೇವೆ. ನೀವೇನೇ ಹೊಸದು ಮಾಡಿದ್ರು ನಾವ್ ಒಪ್ಪಲ್ಲ" ಎಂದರು.
ಇನ್ನು, ಅಥಣಿ ಶಾಸಕ ಲಕ್ಷ್ಮಣ ಸವದಿ ಕೂಡ ಸಚಿವರ ಮಾತಿಗೆ ದನಿ ಗೂಡಿಸಿ ಖಾನಾಪುರ ಎಂದೆಂದು ಕರ್ನಾಟಕದಲ್ಲೇ ಉಳಿಯುವಂತದ್ದು ಎಂದು ಹೇಳಿದರು.
ಒಟ್ಟಿನಲ್ಲಿ, ಬೆಳಗಾವಿಯಲ್ಲಿ ಎಂಇಎಸ್ ನಾಯಕರ ಉದ್ಧಟತನದ ಹೇಳಿಕೆ ನಿರಂತರವಾಗಿ ನಡೆಯುತ್ತಲೇ ಇದೆ. ಕೆಡಿಪಿ ಸಭೆಯಲ್ಲಿ ಅರವಿಂದ್ ಪಾಟೀಲ್ ನೀಡಿರುವ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ .
- ಮಂಜುನಾಥ್ ಎಚ್.ಪಾಟೀಲ್, ಸುವರ್ಣ ನ್ಯೂಸ್, ಬೆಳಗಾವಿ