ಬಿಜೆಪಿ ಸರ್ಕಾರದಿಂದ ಮಹತ್ವದ ನಿರ್ಧಾರ
ಬಿಜೆಪಿ ಸರ್ಕಾರವೀಗ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಅನೇಕ ವರ್ಷಗಳಿಂದ ಇದ್ದ ಈ ಕಾಯ್ದೆಗೆ ಫುಲ್ ಸ್ಟಾಪ್ ಇಡಲು ತೀರ್ಮಾನ ಮಾಡಲಾಗಿದೆ.
ಇಟಾನಗರ: ಜಾತ್ಯತೀತತೆಯನ್ನು ಎತ್ತಿ ಹಿಡಿಯುವ ಸಲುವಾಗಿ 40 ವರ್ಷಗಳಷ್ಟು ಹಳೆಯದಾದ ಮತಾಂತರ ತಡೆ ಕಾಯ್ದೆಯನ್ನು ಹಿಂಪಡೆಯಲು ಅರುಣಾಚಲ ಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಮತಾಂತರ ವಿರೋಧಿ ನಿಲುವನ್ನು ದೇಶಮಟ್ಟದಲ್ಲಿ ಬಿಜೆಪಿ ಹೊಂದಿದ್ದರೂ ಅರುಣಾಚಲದಲ್ಲಿ ಪಕ್ಷ ವ್ಯತಿರಿಕ್ತ ನಿಲುವು ತಳೆದಿದ್ದು ಅಚ್ಚರಿಗೆ ಕಾರಣವಾಗಿದೆ.
ಮತಾಂತರ ತಡೆಯುವ ಉದ್ದೇಶದಿಂದ 1978ರಲ್ಲಿ ಜಾರಿಗೊಂಡಿದ್ದ ಮತಾಂತರ ತಡೆ ಕಾನೂನು ಅರುಣಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಪೆಮಾ ಖಂಡು ಹೇಳಿದ್ದಾರೆ. ಅರುಣಾಚಲ ಪ್ರದೇಶ ಕೆಥೋಲಿಕ್ ಅಸೋಸಿಯೇಶನ್ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
ಮತಾಂತರ ತಡೆ ಕಾನೂನು ಜಾತ್ಯತೀತತೆಯ ಮೌಲ್ಯವನ್ನು ಕುಗ್ಗಿಸುತ್ತದೆ ಮತ್ತು ಬಹುಶಃ ಕ್ರೈಸ್ತರನ್ನು ಗುರಿಯಾಗಿಸುತ್ತದೆ. ಹೀಗಾಗಿ ಮುಂದಿನ ಅಧಿವೇಶನದಲ್ಲಿ ಅದನ್ನು ಹಿಂಪಡೆಯಲು ಕಾನೂನು ರೂಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅರುಣಾಚಲದಲ್ಲಿ ಹೆಚ್ಚಿನ ಸಂಖ್ಯೆಯ ಕ್ರೈಸ್ತರಿದ್ದಾರೆ.