ಆರ್ಥಿಕ ನೀತಿಗಳ ಇನ್ನಷ್ಟು ಉದಾರೀಕರಣದ ಸೂಚನೆ ನೀಡಿದ ಜೇಟ್ಲಿ
ಆರ್ಥಿಕ ನೀತಿಗಳ ಉದಾರೀಕರಣದ ಮೂಲಕ ವಿದೇಶಿ ಹೂಡಿಕೆಯ ಪ್ರಮಾಣವು ಹೆಚ್ಚಾಗುವುದೆಂಬ ವಿಶ್ವಾಸವನ್ನು ಹಣಕಾಸು ಸಚಿವ ರುಣ್ ಜೇಟ್ಲಿ ವ್ಯಕ್ತಪಡಿಸಿದ್ದಾರೆ.
ಮುಂಬೈ (ಅ.14): ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶದ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಆರ್ಥಿಕ ನೀತಿಗಳನ್ನು ಇನ್ನಷ್ಟು ಉದಾರೀಕರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸೂಚನೆ ನೀಡಿದ್ದಾರೆ.
ಹೆಚ್ಚೆಚ್ಚು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ತೆರಿಗೆ ನೀತಿಗಳು ಹಾಗೂ ಕ್ರಮಗಳನ್ನು ಚರ್ಚಿಸಲು ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಬ್ರಿಕ್ಸ್ ದೇಶದ ತಜ್ಞರನ್ನು ಉದ್ದೇಶಿಸಿ ಮಾತನಾಡಿದ ಜೇಟ್ಲಿ, ಸಾರ್ವಜನಿಕ ಹೂಡಿಕೆಯು ಭಾರತದ ಪ್ರಗತಿಯಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ಆರ್ಥಿಕ ನೀತಿಗಳ ಉದಾರೀಕರಣದ ಮೂಲಕ ವಿದೇಶಿ ಹೂಡಿಕೆಯ ಪ್ರಮಾಣವು ಹೆಚ್ಚಾಗುವುದೆಂಬ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
ಮುಕ್ತ ಮಾರುಕಟ್ಟೆ ಬಗ್ಗೆ ಇರುವ ಆತಂಕಗಳು ಅಮೆರಿಕಾ ಚುನಾವಣೆಯ ಬಳಿಕ ಕಡಿಮೆಯಾಗಲಿದೆ ಎಂಬ ವಿಶ್ವಾಸವನ್ನು ಜೇಟ್ಲಿ ವ್ಯಕ್ತಡಿಸಿದ್ದಾರೆ.