ಮತ್ತೆ ಪುಲ್ವಾಮ ರೀತಿ ದಾಳಿ: ಭಾರತಕ್ಕೆ ಪಾಕ್ ಬೆದರಿಕೆ!
ಹತಾಶ ಪಾಕ್ನಿಂದ ಮತ್ತೆ ಪುಲ್ವಾಮ ದಾಳಿ ಮಾದರಿ ಬೆದರಿಕೆ| ದಾಳಿ ನಡೆದರೆ ನಮ್ಮನ್ನು ದೂರಬೇಡಿ ಎಂದು ಇಮ್ರಾನ್ ಉದ್ಧಟತನ| ಕಾಶ್ಮೀರದ ಕಡೆ ಒಮ್ಮೆ ನೋಡಿ ಎಂದು ಜಾಗತಿಕ ಸಮುದಾಯಕ್ಕೆ ಅಂಗಲಾಚಿದ ಪಾಕ್
ಇಸ್ಲಮಾಬಾದ್[ಆ.07]: 370ನೇ ವಿಧಿ ರದ್ದಾದ ಬಳಿಕ ಹತಾಶೆಗೊಳಗಾಗಿರುವ ಪಾಕಿಸ್ತಾನ, ಭಾರತದ ಇಂಥ ನಿರ್ಧಾರ, ಮತ್ತೊಂದು ಪುಲ್ವಾಮ ಮಾದರಿ ದಾಳಿಗೆ ಕಾರಣವಾಗಬಹುದು ಎಂದು ಬೆದರಿಕೆ ಹಾಕಿದ್ದಾರೆ.
ಕಾಶ್ಮೀರ ವಿಚಾರ ಸಂಬಂಧ ಆಯೋಜನೆಗೊಂಡಿದ್ದ ಸಂಸತ್ತಿನ ತುರ್ತು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಇಮ್ರಾನ್, ಭಾರತದ ಈ ನಡೆಯಿಂದಾಗಿ ಯುದ್ಧ ವಾತಾವರಣ ಸೃಷ್ಟಿಯಾಗಿದ್ದು, ಇದರಿಂದ ಪುಲ್ವಾಮ ಮಾದರಿ ದಾಳಿ ಸಂಭವಿಸಿದ್ರೂ ಅಚ್ಚರಿಯಿಲ್ಲ. ಇದಕ್ಕೆ ನಮ್ಮನ್ನು ದೂರಬಾರದು. ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವಿನ ತಿಕ್ಕಾಟದಿಂದ ಕೇವಲ ಭಾರತ- ಪಾಕ್ ಮಾತ್ರವಲ್ಲ, ಇಡೀ ಜಗತ್ತು ಇದರಿಂದ ತೊಂದರೆ ಅನುಭವಿಸುತ್ತದೆ. ಇದು ನಮ್ಮ ಅಣ್ವಸ್ತ್ರ ಬೆದರಿಕೆಯಲ್ಲ. ನಮ್ಮ ಮೇಲೆ ದಾಳಿ ಮಾಡಿದರೆ ನಾವು ಪ್ರತಿದಾಳಿ ಮಾಡುತ್ತೇವೆ. ಇದರಿಂದ ಯುದ್ಧ ಸನ್ನಿವೇಶ ಸೃಷ್ಟಿಯಾಗುತ್ತದೆ. ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ. ಯುದ್ಧ ನಡೆದರೆ ಇಡೀ ಪ್ರಪಂಚಕ್ಕೆ ತೊಂದರೆಯಾಗುತ್ತದೆ ಎಂದು ಪರೋಕ್ಷವಾಗಿ ಯುದ್ಧದ ಮುನ್ಸೂಚನೆ ನೀಡಿದ್ದಾರೆ.
ಜನಾಂಗೀಯ ಸಿದ್ಧಾಂತದ ಮೂಲಕ ಕಾಶ್ಮೀರವನ್ನು ಭಾರತ ಒಡೆದು ಹಾಕಿದ್ದು ಇದು ಮಹಾತ್ಮಾ ಗಾಂಧಿಯವರ ತತ್ವಗಳಿಗೆ ವಿರುದ್ಧವಾಗಿದೆ. ಭಾರತದ ಈ ನಿಲುವನ್ನು ನಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಶ್ನೆ ಮಾಡುತ್ತೇವೆ. ಜಾಗತಿಕ ಸಮುದಾಯ ಕಾಶ್ಮೀರದ ಪ್ರಸಕ್ತ ಸನ್ನಿವೇಶದ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ನಾವು ನಮ್ಮ ಎಲ್ಲಾ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದಕ್ಕೆ ಬಯಸಿದ್ದು, ಭಾರತ ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ನಾನು ಭಾರತದ ಪ್ರಧಾನಿಯೊಂದಿಗೆ ನಾನು ಮಾತುಕತೆ ನಡೆಸಿದಾಗ ಕಾಶ್ಮೀರದಲ್ಲಿ ಉಪಟಳ ನೀಡುತ್ತಿರುವ ಭಯೋತ್ಪಾದಕರನ್ನು ನಿಯಂತ್ರಿಸುವ ಬಗ್ಗೆ ಮಾತು ಕೊಟ್ಟಿದ್ದೆ. ಆದರೆ ಅವರು ನಮ್ಮ ಮೇಲೆ ದಾಳಿ ಮಾಡಿದರು. ಮಾತುಕತೆ ಕರೆದರೂ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ಸದನದಲ್ಲಿ ಅಳಲು ತೋಡಿಕೊಂಡರು.