ಬಿಎಸ್​ವೈ ಡಿನೋಟಿಫಿಕೇಶನ್ ಪ್ರಕರಣ ದಿನದಿಂದ ದಿನಕ್ಕೆ ರೋಚಕ ಘಟ್ಟ ತಲುಪುತ್ತಿದೆ. ಎಸಿಬಿ ತನಿಖೆ ವೇಳೆ, ಸಾಕಷ್ಟು ಸತ್ಯಾಂಶಗಳು ಬೆಳಕಿಗೆ ಬರುತ್ತಿವೆ. ಶಿವರಾಮ ಕಾರಂತ್​ ಬಡಾವಣೆಯ ಉರುಳು ಬಿಎಸ್​ವೈ ಪಾಲಿಗೆ ಮುಳುವಾಗಲಿದೀಯಾ ಅನ್ನುವ ಪ್ರಶ್ನೆ ಕಾಡುತ್ತಿದೆ. ಇನ್ನೊಂದೆಡೆ ರಾಜ್ಯ ಬಿಜೆಪಿ ನಾಯಕರು ಒಗ್ಗಟ್ಟಿನಿಂದ ಬಿಎಸ್​ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ.

ಬೆಂಗಳೂರು(ಆ.22): ಬಿಎಸ್‌ವೈ ವಿರುದ್ಧದ ಶಿವರಾಮ ಕಾರಂತ ಬಡಾವಣೆಯ ಡಿ ನೋಟಿಫಿಕೇಶನ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಬಿಎಸ್​ವೈ, ಕೆಎಎಸ್​ ಅಧಿಕಾರಿ ಬಸವರಾಜೇಂದ್ರ ಸೇರಿ ಐವರ ವಿರುದ್ದ ಎಫ್​ಐಆರ್ ದಾಖಲಿಸಿಕೊಂಡಿರುವ ಎಸಿಬಿ ತನಿಖೆ ಮುಂದುವರೆಸಿದ್ದು ಸ್ಫೋಟಕ ಮಾಹಿತಿ ಹೊರತೆಗೆಯುತ್ತಿದ್ದಾರೆ. ಇದೀಗ ಈ ಕೇಸಿನ ಪ್ರಧಾನ ಸೂತ್ರದಾರರೊಬ್ಬರ ಅಸ್ತಿತ್ವವನ್ನೇ ಬಯಲಿಗೆ ತಂದಿದ್ದಾರೆ. 

Add Asianetnews Kannada as a Preferred SourcegooglePreferred

ಅರ್ಜಿದಾರರೇನಕಲಿನಾ..?

ಶಿವರಾಮ್​ ಕಾರಂತ್ ಬಡಾವಣೆಯಲ್ಲಿನ ಮೂರು ಎಕರೆ 6 ಗುಂಟೆ ಜಮೀನನ್ನ ಡಿ ನೋಟಿಫಿಕೇಶನ್ ಮಾಡುವ ಹಂತದಲ್ಲಿ ಜಮೀನಿನ ಪರವಾಗಿ ಆಶಾ ಪರದೇಶಿ ಎಂಬುವವರು ತಕರಾರು ಅರ್ಜಿ ಸಲ್ಲಿಸಿದ್ರು. ಆಶಾ ಪರದೇಶಿ ಸಲ್ಲಿಸಿದ್ದ ಅರ್ಜಿಗೆ ಸ್ಪಷ್ಟೀಕರಣ ಕೊಟ್ಟ, ಬಿಡಿಎ ಅಧಿಕಾರಿ ಬಸವರಾಜೇಂದ್ರ ಸಂಬಂಧಪಟ್ಟ ಜಮೀನನ್ನ ಡಿ ನೋಟಿಫಿಕೇಶನ್ ಮಾಡಲಾಗಿದೆ ಎಂದು ನಿರ್ದೆಶಿಸುವ ಹಿಂಬರಹ ಪತ್ರವನ್ನ ಆಶಾ ಪರದೇಶಿಗೆ ನೀಡಿದ್ದಾರೆ. ಎಸಿಬಿ ತನಿಖೆ ವೇಳೆ, ಬಸವರಾಜೇಂದ್ರ ಅವರು ಡಿ ನೋಟಿಫಿಕೇಶನ್ ಮಾಡಿರುವ ಬಗ್ಗೆ ಸಾಕ್ಷಾಧಾರಗಳನ್ನ ಎಸಿಬಿ ಸಂಗ್ರಹಿಸಿದೆ. ಆದ್ರೆ ದೂರು ಅರ್ಜಿ ಸಲ್ಲಿಸಿದ್ದ ಆಶಾ ಪರದೇಶಿ ಅವರ ಎನ್ಕೈರಿಗೆ ಮುಂದಾದಾಗ, ಆಶಾ ಪರದೇಶಿ ಎಂಬ ಮಹಿಳೆಯೇ ಇಲ್ಲ ಎಂಬುದು ಮೇಲ್ನೋಟಕ್ಕೆ ಅಧಿಕಾರಿಗಳಿಗೆ ಗೊತ್ತಾಗಿದೆ.

ಯಡಿಯೂರಪ್ಪಗೆ ತಿರುಗೇಟು ನೀಡಲು ಸರ್ಕಾರ ಸಜ್ಜು

ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ ವಿರುದ್ಧ ಎಸಿಬಿ ದಾಖಲಿಸಿರುವ ಎಫ್​ಐಆರ್​ನ ಹಿಂದೆ ರಾಜಕೀಯ ಅಡಗಿದೆ. ಎಸಿಬಿಯನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಮುಖಂಡರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಈ ಪ್ರಕರಣದಲ್ಲಿ ಹೈಕೋರ್ಟ್​ನಲ್ಲಿ ಸಮರ್ಥವಾಗಿ ವಾದ ಮಾಡ್ಲಿಕ್ಕೆ ರಾಜ್ಯದ ಮಾಜಿ ಅಡ್ವೋಕೇಟ್​ ಜನರಲ್​ ಸಿಎಂ ಆಪ್ತ ಪ್ರೊ.ರವಿವರ್ಮಕುಮಾರ್​ ಮತ್ತು ಸೀನಿಯರ್​ ಕೌನ್ಸಿಲ್​ಗಳನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸ್ಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಎಸಿಬಿ ಎಡಿಜಿಪಿ ಎಂ.ಎನ್.ರೆಡ್ಡಿ ಪತ್ರ ಬರೆದಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಬಿ.ಎಸ್. ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ. ಪ್ರಕರಣ ರದ್ದು ಕೋರಿ, ಹೈಕೋರ್ಟ್ ಮೊರೆ ಹೋಗಿರುವ ಬಿಎಸ್​ವೈ ಇಂದು ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ್ರೂ ಅಚ್ಚರಿ ಪಡಬೇಕಿಲ್ಲ.