ಇನ್ನಷ್ಟು ವೈಭವೋಪೇತವಾಗಲಿದೆ ಸ್ವರ್ಣ ಮಂದಿರ
-ಸ್ವರ್ಣ ಮಂದಿರಕ್ಕೆ 160 ಕೇಜಿ ಚಿನ್ನದ ಲೇಪ
- ಹೊಸದಾಗಿ 50 ಕೋಟಿ ರು. ಮೌಲ್ಯದ ಚಿನ್ನದಿಂದ ದೇಗುಲಕ್ಕೆ ಲೇಪ
-ಇನ್ನಷ್ಟು ವೈಭವೋಪೇತವಾಗಿದೆ ಗೋಲ್ಡನ್ ಟೆಂಪಲ್
ಅಮೃತಸರ (ಜು. 17): ಸಿಖ್ಖರ ಇಲ್ಲಿನ ವಿಶ್ವಪ್ರಸಿದ್ಧ ಸ್ವರ್ಣಮಂದಿರ ಇನ್ನು ಮುಂದೆ ಇನ್ನಷ್ಟು ಚಿನ್ನದಿಂದ ಫಳಫಳಿಸಲಿದೆ.
ಸ್ವರ್ಣಮಂದಿರ ಪ್ರವೇಶ ದ್ವಾರದ ನಾಲ್ಕೂ ಗುಮ್ಮಟಗಳಿಗೆ ಈಗ 160 ಕೇಜಿ ಚಿನ್ನ ಲೇಪಿಸಲಾಗುತ್ತಿದ್ದು, ಮಂದಿರಕ್ಕೆ ಇನ್ನಷ್ಟು ಹೊಳಪು ಸಿಗಲಿದೆ. ಒಟ್ಟು ಸುಮಾರು 50 ಕೋಟಿ ರುಪಾಯಿ ಮೌಲ್ಯದ ಚಿನ್ನ ಇದಾಗಿದೆ. ಈ ದ್ವಾರದ ಗುಮ್ಮಟಗಳು ‘ಮಂದಿರಕ್ಕೆ ಸರ್ವರಿಗೂ ಪ್ರವೇಶ’ ಎಂಬ ಸಂಕೇತವಾಗಿದ್ದು, ಇದರ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ಸ್ವರ್ಣಮಂದಿರದ ಆಡಳಿತ ನೋಡಿಕೊಳ್ಳುವ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್ಜಿಪಿಸಿ) ಚಿನ್ನಲೇಪನದ ಕಾರ್ಯ ಕೈಗೊಂಡಿದೆ.
4 ಗುಮ್ಮಟಗಳ ಪೈಕಿ ಮುಖ್ಯ ಗುಮ್ಮಟದ ಚಿನ್ನಲೇಪನವು ಏಪ್ರಿಲ್ನಿಂದ ನಡೆದಿದೆ. ಇದು ಮುಗಿದ ಬಳಿಕ ಉಳಿದ ಗುಮ್ಮಟಗಳ ಚಿನ್ನಲೇಪನ ನಡೆಯಲಿದೆ. ಕುಶಲಕರ್ಮಿಗಳು ಯಾವುದೇ ಫಲಾಪೇಕ್ಷೆ ಇಲ್ಲದೇ ಚಿನ್ನಲೇಪನದಲ್ಲಿ ತೊಡಗಿದ್ದಾರೆ ಎಂದು ಗುರುದ್ವಾರ ಸಮಿತಿ ವಕ್ತಾರ ದಲ್ಜೀತ್ ಸಿಂಗ್ ಬೇಡಿ ಹೇಳಿದ್ದಾರೆ.