ರಾಜ್ಯದ ವೈಫಲ್ಯ ಒಪ್ಪಿಕೊಂಡರೆ ಕೇಂದ್ರ ಮಧ್ಯಪ್ರವೇಶ : ಮೊದಲ ಬಾರಿ ಮಹದಾಯಿ ವಿವಾದ ಪ್ರಸ್ತಾಪಿಸಿದ ಶಾ
ಮಹದಾಯಿ ನದಿ ನೀರಿನ ಹಂಚಿಕೆ ವಿವಾದವನ್ನು ಬಗೆಹರಿಸಲು ನಮ್ಮಿಂದ ಆಗುವುದಿಲ್ಲ, ನಾವು ವಿಫಲರಾಗಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಲಿ, ನಂತರವಷ್ಟೇ ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಈ ಜಟಿಲ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ.
ಉಡುಪಿ : ‘ಮಹದಾಯಿ ನದಿ ನೀರಿನ ಹಂಚಿಕೆ ವಿವಾದವನ್ನು ಬಗೆಹರಿಸಲು ನಮ್ಮಿಂದ ಆಗುವುದಿಲ್ಲ, ನಾವು ವಿಫಲರಾಗಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಲಿ, ನಂತರವಷ್ಟೇ ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಈ ಜಟಿಲ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ.
ಬುಧವಾರ ಉಡುಪಿಯಲ್ಲಿ ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣಿಗರ ಸಮಾವೇಶ-ಸಂವಾದದಲ್ಲಿ, ‘ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾಕೆ ಸುಮ್ಮನಿದೆ’ ಎಂಬ ಯುವ ಕಾರ್ಯಕರ್ತರೊಬ್ಬರ ಪ್ರಶ್ನೆಗೆ ಅಮಿತ್ ಶಾ ಈ ಉತ್ತರ ನೀಡಿದರು.
ಬೇರೆ ಅರ್ಥ ಬರುತ್ತದೆ: ‘ಇದು ರಾಜ್ಯ ಸರ್ಕಾರಗಳ ನಡುವಿನ ವಿಷಯ, ಅವರೇ ಬಗೆಹರಿಸಿಕೊಳ್ಳಬೇಕು. ಅವರು ವಿಫಲವಾದಾಗ ಕೇಂದ್ರದ ಸಹಾಯವನ್ನು ಕೇಳಬಹುದು, ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಂಡರೆ ಕೇಂದ್ರ ಸರ್ಕಾರ ಈ ಬಗ್ಗೆ ಯೋಚಿಸಬಹುದು, ರಾಜ್ಯದಲ್ಲಿ ಬೇರೆ ಪಕ್ಷದ ಸರ್ಕಾರ ಇರುವುದರಿಂದ ಕೇಂದ್ರ ತಾನಾಗಿಯೇ ಆಸಕ್ತಿ ವಹಿಸಿದರೆ ಬೇರೆ ಅರ್ಥ ಬರುತ್ತದೆ’ ಎಂದು ಶಾ ಸ್ಪಷ್ಟನೆ ನೀಡಿದರು.