Asianet Suvarna News Asianet Suvarna News

‘ಶಾ, ಮೋದಿಯಿಂದ ತುರ್ತು ಸ್ಥಿತಿ’

ಇಡೀ ದೇಶವನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರಿಬ್ಬರೇ ನಡೆಸುತ್ತಿದ್ದಾರೆ . ಇವರಿಂದ ದೇಶದಲ್ಲಿ ತುರ್ತು ಸ್ಥಿತಿ ನಿರ್ಮಾಣವಾಗಿದೆ ಎಂದು ಯಶವಂತ್ ಸಿನ್ಹಾ ಹೇಳಿದ್ದಾರೆ.

Amit Shah And PM Modi Create Emergency in India
Author
Bengaluru, First Published Aug 30, 2018, 10:13 AM IST

ಬೆಂಗಳೂರು :  ಅಧಿಕಾರಸ್ಥರ ವಿರುದ್ಧ ಧ್ವನಿ ಎತ್ತುವವರನ್ನು ದಮನ ಮಾಡುವ ಕೆಲಸ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಯಶವಂತ್‌ ಸಿನ್ಹಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ದೇಶವನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರಿಬ್ಬರೇ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.

ಪ್ರಧಾನಿ ಮೋದಿ ವಿರುದ್ಧ ಮಾತನಾಡುವವರನ್ನು ಧ್ವನಿ ಎತ್ತದಂತೆ ಮಾಡುವ ವ್ಯವಸ್ಥಿತ ಷಡ್ಯಂತ್ರಗಳು ನಡೆದಿವೆ. ಬೇರೆ ನಾಯಕರು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ. ದೇಶದಲ್ಲಿ ಪ್ರಜಾತಾಂತ್ರಿಕ ಸಂಸ್ಥೆಗಳ ಮೇಲೆ ಅಕ್ರಮಗಳು ನಡೆಯುತ್ತಿವೆ. ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡದೆ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣವನ್ನು ಇಡೀ ದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಹೈದರಾಬಾದ್‌ನಲ್ಲಿ ಕವಿ ವರವರರಾವ್‌ ಸೇರಿದಂತೆ ಐದು ಮಂದಿ ಚಳವಳಿಗಾರರನ್ನು ಬಂಧಿಸಿರುವುದು ದೇಶದಲ್ಲಿ ತುರ್ತು ಪರಿಸ್ಥಿತಿ ವಾತಾವರಣ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.

ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ನೇರ ನಿಯಂತ್ರಣಕ್ಕೆ ಒಳಪಟ್ಟಿವೆ. ತನಿಖಾ ಸಂಸ್ಥೆಗಳು ಅವರ ಇಚ್ಛೆಗೆ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ. ದೇಶದ ಜನತೆಯೇ ದಮನಕಾರಿ ಶಕ್ತಿಗಳಿಗೆ ಬುದ್ಧಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಫೋರೆನ್ಸಿಕ್‌ ತನಿಖೆ:  ರಫೆಲ್‌ ಯುದ್ಧ ವಿಮಾನ ಖರೀದಿ ದೇಶದ ದೊಡ್ಡ ಹಗರಣವಾಗಿದೆ. ಈ ಸಂಬಂಧ ಫೋರೆನ್ಸಿಕ್‌ ತನಿಖೆ ನಡೆಸುವಂತೆ ಯಶವಂತ್‌ ಸಿನ್ಹಾ ಆಗ್ರಹಿಸಿದರು.

ರಫೆಲ್‌ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ವಾಸ್ತವಾಂಶವನ್ನು ಕೇಂದ್ರ ಸರ್ಕಾರ ದೇಶದ ಜನರ ಎದುರು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದೆ. ಇದನ್ನು ನೋಡಿದರೆ ಖರೀದಿಯಲ್ಲಿ ಹಗರಣ ನಡೆದಿದೆ ಎಂಬುದು ಪರೋಕ್ಷವಾಗಿ ತಿಳಿಯುತ್ತಿದೆ. ಖರೀದಿ ಒಪ್ಪಂದದಿಂದ ದೇಶದ ಸಾರ್ವಜನಿಕ ವಲಯದ ದೊಡ್ಡ ಸಂಸ್ಥೆಯಾದ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ. ಅನ್ನು ಹೊರಗಿಟ್ಟಿದ್ದು ಏಕೆ ಎಂಬ ಕಾರಣವನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು. ರಕ್ಷಣಾ ಸಚಿವರಿಗೂ ತಿಳಿಯದಂತೆ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಆಗಿದೆ. ಈ ರಫೇಲ್‌ ಖರೀದಿ ಒಪ್ಪಂದದಲ್ಲಿ ಕ್ರಿಮಿನಲ್‌ ಉದ್ದೇಶ ಇದೆಯೇ ಎಂಬುದನ್ನು ಅರಿಯಲು ಲೆಕ್ಕ ಮಹಾಪರಿಶೋಧಕರಿಂದ ಫೋರೆನ್ಸಿಕ್‌ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ರಫೇಲ್‌ ಹಗರಣ ತನಿಖೆಯನ್ನು ಸಂಸತ್‌ನ ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು ಎಂಬ ಕಾಂಗ್ರೆಸ್‌ ಬೇಡಿಕೆ ಸರಿಯಲ್ಲ. ಈಗಾಗಲೇ ಲೋಕಸಭೆಯ ಅವಧಿ ಕಡಿಮೆ ಇದೆ. ಸಾಮಾನ್ಯವಾಗಿ ಜಂಟಿ ಸದನ ಸಮಿತಿ ತನಿಖೆಗಳು ಬಹಳ ದೀರ್ಘ ಕಾಲ ನಡೆಯುತ್ತವೆ. ಹಾಗಾಗಿ ಮಹಾಲೆಕ್ಕ ಪರಿಶೋಧಕರಿಂದ ತನಿಖೆ ನಡೆಸುವುದೇ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.

Follow Us:
Download App:
  • android
  • ios