ವಿಶೇಷ ಅಧಿವೇಶನಕ್ಕೂ ಅಂಬರೀಶ್ ಗೈರು
ಬೆಂಗಳೂರು(ಸೆ. 23): ಕಾವೇರಿ ಕಿಚ್ಚು ರಾಜ್ಯದಲ್ಲಿ ಹೊತ್ತಿ ಉರಿದು ಬೆಂದು ಹೋಗುತ್ತಿದ್ದರೂ ರೆಬೆಲ್ ಸ್ಟಾರ್ ಅಂಬರೀಶ್ ಸಂಪೂರ್ಣ ವಿಮುಖರಾಗಿದ್ದಾರೆ. ರೈತರ ಪ್ರತಿಭಟನೆಯಲ್ಲಿ ಒಮ್ಮೆಯೂ ಕಾಣಿಸಿಕೊಳ್ಳದ ಮಾಜಿ ಸಚಿವ ಅಂಬರೀಶ್ ಇದೀಗ ವಿಶೇಷ ಅಧಿವೇಶನದಲ್ಲೂ ಪಾಲ್ಗೊಳ್ಳದೇ ಗೈರಾಗಿದ್ದಾರೆ. ಅಮೆರಿಕದಲ್ಲಿರುವ ಅಂಬರೀಶ್ ಅವರು ಇಂದು ಶುಕ್ರವಾರ ಸಂಜೆ ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ.
ರೈತರ ಕಾವೇರಿ ಹೋರಾಟದಲ್ಲಿ ಮಂಡ್ಯದ ಬಹುತೇಕ ಮುಖಂಡರು ಭಾಗವಹಿಸಿದ್ದರು. ಹೋರಾಟದಲ್ಲಿ ಅಂಬರೀಶ್ ಅನುಪಸ್ಥಿತಿಯು ಮಂಡ್ಯದ ಜನರಿಗೆ ಅಸಮಾಧಾನ ತಂದಿದೆ. ಅಂಬರೀಶ್ ವಿರುದ್ಧ ಸಾಕಷ್ಟು ಆಕ್ರೋಶವೂ ವ್ಯಕ್ತವಾಗಿದೆ. ರಾಜ್ಯಕ್ಕೆ ವಾಪಸ್ಸಾದ ಬಳಿಕ ಅಂಬರೀಶ್ ಕಾವೇರಿ ಹೋರಾಟದಲ್ಲಿ ಹೇಗೆ ಪಾಲ್ಗೊಳ್ಳುತ್ತಾರೆ ಹಾಗೂ ರಾಜ್ಯದ ಜನತೆಗೆ ಹೇಗೆ ಸಮಜಾಯಿಷಿ ನೀಡುತ್ತಾರೆ ಎಂದು ಕಾದುನೋಡಬೇಕಿದೆ.