ಕಾವೇರಿಗಾಗಿ ಮಂತ್ರಿ ಪದವಿ ತ್ಯಜಿಸಿದ್ದ ಅಂಬಿ
ಅಂಬರೀಶ್ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾಗಿ ಆಯ್ಕೆಯಾಗಿದ್ದರು | ಕಾವೇರಿ ಹೋರಾಟ ತೀವ್ರವಾದಾಗ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಜನರ ಜೊತೆ ಹೋರಾಟಕ್ಕೆ ಧುಮುಕಿದರು.
ಬೆಂಗಳೂರು (ನ. 25): ಚಲನಚಿತ್ರರಂಗ ಮಾತ್ರವಲ್ಲ ರಾಜಕೀಯದಲ್ಲಿ ಸಕ್ರೀಯರಾಗಿದ್ದ ಅಂಬರೀಶ್ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾಗಿ ಆಯ್ಕೆಯಾಗಿದ್ದರು. ಆದರೆ ಕಾವೇರಿ ಹೋರಾಟ ತೀವ್ರವಾದಾಗ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಜನರ ಜೊತೆ ಹೋರಾಟಕ್ಕೆ ಧುಮುಕಿದರು.
2002 ರಲ್ಲೂ ಬರಗಾಲ ಪರಿಸ್ಥಿತಿ ಮರುಕಳಿಸಿದಾಗ ತಮಿಳುನಾಡು ನ್ಯಾಯಮಂಡಳಿ ಮತ್ತೆ ಸುಪ್ರೀಂ ಕೋರ್ಟ್ ಕದ ತಟ್ಟಿತು. ಆಗ ಕೋರ್ಟ್ ಕಾವೇರಿ ನದಿ ನಿರ್ವಹಣಾ ಮಂಡಳಿ ಬದಲಾಯಿಸುವ ತನಕ ಪ್ರತಿದಿನ 1.25 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸೂಚಿಸಿತು. ರೊಚ್ಚಿಗೆದ್ದ ಜಿಲ್ಲೆಯ ಜನ ಬೃಹತ್ ಹೋರಾಟ ಆರಂಭಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ, ಅಂಬರೀಶ್ ಹಿಂದೆ ಮುಂದೆ ಯೋಚಿಸದೇ ರಾಜೀನಾಮೆ ಸಲ್ಲಿಸಿ ತಾವೂ ರೈತರ ಜೊತೆ ಕೈಜೋಡಿಸಿದರು.
1996ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಜನತಾದಳದಿಂದ ಸ್ಪರ್ಧಿಸಿ, ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಲಿಂಗಪ್ಪ ಅವರ ಎದುರು ಸೋಲು ಕಂಡರು. 1998ರ ಲೋಕಸಭಾ ಚುನಾವಣೆ ವೇಳೆ ಅಂಬರೀಷ್ ಜನತಾದಳ ಸೇರ್ಪಡೆಯಾದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಮಾದೇಗೌಡ ವಿರುದ್ಧ ಸ್ಪರ್ಧಿಸಿದ್ದ ಅಂಬರೀಷ್ 80,523 ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಗುರು–ಶಿಷ್ಯರ ಕಾಳಗದಲ್ಲಿ ಅಂಬರೀಷ್ ಗುರುವನ್ನೇ ಸೋಲಿಸಿದ ಶಿಷ್ಯ ಎನಿಸಿಕೊಂಡರು.