ಅಮರನಾಥ ಯಾತ್ರಿಗಳ ಹತ್ಯೆ: ‘ಉಗ್ರರ ವಿರುದ್ಧ ಹೋರಾಡಲು ಗೋ ರಕ್ಷಕರನ್ನು ಕಳುಹಿಸಿ’ ಎಂದ ಉದ್ಧವ್ ಠಾಕ್ರೆ
ಜಮ್ಮು-ಕಾಶ್ಮೀರದಲ್ಲಿ ಅಮರನಾಥ್ ಯಾತ್ರಿಗಳ ಮೇಲೆ ನಡೆದ ಉಗ್ರರ ದಾಳಿ ಕುರಿತಂತೆ ಬಿಜೆಪಿಗೆ ತನ್ನದೇ ಮಿತ್ರಪಕ್ಷ ಶಿವಸೇನಾ ಟಾಂಗ್ ಕೊಟ್ಟಿದೆ. ಭಯೋತ್ಪಾದಕರ ವಿರುದ್ಧ ಹೋರಾಡಲು ಗೋ ರಕ್ಷಕರನ್ನು ಕಣಿವೆ ಕಾಶ್ಮೀರಕ್ಕೆ ಕಳುಹಿಸಿ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಮುಂಬೈ(ಜು.12): ಜಮ್ಮು-ಕಾಶ್ಮೀರದಲ್ಲಿ ಅಮರನಾಥ್ ಯಾತ್ರಿಗಳ ಮೇಲೆ ನಡೆದ ಉಗ್ರರ ದಾಳಿ ಕುರಿತಂತೆ ಬಿಜೆಪಿಗೆ ತನ್ನದೇ ಮಿತ್ರಪಕ್ಷ ಶಿವಸೇನಾ ಟಾಂಗ್ ಕೊಟ್ಟಿದೆ. ಭಯೋತ್ಪಾದಕರ ವಿರುದ್ಧ ಹೋರಾಡಲು ಗೋ ರಕ್ಷಕರನ್ನು ಕಣಿವೆ ಕಾಶ್ಮೀರಕ್ಕೆ ಕಳುಹಿಸಿ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಅನಂತ್ನಾಗ್ ಜಿಲ್ಲೆಯ ಬಂಟಿಗು ಬಳಿ ಅಮರನಾಥ್ ಯಾತ್ರಿಗಳ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಮಹಾರಾಷ್ಟ್ರದ ಇಬ್ಬರು ಹಾಗೂ ಗುಜರಾತ್ನ ಐವರು ಸೇರಿ 7 ಜನ ಯಾತ್ರಿಕರು ಸಾವನ್ನಪ್ಪಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಸಂಸ್ಕೃತಿ, ಕ್ರೀಡೆ ಮತ್ತಿತರ ವಿಷಯುಗಳನ್ನು ರಾಜಕೀಯದಲ್ಲಿ ಎಳೆದು ತರಬೇಡಿ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಇಂದು ಧರ್ಮ ಮತ್ತು ರಾಜಕೀಯ ಎರಡೂ ಭಯೋತ್ಪಾದಕ ದಾಳಿ ರೂಪದಲ್ಲಿ ಸೇರಿಕೊಂಡಿವೆ. ಬ್ಯಾಗ್ಗಳಲ್ಲಿ ಶಸ್ತ್ರಾಸ್ತ್ರ ಬದಲಿಗೆ ಕೇವಲ ಮಾಂಸ ಹೊಂದಿದವರೂ ಇಂದು ಜೀವಂತವಾಗಿರಲು ಸಾಧ್ಯವಿಲ್ಲವೆಂದು ನಾವು ಅರ್ಥ ಮಾಡಿಕೊಳ್ಳಬೇಕೇ ಎಂದು ಉದ್ಧವ್ ಪ್ರಶ್ನಿಸಿದ್ದಾರೆ.
ಅಲ್ಲದೇ, ಗೋ ರಕ್ಷಕರ ವಿಷಯ ಇವತ್ತು ಕೆರಳಿಸುವಂತೆ ಮಾಡಿದೆ. ಯಾಕೆ ನೀವು ಗೋ ರಕ್ಷಕರನ್ನು ಭಯೋತ್ಪಾದಕರ ವಿರುದ್ಧ ಹೋರಾಡಲು ಕಣಿವೆ ಕಾಶ್ಮೀರಕ್ಕೆ ಕಳುಹಿಸಬಾರದು ಎಂದು ಉದ್ಧವ್ ಠಾಕ್ರೆ ಬಿಜೆಪಿ ಕಾಲೆಳೆದಿದ್ದಾರೆ.