ಅಣ್ಣಾವ್ರ ಅಪಹರಣ ಆರೋಪಿಗಳು ದೋಷಮುಕ್ತ!
ಡಾ. ರಾಜಕುಮಾರ್ ಅಪಹರಣ ಪ್ರಕರಣ! ಎಲ್ಲಾ ಆರೋಪಿಗಳು ದೋಷಮುಕ್ತ ಎಂದ ಕೋರ್ಟ್! ರಾಜ್ ಅಪಹರಿಸಿದ್ದ ದಂತಚೋರ ವೀರಪ್ಪನ್ ಮತ್ತು ಆತನ ಸಂಗಡಿಗರು!
8 ಜನರ ಪೈಕಿ 5 ಆರೋಪಿಗಳನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ! ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ತೀರ್ಪು
ಸತ್ತ ಮೇಲೆ ನಿರ್ದೋಷಿಯಾದ ವೀರಪ್ಪನ್
ಚೆನ್ನೈ(ಸೆ.25):ಮಹತ್ವದ ಬೆಳವಣಿಗೆಯೊಂದರಲ್ಲಿ 18 ವರ್ಷಗಳ ಹಿಂದೆ ಕನ್ನಡದ ವರನಟ ಡಾ. ರಾಜ್ಕುಮಾರ್ ಅವರನ್ನು ದಂತಚೋರ ವೀರಪ್ಪನ್ ಮತ್ತು ಆತನ ಸಂಗಡಿಗರು ಅಪಹರಣ ಮಾಡಿದ್ದ ಪ್ರಕರಣದ ಎಲ್ಲಾ ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
2000ನೇ ಇಸವಿ ಜುಲೈ 30ರಂದು ತಮಿಳುನಾಡಿನ ಗಡಿಭಾಗದಲ್ಲಿರುವ ಗಾಜನೂರಿನ ಮನೆಯಿಂದ ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ. ಈ ವಿಷಯ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಭಾರೀ ಹಿಂಸಾಚಾರಕ್ಕೆ ಕಾರಣವಾಗಿತ್ತು. ರಾಜ್ ಬಿಡಿಸಲು ಉಭಯ ರಾಜ್ಯಗಳು ಭಾರೀ ಶ್ರಮವಹಿಸಿದ್ದವು. ಅಂತಿಮವಾಗಿ 108 ದಿನದ ಬಳಿಕ ರಾಜ್ರನ್ನು, ವೀರಪ್ಪನ್ ಯಾವುದೇ ತೊಂದರೆ ಇಲ್ಲದೆ ಬಿಡುಗಡೆ ಮಾಡಿದ್ದ.
ಈ ಸಂಬಂಧ ವೀರಪ್ಪನ್ ಸೇರಿದಂತೆ 8 ಜನರ ವಿರುದ್ಧ ಆರೋಪಪಟ್ಟಿ ಹೊರಿಸಲಾಗಿತ್ತು. ಆದರೆ ವಿಚಾರಣೆ ವೇಳೆ ವೀರಪ್ಪನ್, ಸೇತುಕುಡಿ ಗೋವಿಂದನ್, ರಂಗಸಾಮಿ ಸಾವನ್ನಪ್ಪಿದ್ದರು. ಉಳಿದ 5 ಜನ ಹಾಲಿ ಪ್ರಕರಣ ಸಂಬಂಧ ಜೈಲು ಸೇರಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ. ಪ್ರಕರಣದ ಕುರಿತು ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಕೆ. ಮಣಿ, ಸೂಕ್ತ ಸಾಕ್ಷ್ಯಾಧಾರದ ಕೊರತೆಯಿಂದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸುತ್ತಿರುವುದಾಗಿ ಹೇಳಿದರು.
ವರನಟ ರಾಜ್ ಅಪಹರಣ ಪ್ರಕರಣದ ತೀರ್ಪು ಇಂದು