2019ರ ಲೋಕಸಭಾ ಚುನಾವಣೆಗೆ ಬಿಜೆಪಿ ರಣಕಹಳೆ ಮೊಳಗಿಸಿದೆ. ಅಜಯ್ ಭಾರತ, ಅಟಲ್ ಬಿಜೆಪಿ ಎನ್ನುವ ಘೋಷಣೆಯನ್ನು ಹೊರಡಿಸಿದೆ. ಈ ಮೂಲಕ ಚುನಾವಣೆಯ ಗೆಲುವಿಗೆ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.  

ನವದೆಹಲಿ: 2019ರ ಚುನಾವಣೆಯಲ್ಲಿ ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ‘ಚೆನ್ನಾಗಿ’ ಬಳಸಿಕೊಳ್ಳಲು ತೀರ್ಮಾನಿಸಿದಂತಿರುವ ಬಿಜೆಪಿ, ‘ಅಜಯ ಭಾರತ, ಅಟಲ್ ಬಿಜೆಪಿ’ (ಕನ್ನಡದಲ್ಲಿ ‘ಅಜೇಯ ಭಾರತ, ಅಚಲ ಬಿಜೆಪಿ’) ಎಂಬ ಹೊಸ ಉದ್ಘೋಷವನ್ನು ಹುಟ್ಟುಹಾಕಿದೆ. ಭಾರತೀಯ ಜನತಾ ಪಕ್ಷದ 2 ನೇ ಹಾಗೂ ಕೊನೆಯ ದಿವಸದ ರಾಷ್ಟ್ರೀಯ ಕಾರ್ಯಕಾರಿಣಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಅಟಲ್‌ಜಿಗೆ ಶ್ರದ್ಧಾಂಜಲಿ ಸಲ್ಲಿಸಿ ಈ ಉದ್ಘೋಷ ಮಾಡುವ ಮೂಲಕ 2019 ರ ಲೋಕಸಭೆ ಚುನಾವಣೆಯ ರಣಕಹಳೆ ಮೊಳಗಿಸಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ ಯಾವಾಗಲೂ ವಿಜಯಶಾಲಿಯಾಗಿರುತ್ತದೆ ಹಾಗೂ ಭಾರತವನ್ನು ಯಾರಿಂದಲೂ ಅಡಗಿಸಲಾಗದು ಎಂದು ಮೋದಿ ಹೇಳಿದರಲ್ಲದೇ, ವಿಪಕ್ಷಗಳ ಕೂಟವು ಅವಕಾಶವಾದಿತನ ಎಂದು ಟೀಕಿಸಿದರು. ಇದೇ ವೇಳೆ ಕಾರ್ಯಕಾರಿಣಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಮಾತನಾಡಿ, ‘ನಮ್ಮ ಬಳಿ 9 ಕೋಟಿ ಸಕ್ರಿಯ ಕಾರ್ಯಕರ್ತರ ಪಡೆ ಇದೆ. ಇದರರ್ಥ ನಾವು 36 - 40 ಕೋಟಿ ಜನರೊಂದಿಗೆ ಸಂಪರ್ಕ ಹೊಂದಿದ್ದೇವೆ. 

ನಾವು ದೇಶದ 21 ಕೋಟಿ ಕುಟುಂಬಗಳನ್ನು ತಲುಪಬೇಕಾದ ಅವಶ್ಯಕತೆ ಇದೆ. ಆ ಮೂಲಕ ದೇಶದ 110 ಕೋಟಿಗೂ ಹೆಚ್ಚಿನ ಜನರನ್ನು ಮುಟ್ಟಬೇಕಿದೆ. ಒಂದರ್ಥದಲ್ಲಿ ಇಡೀ ದೇಶದ ಜನರನ್ನು ತಲುಪಬೇಕಿದೆ ಎಂದು ಕರೆ ಕೊಟ್ಟರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಕಠಿಣ ಶ್ರಮವನ್ನು ಮೆಚ್ಚಿ ಜನರು 2019 ರಲ್ಲೂ ಅಧಿಕಾರ ನೀಡಲಿದ್ದಾರೆ. ಬಳಿಕ ಮುಂದಿನ ೫೦ ವರ್ಷವನ್ನು ಬಿಜೆಪಿಯೇ ಆಳಲಿದೆ. ದೇಶದ ರಾಜಕೀಯವು ಅಭಿವೃದ್ಧಿ ಮತ್ತು ಆಶಾವಾದದತ್ತ ಸಾಗುತ್ತಿದೆ’ ಎಂದು ಭಾರೀ ಕರತಾಡನದ ಮಧ್ಯೆ ಹೇಳಿದರು. ಇನ್ನು ಪಕ್ಷವು ಕೆಲವು ಗೊತ್ತುವಳಿಗಳನ್ನೂ ಪಾಸು ಮಾಡಿತು.