ರಾಜ ವ್ಯಾಪಾರಿಯಾದರೆ ಜನ ಭಿಕಾರಿಗಳಾಗುತ್ತಾರೆ
ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ. ರಾಷ್ಟ್ರದ ಸಂವಿಧಾನ ಹಾಗೂ ಸಂಸ್ಕಾರಕ್ಕೆ ಗೌರವ ಕೊಡದ ಪ್ರಧಾನಿ ಯಾರಾದರೂ ಇದ್ದಲ್ಲಿ ಅದು ನರೇಂದ್ರ ಮೋದಿ ಆಗಿದ್ದಾರೆ. ಅಚ್ಛೇದಿನ್, ಭಷ್ಟಾಚಾರಕ್ಕೆ ಕಡಿವಾಣ, ಮಹಿಳೆಯರ ರಕ್ಷಣೆ, ಕಪ್ಪು ಹಣ ದೇಶಕ್ಕೆ ವಾಪಾಸು ತರುವ ವಿಷಯದಲ್ಲಿ ಎಷ್ಟು ಆಶ್ವಾಸನೆ ನೀಡಲಾಗಿತ್ತು. ಆದರೆ ಈ ವಿಷಯದಲ್ಲಿ ಕೇಂದ್ರ ಸರಕಾರದ ಸಾಧನೆ ಶೂನ್ಯ.
ಶಿವಮೊಗ್ಗ[ಅ.30]: ರಾಜನಾದವನು ವ್ಯಾಪಾರಿಯಾದರೆ ಜನರು ಭಿಕಾರಿಗಳಾಗುತ್ತಾರೆ. ಇದೊಂದು ಹಿಂದಿಯಲ್ಲಿನ ಗಾದೆಯಾಗಿದ್ದು, ಇದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಮತ್ತು ಎಐಸಿಸಿ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ವ್ಯಂಗ್ಯವಾಡಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2015ರಲ್ಲಿ ಜಪಾನ್ ದೇಶಕ್ಕೆ ಭೇಟಿ ನೀಡಿದ್ದ ನರೇಂದ್ರ ಮೋದಿ ನನ್ನ ರಕ್ತದಲ್ಲಿ ವ್ಯಾಪಾರಿ ಗುಣ ಹರಿಯುತ್ತಿದೆ ಎಂದು ಹೇಳಿಕೊಂಡಿದ್ದರು. ರಾಜನಾದವನು ವ್ಯಾಪಾರಿಯಾದರೆ ಜನರು ಭಿಕಾರಿಯಾಗುತ್ತಾರೆ. ಈ ದೇಶದಲ್ಲಿ ಅಂತಹ ಸ್ಥಿತಿ ಬಂದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ. ರಾಷ್ಟ್ರದ ಸಂವಿಧಾನ ಹಾಗೂ ಸಂಸ್ಕಾರಕ್ಕೆ ಗೌರವ ಕೊಡದ ಪ್ರಧಾನಿ ಯಾರಾದರೂ ಇದ್ದಲ್ಲಿ ಅದು ನರೇಂದ್ರ ಮೋದಿ ಆಗಿದ್ದಾರೆ. ಅಚ್ಛೇದಿನ್, ಭಷ್ಟಾಚಾರಕ್ಕೆ ಕಡಿವಾಣ, ಮಹಿಳೆಯರ ರಕ್ಷಣೆ, ಕಪ್ಪು ಹಣ ದೇಶಕ್ಕೆ ವಾಪಾಸು ತರುವ ವಿಷಯದಲ್ಲಿ ಎಷ್ಟು ಆಶ್ವಾಸನೆ ನೀಡಲಾಗಿತ್ತು. ಆದರೆ ಈ ವಿಷಯದಲ್ಲಿ ಕೇಂದ್ರ ಸರಕಾರದ ಸಾಧನೆ ಶೂನ್ಯ. ಮೊದಲಿಗೆ ತಾನೊಬ್ಬ ಪ್ರಧಾನ ಸೇವಕ ಎಂದರು. ನಂತರ ಚೌಕಿದಾರ (ಕಾವಲುಗಾರ) ಎಂದರು. ಬಳಿಕ ಫಕೀರ ಎಂದರು. ಇದರಲ್ಲಿ ಅವರು ಯಾರು ಎಂಬುದು ಅವರಿಗೇ ಗೊತ್ತಿಲ್ಲ. ಅದರಲ್ಲಿ ನರೇಂದ್ರ ಮೋದಿ ಒಂದನ್ನಾದರೂ ಪಾಲನೆ ಮಾಡಿದ್ದಾರಾ? ಕಾವಲುಗಾರನೇ ಕಳ್ಳತನ ಮಾಡುತ್ತಿರುವುದನ್ನು ನೋಡಬಹುದಾಗಿದೆ ಎಂದು ಟೀಕಿಸಿದರು.
ಈ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿಯೂ ನರೇಂದ್ರ ಮೋದಿ ಆಡಳಿತ ನಡೆಸಿದ್ದಾರೆ. ಪದೇ ಪದೇ ಗುಜರಾತ್ ಮಾದರಿ ಎಂದು ಹೇಳಿದರು. ಬಿಜೆಪಿ ಮುಖಂಡರೂ ಅದನ್ನೇ ಹೇಳಿದರು. ಆದರೆ ಇದೇ ಗುಜರಾತ್ ಮಕ್ಕಳ ಪೌಷ್ಠಿಕ ಆಹಾರದ ಕೊರತೆಯಲ್ಲಿ 3ನೇ ಸ್ಥಾನದಲ್ಲಿದೆ. ನಮ್ಮ ಬೆಂಗಳೂರಿನಿಂದ ದೆಹಲಿಗೆ ನಿತ್ಯ 100 ವಿಮಾನ ಸಂಚರಿಸುತ್ತಿದ್ದರೆ, ಗುಜರಾತ್ ರಾಜಧಾನಿ ಅಹ್ಮದಾಬಾದ್ನಿಂದ ಕೇವಲ ಐದಾರು ವಿಮಾನ ಸಂಚರಿಸುತ್ತಿವೆ. ಇದು ಅಲ್ಲಿನ ವ್ಯಾಪಾರ ವ್ಯವಹಾರ ಬೆಳವಣಿಗೆ ಧ್ಯೋತಕ. ಅಲ್ಲಿ ಸರಿಯಾದ ಆಸ್ಪತ್ರೆಗಳಿಲ್ಲ. ಈ ಬಗ್ಗೆ ಚರ್ಚಿಸಲು ಅವರು ತಯಾರಿದ್ದಾರಾ? ಎಂದು ಪ್ರಶ್ನಿಸಿದರು.
ಶಶಿ ತರೂರ್, ದಿಗ್ವಿಜಯ್ ಸಿಂಗ್, ಪಿ. ಚಿದಂಬರಂ ಸೇರಿದಂತೆ ಕೆಲವರು ವಿವಿಧ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ ಇದೆಲ್ಲವೂ ಅವರ ವೈಯುಕ್ತಿಕ ಹೇಳಿಕೆಗಳು. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್ನಲ್ಲಿದ್ದುಕೊಂಡು ಆರ್ಎಸ್ಎಸ್ ಕುರಿತು ಒಳ್ಳೆಯ ಅಭಿಪ್ರಾಯ ಹೊಂದಿದ್ದರೆ, ಅವರು ನಿಜಕ್ಕೂ ಕಾಂಗ್ರೆಸ್ ಪಕ್ಷದವರೇ ಅಲ್ಲ. ಆರ್ ಎಸ್ಎಸ್ನಿಂದ ಕಾಂಗ್ರೆಸ್ ಕಲಿಯಬೇಕಾದದು ಏನೂ ಇಲ್ಲ. ಕಾಂಗ್ರೆಸ್ ಇತಿಹಾಸದ ಅರಿವಿಲ್ಲದೆ ನಮ್ಮವರಲ್ಲಿ ಕೆಲವರು ಆರ್ಎಸ್ಎಸ್ ಬಗ್ಗೆ ಹೇಳಿಕೆ ನೀಡುತ್ತಾರೆ ಅಷ್ಟೆ ಎಂದರು.
ಕೇಳದೆ ಉಪಚನಾವಣೆ ಎದುರಾಗಿದೆ. ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಯಾಗಿ ಮಧುಬಂಗಾರಪ್ಪ ಕಣಕ್ಕಿಳಿದಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರು ,ಮುಖಂಡರು ಒಟ್ಟಾಗಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಎಲ್ಲೆಡೆ ಮೈತ್ರಿ ಅಭ್ಯರ್ಥಿ ಪರವಾಗಿ ಬೆಂಬಲ ವ್ಯಕ್ತವಾಗುತ್ತಿದೆ. ಮಧು ಬಂಗಾರಪ್ಪ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮಾಜಿ ಸಂಸದ ಸಿ.ನಾರಾಯಣ ಸ್ವಾಮಿ, ಎನ್. ರಮೇಶ್, ವಿಶ್ವನಾಥನ್ ಮತ್ತಿತರರು ಇದ್ದರು.