ಬಂಗಾರದ ಮೀಸೆ ಮತ್ತು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್
ಪ್ರತ್ಯೇಕ ರಾಜ್ಯ ಹೋರಾಟದ ಸಂದರ್ಭದಲ್ಲಿ ತಿರುಪತಿಗೆ ಹರಕೆ ಹೊತ್ತಿರುವುದಾಗಿ ಹೇಳಿದ್ದ ಕೆಸಿಆರ್ ಫೆಬ್ರುವರಿ 22 ರಂದು ತಿರುಪತಿ ವೆಂಕಟರಮಣನಿಗೆ ಚಿನ್ನಾಭರಣ ಅರ್ಪಿಸಿದ್ದರು. ಆಭರಣ ತಯಾರಿಸಲು ಚಂದ್ರಶೇಖರ್ ರಾವ್ ಅವರು ತಿರುಪತಿ ತಿರುಮಲ ದೇವಸ್ಥಾನಕ್ಕೆ 5 ಕೋಟಿ ರೂ. ಹಣ ನೀಡಿದ್ದರು.
ಹೈದರಾಬಾದ್(ಫೆ.24): ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ತಿರುಪತಿ ವೆಂಕಟರಮಣನಿಗೆ 5 ಕೋಟಿ ರೂ.ಮೌಲ್ಯದ 19 ಕೆ.ಜಿ ಚಿನ್ನಾಭರಣವನ್ನು ಹರಕೆ ಅರ್ಪಿಸಿದ ನಂತರ ಕುರವಿ ವೀರಭದ್ರಸ್ವಾಮಿ ದೇವರಿಗೆ ಬಂಗಾರದ ಮೀಸೆ ಅರ್ಪಿಸಲಿದ್ದಾರೆ.
ಕುರವಿ ಸ್ವಾಮಿ ದೇವಾಲಯಕ್ಕೆ ಹರಕೆ ಅರ್ಪಿಸಲಿರುವ ಈ ಬಂಗಾರದ ಮೀಸೆಯ ಬೆಲೆ 75,000 ರೂ. ಆಗಿದೆ. ಪ್ರತ್ಯೇಕ ರಾಜ್ಯ ಹೋರಾಟದ ಸಂದರ್ಭದಲ್ಲಿ ತಿರುಪತಿಗೆ ಹರಕೆ ಹೊತ್ತಿರುವುದಾಗಿ ಹೇಳಿದ್ದ ಕೆಸಿಆರ್ ಫೆಬ್ರುವರಿ 22 ರಂದು ತಿರುಪತಿ ವೆಂಕಟರಮಣನಿಗೆ ಚಿನ್ನಾಭರಣ ಅರ್ಪಿಸಿದ್ದರು. ಆಭರಣ ತಯಾರಿಸಲು ಚಂದ್ರಶೇಖರ್ ರಾವ್ ಅವರು ತಿರುಪತಿ ತಿರುಮಲ ದೇವಸ್ಥಾನಕ್ಕೆ 5 ಕೋಟಿ ರೂ. ಹಣ ನೀಡಿದ್ದರು.
ಗುತ್ತಿಗೆ ಆಧಾರದ ಮೂಲಕ ಕೊಯಮತ್ತೂರ್ನ ಕೀರ್ತಿಲಾಲ್ ಕಾಳಿದಾಸ್ ಜುವೆಲರ್ಸ್ ಅವರು 22 ಕ್ಯಾರೆಟ್ ಚಿನ್ನದ ಆಭರಣಗಳನ್ನು 15 ದಿನಗಳಲ್ಲಿ ತಯಾರಿಸಿದ್ದಾರೆ. ಇದರಲ್ಲಿ ತೆಲಂಗಾಣ ಪದ್ಧತಿಯಂತೆ 14.2 ಕೆ.ಜಿಯ ‘ಸಾಲಿಗ್ರಾಮ್ ಹರಾಮ್’ ಹಾಗೂ 4.61 ಕೆ.ಜಿಯ ಐದು ಸರಗಳಿವೆ.
ಕುರವಿ ವೀರಭದ್ರಸ್ವಾಮಿ ದೇವಾಲಯಕ್ಕೆ ಚಿನ್ನದ ಮೀಸೆ ಸಲ್ಲಿಸಿದ ನಂತರ ವಾರಾಂಗಲ್ನಲ್ಲಿರುವ ಭದ್ರಕಾಳಿ ದೇವರಿಗೆ ಚಿನ್ನದ ಅಂಗಿ, ವಿಜಯವಾಡದಲ್ಲಿರುವ ಕನಕ ದುರ್ಗಾ ದೇವರಿಗೆ ಮತ್ತು ತಿರುಚನೂರಿನಲ್ಲಿರುವ ಪದ್ಮಾವತಿ ದೇವರಿಗೆ ಮೂಗುತಿ ಸಲ್ಲಿಸಲು ಕೆಸಿಆರ್ ತೀರ್ಮಾನಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದಲ್ಲಿ ಹರಕೆ ಸಲ್ಲಿಸುತ್ತಿರುವುದಕ್ಕೆ ಟೀಕೆಗಳು ಕೇಳಿ ಬರುತ್ತಿದ್ದರೂ ತೆಲಂಗಾಣ ಮುಖ್ಯಮಂತ್ರಿ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.