ಸಿಎಂ ವಿರುದ್ಧ ಅಸಮಾಧಾನ : ಜವಾಬ್ದಾರಿ ಬಿಟ್ಟು ಹೊರ ನಡೆದ ಸಚಿವ
ಮುಖ್ಯಮಂತ್ರಿ ವಿರುದ್ಧದ ಅಸಮಾಧಾನದಿಂದ ಸಚಿವರೋರ್ವರು ತಮ್ಮ ಜವಾಬ್ದಾರಿಯಿಂದ ಹೊರ ನಡೆದಿದ್ದಾರೆ. 8 ಸಲಹಾ ಸಮಿತಿಯಿಂದ ಹೊರಗುಳಿದಿದ್ದಾರೆ.
ಚಂಡೀಗಢ : ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿ ರಚಿಸಿದ್ದ 8 ಸಲಹಾ ಸಮಿತಿಗಳಿಂದ ಹೊರ ನಡೆದಿದ್ದಾರೆ.
ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರೊಂದಿಗೆ ವೈಮನಸ್ಸಿನ ಕಾರಣದಿಂದ ಇದೀಗ ಈ ನಿರ್ಧಾರ ಮಾಡಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಆರಂಭವಾಗಿದ್ದ ಇಬ್ಬರ ನಡುವಿನ ವೈಮನಸ್ಯ ಇದೀಗ ಈ ಹಂತಕ್ಕೆ ತಲುಪಿದೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಸಿಧು ಹೊಣೆ ಮಾಡಿ ಅವರಿಗೆ ನೀಡಿದ್ದ ಪೌರಾಡಳಿತ ಖಾತೆಯನ್ನು ವಾಪಸ್ ಪಡೆದಿದ್ದ ಸಿಎಂ ಅಮರೀಂದರ್ ಸಿಂಗ್ ಇಂಧನ ಖಾತೆಯನ್ನು ನೀಡಿದ್ದರು.
ಇದರಿಂದ ಅಸಮಾಧಾನಗೊಂಡಿದ್ದ ಸಿಧು ಸಿಎಂ ಕರೆದಿದ್ದ ಸಂಪುಟ ಸಭೆಗೂ ಗೈರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದರು. ಇದೀಗ ಮುಖ್ಯಮಂತ್ರಿಗಳಿಂದ ರಚನೆಯಾಗಿದ್ದ 8 ಸಲಹಾ ಸಮಿತಿಗಳಿಂದ ಹೊರ ನಡೆದಿದ್ದಾರೆ.