ಗೋವಾದಲ್ಲಿ ಬಂದಿರುವ ಮತ ಎಣಿಕೆ ಟ್ರೆಂಡ್ ಪ್ರಕಾರ ಪಕ್ಷವು ಶೂನ್ಯ ಸಂಪಾದನೆ ಮಾಡಿ ಹೀನಾಯ ಸೋಲನುಭವಿಸುವುದು ಖಚಿತವಾಗಿದೆ.

ನವದೆಹಲಿ(ಮಾ. 11): ಪಂಚರಾಜ್ಯ ಚುನಾವಣಾ ಫೈಟ್'ನಲ್ಲಿ ಎರಡು ರಾಜ್ಯಗಳಲ್ಲಿ ಹಣಾಹಣಿ ನಡೆಸಿದ್ದ ಆಮ್ ಆದ್ಮಿ ಪಕ್ಷಕ್ಕೆ ನಿರಾಶೆಯಾಗುತ್ತಿದೆ. ಪಂಜಾಬ್ ಮತ್ತು ಗೋವಾದಲ್ಲಿ ಅಧಿಕಾರ ಗದ್ದುಗೆ ಹಿಡಿದೇ ತೀರುತ್ತೇನೆಂದು ಪಣ ತೊಟ್ಟಿದ್ದ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಗೋವಾದಲ್ಲಿ ಬಂದಿರುವ ಮತ ಎಣಿಕೆ ಟ್ರೆಂಡ್ ಪ್ರಕಾರ ಪಕ್ಷವು ಶೂನ್ಯ ಸಂಪಾದನೆ ಮಾಡಿ ಹೀನಾಯ ಸೋಲನುಭವಿಸುವುದು ಖಚಿತವಾಗಿದೆ.

ಪಂಜಾಬ್'ನಲ್ಲಿ ಕೆಲ ಸಮೀಕ್ಷೆಗಳು ಆಮ್ ಆದ್ಮಿಗೆ ಗೆಲುವು ದೊರಕಬಹುದೆಂದು ಅಂದಾಜು ಮಾಡಿದ್ದವು. ಆದರೆ, ಇಲ್ಲಿ ಎರಡೇ ಸ್ಥಾನಕ್ಕಾಗಿ ಶಿರೋಮಣಿ ಅಕಾಲಿ ದಳ-ಬಿಜೆಪಿ ಮೈತ್ರಿಕೂಟದೊಂದಿಗೆ ಎಎಪಿ ಪೈಪೋಟಿ ನಡೆಸುತ್ತಿದೆ.

ದಿಲ್ಲಿಯ ನಂತರ ದೇಶದ ಇತರ ಭಾಗದಲ್ಲಿ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆಯಲ್ಲಿದ್ದ ಆಮ್ ಆದ್ಮಿ ಪಕ್ಷಕ್ಕೆ ಅತೀವ ನಿರಾಶೆಯಾಗಿರುವುದಂತೂ ಹೌದು. ಪಂಜಾಬ್'ನಲ್ಲಿ ಅಧಿಕಾರ ಸಿಕ್ಕೇಸಿಗುತ್ತದೆ ಎಂದು ಎಣಿಸಿದ್ದ ಆಪ್, ಆ ರಾಜ್ಯದಲ್ಲಿ ಇನ್ನಿಲ್ಲದ ಪ್ರಚಾರ ನಡೆಸಿತ್ತು. ಆದರೆ, ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಪಡೆಯುವುದನ್ನು ತಡೆಯಲು ಅದರಿಂದಾಗಲಿಲ್ಲ..