ಆಧಾರ್ ನೀಡದವರಿಗೆ ಸಿಲಿಂಡರ್ ಪೂರೈಕೆ ಇಲ್ಲ ..!
ಅಡುಗೆ ಅನಿಲ ಸಿಲಿಂಡರ್ ಸಂಪರ್ಕಕ್ಕೆ ಆಧಾರ್ ಸಂಯೋಜಿಸುವ ಗಡುವು ಡಿಸೆಂಬರ್ 31ಕ್ಕೇ ಮುಗಿದಿದೆ. ಮಾ.31ಕ್ಕೆ ವಿಸ್ತರಣೆ ಆಗಿಲ್ಲ’ ಎಂಬ ಕಾರಣ ನೀಡಿ ಇಂಡೇನ್ ಸೇರಿದಂತೆ ಕೆಲವು ಸರ್ಕಾರಿ ಸ್ವಾಮ್ಯದ ಗ್ಯಾಸ್ ವಿತರಣಾ ಕಂಪನಿಗಳು ಗ್ರಾಹಕರಿಗೆ ಅನಿಲ ಸರಬರಾಜು ನಿಲ್ಲಿಸಿವೆ ಹಾಗೂ ಸಂಪರ್ಕವನ್ನೇ ಕಡಿತಗೊಳಿಸಿವೆ ಎಂಬ ಆರೋಪ ಕೇಳಿಬಂದಿದೆ.
ಚೆನ್ನೈ: ‘ಅಡುಗೆ ಅನಿಲ ಸಿಲಿಂಡರ್ ಸಂಪರ್ಕಕ್ಕೆ ಆಧಾರ್ ಸಂಯೋಜಿಸುವ ಗಡುವು ಡಿಸೆಂಬರ್ 31ಕ್ಕೇ ಮುಗಿದಿದೆ. ಮಾ.31ಕ್ಕೆ ವಿಸ್ತರಣೆ ಆಗಿಲ್ಲ’ ಎಂಬ ಕಾರಣ ನೀಡಿ ಇಂಡೇನ್ ಸೇರಿದಂತೆ ಕೆಲವು ಸರ್ಕಾರಿ ಸ್ವಾಮ್ಯದ ಗ್ಯಾಸ್ ವಿತರಣಾ ಕಂಪನಿಗಳು ಗ್ರಾಹಕರಿಗೆ ಅನಿಲ ಸರಬರಾಜು ನಿಲ್ಲಿಸಿವೆ ಹಾಗೂ ಸಂಪರ್ಕವನ್ನೇ ಕಡಿತಗೊಳಿಸಿವೆ ಎಂಬ ಆರೋಪ ಕೇಳಿಬಂದಿದೆ.
ತಮಿಳುನಾಡು ಹಾಗೂ ಕರ್ನಾಟಕದ ಹಲವೆಡೆ ಇಂಥ ಘಟನೆಗಳು ನಡೆದ ವರದಿಗಳು ಬಂದಿವೆ. ಇದರಿಂದಾಗಿ ಜೀವನಾವಶ್ಯಕವಾದ ಅಡುಗೆ ಅನಿಲ ಸಿಲಿಂಡರ್ ಇಲ್ಲದೇ ಜನರು ಪರದಾಡುವಂತಾಗಿದೆ. ಪ್ರಮುಖವಾಗಿ ಇಂಡೇನ್ ಗ್ಯಾಸ್ ಸಂಪರ್ಕ ಹೊಂದಿದ ಗ್ರಾಹಕರಿಗೆ ಸಮಸ್ಯೆ ಎದುರಾಗುತ್ತಿದೆ. ‘ಆಧಾರ್ ನಂಬರ್ ನೀಡಿದರೆ ಮಾತ್ರ ಹೊಸ ರೀಫಿಲ್ ನೀಡಲಾಗುತ್ತದೆ. ಇಲ್ಲದಿದ್ದರೆ ಇಲ್ಲ ಎಂಬ ಉತ್ತರವನ್ನು ನೀಡಲಾಗುತ್ತಿದೆ. ಆಧಾರ್ ಸಂಖ್ಯೆ ನೀಡಿದ ನಂತರವಷ್ಟೇ ರೀಫಿಲ್ ಬುಕ್ಕಿಂಗ್ ಮಾಡಿಸಿ ಕೊಳ್ಳಲಾಗುತ್ತಿದೆ’ ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಗಳು ಇಂಡಿಯನ್ ಆಯಿಲ್ ಕಂಪನಿಯ ಪ್ರತಿನಿಧಿಯೊಬ್ಬರನ್ನು ಸಂಪರ್ಕಿಸಿ, ‘ಎಲ್ಲ ಅಗತ್ಯ ಸೇವೆಗಳ ಆಧಾರ್ ಸಂಯೋಜನೆ ಗಡುವನ್ನು ಸುಪ್ರೀಂ ಕೋರ್ಟು ಮಾರ್ಚ್ 31ಕ್ಕೆ ವಿಸ್ತರಿಸಿದೆಯಲ್ಲ?’ ಎಂದು ಪ್ರಶ್ನಿಸಿದಾಗ, ‘ನಮಗೆ ಇಂಡಿಯನ್ ಆಯಿಲ್ನಿಂದ ಏನು ಆದೇಶ ಬರುತ್ತದೋ ಅದನ್ನು ಪಾಲಿಸುತ್ತೇವೆ. ಡಿ.31ರ ಗಡುವು ಎಂಬ ಆದೇಶ ಕಳೆದ ತಿಂಗಳು ಬಂದಿತ್ತು. ಅಷ್ಟರೊಳಗೆ ಆಧಾರ್ ನೀಡದವರ ಸಂಪರ್ಕ ಬ್ಲಾಕ್ ಮಾಡುವಂತೆ ಸೂಚಿಸಲಾಗಿತ್ತು. ಗಡುವು ವಿಸ್ತರಣೆಯ ಯಾವುದೇ ಆದೇಶ ನಮಗೆ ಕಂಪನಿಯಿಂದ ಬಂದಿಲ್ಲ’ ಎಂದು ಉತ್ತರಿಸಿದರು.
ಆದರೆ ಇಂಡಿಯನ್ ಆಯಿಲ್ ಕಂಪನಿಯ ಚೆನ್ನೈ ಚೀಫ್ ಏರಿಯಾ ಮ್ಯಾನೇಜರ್ ಎಸ್. ಕುಮಾರ್ ವಿಭಿನ್ನ ಹೇಳಿಕೆ ನೀಡಿ, ‘ಕೆವೈಸಿ (ನೋ ಯುವರ್ ಕಸ್ಟಮರ್) ಫಾರಂ ಅನ್ನು ಯಾರು ಸಲ್ಲಿಸಿಲ್ಲವೋ ಅವರಿಗೆ ಮಾತ್ರ ಸಂಪರ್ಕ ಬ್ಲಾಕ್ ಮಾಡಲಾಗುತ್ತಿದೆ. ಸಂಪರ್ಕವನ್ನು ರದ್ದುಗೊಳಿಸಿಲ್ಲ. ಕೆವೈಸಿ ನೀಡಿದ ಬಳಿಕ ಸಂಪರ್ಕ ಪುನಾರಂಭಿಸುತ್ತೇವೆ’ ಎಂದರು.