ಜಮೀನು ವಿಚಾರವಾಗಿ ನಡೆದ ಗಲಾಟೆ ಮೂವರು ಮಹಿಳೆಯರು ಸೇರಿದಂತೆ ಒಟ್ಟಾರೆ 9 ಮಂದಿಯ ಸಾವಿನಲ್ಲಿ ಅಂತ್ಯವಾಗಿದೆ.  ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ದುರ್ಘಟನೆ ನಡೆದಿದೆ.

ಸೋನ್‌ಭದ್ರಾ/ಲಖನೌ [ಜು.18]: ಭೂ ವ್ಯಾಜ್ಯದ ಕುರಿತಾಗಿ ಆರಂಭವಾದ ಗಲಾಟೆ ಮೂವರು ಮಹಿಳೆಯರು ಸೇರಿದಂತೆ ಒಟ್ಟಾರೆ 9 ಮಂದಿಯ ಸಾವಿನಲ್ಲಿ ಅಂತ್ಯವಾದ ದುರಂತ ಘಟನೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ. ಅಲ್ಲದೆ, ಈ ದುರ್ಘಟನೆಯಲ್ಲಿ 19 ಮಂದಿ ಗ್ರಾಮಸ್ಥರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಾದಿತ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಸೋನ್‌ಭದ್ರಾ ಜಿಲ್ಲೆಯ ಘೋರವಾಲ್‌ ಪಟ್ಟಣದಲ್ಲಿರುವ ಜಮೀನನ್ನು ಐಎಎಸ್‌ ಅಧಿಕಾರಿಯೊಬ್ಬರು ಸ್ಥಳೀಯ ಗ್ರಾಮ ಮುಖಂಡ ಯಜ್ಞದತ್‌ ಎನ್ನುವವರಿಗೆ ಮಾರಿದ್ದರು. ಆದರೆ ಜಮೀನಿನ ಕುರಿತು ಗ್ರಾಮಸ್ಥರ ಆಕ್ಷೇಪವಿತ್ತು. ಈ ನಡುವೆ ವಿವಾದಿತ ಜಮೀನನ್ನು ವಶಕ್ಕೆ ಪಡೆಯಲು ಯಜ್ಞದತ್‌ ಬುಧವಾರ 10-12 ಟ್ರಾಕ್ಟರ್‌ಗಳಲ್ಲಿ ತನ್ನ ಹಿಂಬಾಲಕರ ಜೊತೆಗೂಡಿ ಬಂದಿದ್ದರು. ಈ ವೇಳೆ ಗ್ರಾಮಸ್ಥರು ಮತ್ತು ಯಜ್ಞದತ್‌ ಬೆಂಬಲಿಗರ ನಡುವೆ ವಾಕ್ಸಮರ ನಡೆದಿತ್ತು.

ಈ ವೇಳೆ ಯಜ್ಞದತ್‌ನ ಬೆಂಬಲಿಗರು ಏಕಾಏಕಿ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ತುತ್ತಾದ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಗಾಯಗೊಂಡ 9 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಗ್ರಾಮದ ಮುಖ್ಯಸ್ಥ ಇಬ್ಬರು ಅಳಿಯಂದಿರಾದ ಗಿರಿಜೇಶ್‌ ಹಾಗೂ ವಿಮಲೇಶ್‌ ಎಂಬುವರನ್ನು ಬಂಧಿಸಿದ ಪೊಲೀಸರು, ತಲೆ ಮರೆಸಿಕೊಂಡ ಗ್ರಾಮದ ಮುಖ್ಯಸ್ಥ ಹಾಗೂ ಈ ಶೂಟೌಟ್‌ನಲ್ಲಿ ಭಾಗಿಯಾದವರ ದಸ್ತಗಿರಿಗಾಗಿ ಮನೆ-ಮನೆಯನ್ನು ಶೋಧಿಸುತ್ತಿದ್ದಾರೆ.

ರಾಜಕೀಯ ವಾಕ್ಸಮರ:

ಈ ಘಟನೆಯನ್ನು ರಾಜಕೀಯ ಕಾರಣಕ್ಕೆ ಬಳಸಿಕೊಂಡಿರುವ ವಿಪಕ್ಷಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಕಿಡಿಕಾರಿದೆ. ಮತ್ತೊಂದೆಡೆ ಈ ಬಗ್ಗೆ ತನಿಖೆ ಕೈಗೊಂಡು ಗಲಭೆಗೆ ಕಾರಣವೇನು ಎಂಬುದರ ಬಗ್ಗೆ 24 ಗಂಟೆಯಲ್ಲಿ ಪತ್ತೆ ಹಚ್ಚುವಂತೆ ಮಿರ್ಜಾಪುರ ಆಯುಕ್ತ ಹಾಗೂ ವಾರಾಣಸಿ ವಲಯದ ಎಡಿಜಿಪಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನಿರ್ದೇಶನ ನೀಡಿದ್ದಾರೆ.