ಬೆಂಗಳೂರು, ಮೈಸೂರು ಪ್ರದೇಶಗಳಂತೆಯೇ ಉತ್ತರ ಕರ್ನಾಟಕದಲ್ಲಿಯೂ ಉತ್ತಮ ರಸ್ತೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ 8ನೇ ತರಗತಿಯ ಬಾಲಕನೊಬ್ಬನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿ ಕಳಿಸಿದ ಘಟನೆ ಇಲ್ಲಿನ ಸಕ್ರ್ಯೂಟ್ ಹೌಸ್ನಲ್ಲಿ ಭಾನುವಾರ ನಡೆದಿದೆ.

ಹುಬ್ಬಳ್ಳಿ(ಜೂ.12): ಬೆಂಗಳೂರು, ಮೈಸೂರು ಪ್ರದೇಶಗಳಂತೆಯೇ ಉತ್ತರ ಕರ್ನಾಟಕದಲ್ಲಿಯೂ ಉತ್ತಮ ರಸ್ತೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ 8ನೇ ತರಗತಿಯ ಬಾಲಕನೊಬ್ಬನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿ ಕಳಿಸಿದ ಘಟನೆ ಇಲ್ಲಿನ ಸಕ್ರ್ಯೂಟ್ ಹೌಸ್ನಲ್ಲಿ ಭಾನುವಾರ ನಡೆದಿದೆ.

Add Asianetnews Kannada as a Preferred SourcegooglePreferred

ಇಲ್ಲಿನ ಎಂ.ಆರ್. ಸಾಕರೆ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಆರ್ಯನ್ ಗಿರಿ ಎಂಬಾತ ಭಾನುವಾರ ಬೆಳಗ್ಗೆ ಸುಮಾರು 9 ಗಂಟೆಗೆ ಸಕ್ರ್ಯೂಟ್ ಹೌಸ್ಗೆ ಆಗಮಿಸಿದ್ದ. ಹಿಂದಿನ ರಾತ್ರಿಯೂ ತನ್ನ ತಂದೆಯೊಂದಿಗೆ ಸಕ್ರ್ಯೂಟ್ ಹೌಸ್ಗೆ ಬಾಲಕ ಆಗಮಿಸಿದ್ದ. ಮುಖ್ಯಮಂತ್ರಿಯವರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು ಬೆಳಗ್ಗೆ ಆಗಮಿಸುವಂತೆ ಪೊಲೀಸರು ಕಳಿಸಿದ್ದರು. ಮತ್ತೆ ಬೆಳಗ್ಗೆ ಬಂದ ಆರ್ಯನ್ ಅನ್ನು ಗಮನಿಸಿದ ಶಾಸಕ ಪ್ರಸಾದ ಅಬ್ಬಯ್ಯ, ಒಳಗೆ ಕರೆದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿಸಿದ್ದಾರೆ. ಬಾಲಕನ ಹೆಸರು, ಶಾಲೆ, ಓದುತ್ತಿರುವ ಮಾಧ್ಯಮದ ವಿವರ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕನ್ನಡ ಮಾಧ್ಯಮದಲ್ಲಿ ಓದಬೇಕು, ಕನ್ನಡ ಓದಲು ಹಾಗೂ ಬರೆಯಲು ಬರುತ್ತದೆಯೇ?' ಎಂದು ಪ್ರಶ್ನಿಸಿದ್ದಾರೆ.

ತಾನು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದರೂ ಕನ್ನಡದಲ್ಲಿ ಓದಲು, ಬರೆಯಲು ಬರುತ್ತದೆ ಎಂದು ಹೇಳಿದ ಬಾಲಕ ಆರ್ಯನ್, ಉತ್ತರ ಕರ್ನಾಟಕದಲ್ಲಿ ರಸ್ತೆಗಳು ಹದಗೆಟ್ಟಿವೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬೆಂಗಳೂರು- ಮೈಸೂರಿನಲ್ಲಿರುವಂತೆ ಇಲ್ಲಿಯೂ ಉತ್ತಮ ರಸ್ತೆ ಹಾಗೂ ಮತ್ತಿತರ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿದ್ದಾನೆ.

ಬಾಲಕನ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೇಡಿಕೆಗಳನ್ನು ಸರ್ಕಾರ ಹಂತಹಂತವಾಗಿ ಈಡೇರಿಸುತ್ತಿದೆ ಎಂದು ಹೇಳಿ ತಾವು ಇದುವರೆಗೆ ಜಾರಿಗೊಳಿಸಿರುವ ವಿವಿಧ ಭಾಗ್ಯಗಳ ಬಗ್ಗೆ ಮಾಹಿತಿ ನೀಡಿ ಆತನನ್ನು ಅಲ್ಲಿಂದ ಕಳುಹಿಸಿದ್ದಾರೆ. ಸುಮಾರು 15 ನಿಮಿಷಗಳವರೆಗೆ ಬಾಲಕ ಆರ್ಯನ್ ಮುಖ್ಯಮಂತ್ರಿಯವರಿದ್ದ ಸಕ್ರ್ಯೂಟ್ ಹೌಸ್ನ ಕೊಠಡಿಯಲ್ಲಿ ಕಾಲ ಕಳೆದಿದ್ದಾನೆ.