ಕಾಶ್ಮೀರ ಎಲ್ಲಕ್ಕಿಂತ ಮುಖ್ಯ: ಮೋದಿ ಮಾತಲ್ಲಿ ಕಂಡ ಭಾರತದ ಐಕ್ಯ!
ಪ್ರಧಾನಿ ಮೋದಿ 2.0 ಸರ್ಕಾರಕ್ಕೆ ಭರ್ತಿ 75 ದಿನಗಳು| ಐಎಎನ್ಎಸ್ ಸುದ್ದಿ ಸಂಸ್ಥೆಗೆ ವಿಶೇಷ ಸಂದರ್ಶನ ನೀಡಿದ ಪ್ರಧಾನಿ| 75 ದಿನಗಳ ಸಾಧನೆಯ ವರದಿ ನೀಡಿದ ಪ್ರಧಾನಿ ಮೋದಿ| 370ನೇ ವಿಧಿ, 35ಎ ಕಲಂ ರದ್ದತಿ ನಿರ್ಣಯ ಐತಿಹಾಸಿಕ ಎಂದ ಮೋದಿ| ‘ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿ ಸಮಾಧಾನ ತಂದಿದೆ’| ತಮ್ಮ ಸರ್ಕಾರದ ಸಾಧನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರಧಾನಿ| ಭವಿಷ್ಯದ ಯೋಜನೆಗಳು, ನಿರ್ಣಯಗಳ ಕುರಿತು ಮನಬಿಚ್ಚಿ ಮಾತನಾಡಿದ ಮೋದಿ|
ನವದೆಹಲಿ(ಆ.14): ನನ್ನ ಸರ್ಕಾರಕ್ಕೆ ಜಮ್ಮು ಮತ್ತು ಕಾಶ್ಮೀರದ ಸುರಕ್ಷತೆಗಿಂತ ಹೆಚ್ಚಿನ ಮಹತ್ವದ ವಿಷಯ ಯಾವುದೂ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ತಮ್ಮ ನೇತೃತ್ವದ ಎನ್’ಡಿಎ-2 ಸರ್ಕಾರ ಅಧಿಕಾರಕ್ಕೆ ಬಂದು 75 ದಿನಗಳು ಸಂದ ಹಿನ್ನೆಲೆಯಲ್ಲಿ, ಐಎಎನ್ಎಸ್ ಸುದ್ದಿ ಸಂಸ್ಥೆಗೆ ಪ್ರಧಾನಿ ಮೋದಿ ವಿಶೇಷ ಸಂದರ್ಶನ ನೀಡಿದ್ದಾರೆ.
ಈ ವೇಳೆ ಕೇಂದ್ರ ಸರ್ಕಾರದ ಮುಂದಿರುವ ಆದ್ಯತಾ ವಿಷಯಗಳು, ಮುಂದಿನ ನಿರ್ಣಗಳು ಹಾಗೂ ಗುರಿಗಳ ಕುರಿತು ಪ್ರಧಾನಿ ಮೋದಿ ಮಾಹಿತಿ ನೀಡಿದರು.
ಸರ್ಕಾರ ಅಸ್ತಿತ್ವಕ್ಕೆ ಬಂದು ಕೇವಲ 75 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು, ತಮ್ಮ ಸರ್ಕಾರದ ಮಹತ್ವದ ಸಾಧನೆಗಳಲ್ಲಿ ಒಂದು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಣಯದಿಂದ ಕಣಿವೆಯ ಜನರ ಭವಿಷ್ಯ ಉಜ್ವಲವಾಗಲಿದ್ದು, ಈ ನಿರ್ಧಾರವನ್ನು ಭಾರತ ಸದಾ ಸ್ಮರಿಸಲಿದೆ ಎಂದು ಮೋದಿ ಹೇಳಿದ್ದಾರೆ. ದೇಶದ ಐಕ್ಯತೆಯ ಬಗ್ಗೆ ಉಡಾಫೆಯ ಮನೋಭಾವ ಹೊಂದಿರುವವರು, ಭಯೋತ್ಪಾದನೆ ಪೋಷಿಸುವ ಮೂಲಕ ರಾಜಕೀಯ ಲಾಭ ಪಡೆಯುವವರು ಮಾತ್ರ ಕೇಂದ್ರ ಸರ್ಕಾರದ ನಿರ್ಣಯವನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ಹರಿಹಾಯ್ದರು.
ಇದೇ ವೇಳೆ ತ್ರಿವಳಿ ತಲಾಖ್ ನಿಷೇಧಿಸುವ ಕಾನೂನು ಜಾರಿಗೆ ತಂದಿದ್ದು ತಮಗೆ ಸಮಾಧಾನ ತಂದಿದ್ದು, ಇದರಿಂದ ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿದ್ದ ಐತಿಹಾಸಿಕ ದೌರ್ಜನ್ಯಕ್ಕೆ ಇತಿಶ್ರೀ ಹಾಡಲಾಗಿದೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ಇನ್ನು ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ವ್ಯಾಪಾರಿಗಳಿಗೆ ಪಿಂಚಣಿ, ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆ ಮುಂತಾದ ಯೋಜನೆಗಳು ತಮ್ಮ ಸರ್ಕಾರದ ಸಾಧನೆ ಎಂದು ಪ್ರಧಾನಿ ನುಡಿದರು.
17ನೇ ಲೋಕಸಭೆಯ ಮೊದಲ ಅಧಿವೇಶನ 1952ರ ನಂತರ ನಡೆದ ಬಹಳ ಉತ್ತಮ, ಫಲಕಾರಿ ಅಧಿವೇಶನ ಎಂಬ ಖ್ಯಾತೆಗೆ ಪಾತ್ರವಾಗಿದೆ. ಸಂಸತ್ತಿನ ಸದಸ್ಯರು ದೇಶದ ಜನರ ಅಗತ್ಯ ಮತ್ತು ಆಶೋತ್ತರಗಳಿಗೆ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂಬುದು ತಮ್ಮ ಒತ್ತಾಸೆ ಎಂದು ಮೋದಿ ಹೇಳಿದರು.
ಕಳೆದ ಐದು ವರ್ಷದಲ್ಲಿ ಯೋಜಿಸಿದ್ದನ್ನು ಈ 75 ದಿನಗಳ ಅವಧಿಯಲ್ಲಿ ದೇಶಕ್ಕೆ ನೀಡಲಾಗಿದ್ದು, ದೇಶದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ತಮ್ಮ ಸರ್ಕಾರ ನಿರಂತರವಾಗಿ ಶ್ರಮಿಸಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.
ಪ್ರಮುಖವಾಗಿ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಬದಲಾವಣೆಗೆ ಮುನ್ನುಡಿ ಬರೆಯುವ ಮುನ್ಸೂಚನೆ ನೀಡಿದ ಪ್ರಧಾನಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಲದಾವಣೆ ತರುವ ಮೂಲಕ ಎಲ್ಲರಿಗೂ ಶಿಕ್ಷಣದಜನಸನ್ನು ಈಡೇರಿಸಲಾಗುವು ಎಂದು ಪ್ರಧಾನಿ ಸ್ಷಷ್ಟಪಡಿಸಿದರು.
ಸಮಯ ವ್ಯರ್ಥ ಮಾಡದೇ ನಿರ್ದಿಷ್ಟ ಗುರಿಯತ್ತ ಮುನ್ನುಗ್ಗುವುದು ತಮ್ಮ ಸರ್ಕಾರದ ಗುಣವಾಗಿದ್ದು, ಅದರಂತೆ ಭಾರತದ ಭವಿಷ್ಯ ಬದಲಿಸಲು ಹಗಲಿರುಳು ಶ್ರಮಿಸಲು ಸರ್ವ ಸನ್ನದ್ಧವಾಗಿರುವುದಾಗಿ ಪ್ರಧಾನಿ ಮೋದಿ ಹೇಳಿದರು.