ಶೀಘ್ರದಲ್ಲೇ ದೇಶದ ಎಟಿಎಂ ಬಂದ್? ಏಕೆ..?
ದೇಶದಲ್ಲಿ ಶೀಘ್ರದಲ್ಲೇ ಎಟಿಎಂಗಳನ್ನು ಬಂದ್ ಮಾಡಲಾಗುತ್ತದೆ. ದೇಶದಾದ್ಯಂತ ಸುಮಾರು ಶೇ.50ರಷ್ಟು ಎಟಿಎಂಗಳನ್ನು ಬಂದ್ ಮಾಡಿ ಸಾಫ್ಟ್ವೇರ್ ಹಾಗೂ ಹಾರ್ಡ್ವೇರ್ ಅಪ್ಡೇಟ್ ಮಾಡಲಾಗುತ್ತದೆ.
ಮುಂಬೈ: ಎಟಿಎಂ ಯಂತ್ರಗಳಲ್ಲಿ ಸರ್ಕಾರ ಸೂಚಿಸಿರುವ ನಿಯಂತ್ರಿತ ಬದಲಾವಣಾ ನಿಯಮಗಳನ್ನು ಪಾಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 2019ರ ಮಾರ್ಚ್ ವೇಳೆಗೆ ದೇಶದ 2.38 ಲಕ್ಷ ಎಟಿಎಂಗಳ ಪೈಕಿ ಅರ್ಧದಷ್ಟುಎಟಿಎಂ ಯಂತ್ರಗಳನ್ನು ಸ್ಥಗಿತಗೊಳ್ಳಬಹುದು ಎಂದು ಎಟಿಎಂ ಕೈಗಾರಿಕೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
2019ರ ಮಾಚ್ರ್ ವೇಳೆಗೆ ಗ್ರಾಮೀಣ ಭಾಗಗಳ 1.13 ಲಕ್ಷ ಎಟಿಎಂಗಳನ್ನು ಸೇವಾ ಪೂರೈಕೆದಾರರು ಮುಚ್ಚಬೇಕಾಗಿ ಬರಬಹುದು. ಇವುಗಳಲ್ಲಿ ಹೆಚ್ಚಿನವು ಗ್ರಾಮೀಣ ಭಾಗದ ಎಟಿಎಂಗಳಾಗಿರಲಿವೆ. ಇದರಿಂದಾಗಿ ಸಾವಿರಾರು ಉದ್ಯೋಗ ನಷ್ಟಹಾಗೂ ಸರ್ಕಾರದ ಸಬ್ಸಿಡಿಗಳನ್ನು ಪಡೆಯುತ್ತಿರುವ ಫಲಾನುಭವಿಗಳು ಗ್ರಾಮೀಣ ಭಾಗದವರಾಗಿರುವುದರಿಂದ ಹಣಕಾಸು ಒಳಗೊಳ್ಳುವಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಎಟಿಎಂ ಸ್ಥಗಿತ ಏಕೆ?
ಇತ್ತೀಚಿನ ನಿಯಂತ್ರಿತ ಬದಲಾವಣೆ ನಿಯಮಾವಳಿಯ ಪ್ರಕಾರ, ಎಟಿಎಂಗಳ ಸಾಫ್ಟ್ವೇರ್ ಹಾಗೂ ಹಾರ್ಡ್ವೇರ್ ಅಪ್ಡೇಟ್ ಮಾಡಬೇಕಿದೆ. ಜೊತೆಗೆ ಹಣ ನಿರ್ವಹಣೆ ಗುಣಮಟ್ಟಹಾಗೂ ಕ್ಯಾಸೆಟ್ ಸ್ವೈಪ್ ವಿಧಾನವನ್ನು ಅಳವಡಿಸಬೇಕಿದೆ. ಹೊಸ ಮಾದರಿ ಹಣ ವಿತರಣೆ ಹಾಗೂ ಕ್ಯಾಸೆಟ್ ಸ್ವೈಪ್ ವ್ಯವಸ್ಥೆ ಅಳವಡಿಸಲು 3000 ಕೋಟಿ ರು. ವೆಚ್ಚವಾಗಲಿದೆ. ಒಂದು ವೇಳೆ ಬ್ಯಾಂಕ್ಗಳು ಹೆಚ್ಚುವರಿ ವೆಚ್ಚವನ್ನು ಭರಿಸದೇ ಇದ್ದರೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯ. ಒಂದು ವೇಳೆ ಬ್ಯಾಂಕುಗಳು ಪರಿಹಾರ ನೀಡಲು ಒಪ್ಪದೇ ಇದ್ದರೆ ಎಟಿಎಂಗಳನ್ನು ಮುಚ್ಚಬೇಕಾಗಿ ಬರಬಹುದು ಎಂದು ಕೈಗಾರಿಕಾ ಒಕ್ಕೂಟ ತಿಳಿಸಿದೆ.