ಶ್ರುತಿ ವಿರುದ್ಧ ಸರ್ಜಾ ಕೇಸ್ : ಕೋರಿದ ಪರಿಹಾರದ ಮೊತ್ತವೆಷ್ಟು ಕೋಟಿ..?
ನಟಿ ಶ್ರುತಿ ಹರಿಹರನ್ ವಿರುದ್ಧ ಹಿರಿಯ ನಟ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಐದು ಕೋಟಿ ರು. ಪರಿಹಾರ ಕೋರಿ ನಗರದ ಸಿವಿಲ್ ನ್ಯಾಯಾಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಬೆಂಗಳೂರು: ‘ವಿಸ್ಮಯ’ ಚಿತ್ರದ ಚಿತ್ರೀಕರಣ ವೇಳೆ ತಮ್ಮೊಂದಿಗೆ ಅನುಚಿತವಾಗಿ ನಡೆದುಕೊಂಡರು ಎಂದು ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ವಿರುದ್ಧ ಹಿರಿಯ ನಟ ಅರ್ಜುನ್ ಸರ್ಜಾ ಐದು ಕೋಟಿ ರು. ಪರಿಹಾರ ಕೋರಿ ನಗರದ ಸಿವಿಲ್ ನ್ಯಾಯಾಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಜೊತೆಗೆ ಶ್ರುತಿ ಹರಿಹರನ್ ತಮ್ಮ ವಿರುದ್ಧ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಹೇಳಿಕೆ ಪ್ರಕಟಿಸುವ ಮೂಲಕ ತಮ್ಮ ಮಾನ ಹರಾಜು ಹಾಕುತ್ತಿದ್ದಾರೆ. ಹೀಗಾಗಿ ತಮ್ಮ ವಿರುದ್ಧ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿ ಮಾನಹಾನಿ ಹೇಳಿಕೆ ಪ್ರಕಟ ಮಾಡದಂತೆ ಶೃತಿ ಹರಿಹರನ್ ಅವರಿಗೆ ನಿರ್ಬಂಧ ಹೇರಿ ಮಧ್ಯಂತರ ಆದೇಶ ಮಾಡುವಂತೆ ಸರ್ಜಾ ಕೋರಿದ್ದಾರೆ.
ಈ ಮಧ್ಯಂತರ ಮನವಿ ಕುರಿತ ತೀರ್ಪನ್ನು ಶುಕ್ರವಾರ ಪ್ರಕಟಿಸುವುದಾಗಿ ನಗರದ ಮೇಯೋಹಾಲ್ ಸಂಕೀರ್ಣದಲ್ಲಿರುವ ಹೆಚ್ಚುವರಿ 29ನೇ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಾದ ಜೆ.ಆರ್.ಮೆಂಡೋನ್ಸಾ ಅವರು ತಿಳಿಸಿದ್ದಾರೆ. ಈ ಮಧ್ಯೆ ಅರ್ಜುನ್ ಸರ್ಜಾ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಪವರ್ ಆಫ್ ಅಟಾರ್ನಿಯನ್ನು ತಮ್ಮ ಸಂಬಂಧಿಯಾದ ನಟ ಧ್ರುವ ಸರ್ಜಾಗೆ ನೀಡಿದ್ದಾರೆ. ಹೀಗಾಗಿ ಧ್ರುವ ಅವರು ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಸುತ್ತಾರೆ.