ಕುಮಾರಧಾರಾದಲ್ಲಿ ಸ್ನಾನಕ್ಕಿಳಿದ ವಿದ್ಯಾರ್ಥಿ ನೀರುಪಾಲು
ತನ್ನ ಸಹಪಾಠಿಗಳ ಜತೆಗೆ ಸಂಜೆ ಕುಮಾರಧಾರಾ ನದಿಗೆ ಸ್ನಾನಕ್ಕೆಂದು ತೆರಳಿದ್ದರು. ಸ್ನಾನ ಮಾಡುತ್ತಿದ್ದಾಗ ಹೇಮಂತ್ ನಿಯಂತ್ರಣ ತಪ್ಪಿ ನೀರು ಪಾಲಾಗಿದ್ದಾರೆ.
ಪುತ್ತೂರು(ನ.22): ಸಹಪಾಠಿಗಳೊಂದಿಗೆ ಕುಮಾರಧಾರಾ ನದಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರುಪಾಲಾದ ಘಟನೆ ಇಂದು ಸಂಜೆ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಸಮೀಪದ ಕಠಾರ ಕೊಡಿಮರ ಎಂಬಲ್ಲಿ ಸಂಭವಿಸಿದೆ.
ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಹೇಮಂತ್ ನೀರುಪಾಲಾದ ದುರ್ದೈವಿ. ಹೇಮಂತ್ ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಪರಮೇಶ್ವರ ನಾಯಕ ಎಂಬವರ ಪುತ್ರ. ಇವರು ಪುತ್ತೂರಿನಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸ್ತವ್ಯವಿದ್ದು ಎಂಜಿನಿಯರಿಂಗ್ ಓದುತ್ತಿದ್ದರು. ತನ್ನ ಸಹಪಾಠಿಗಳ ಜತೆಗೆ ಸಂಜೆ ಕುಮಾರಧಾರಾ ನದಿಗೆ ಸ್ನಾನಕ್ಕೆಂದು ತೆರಳಿದ್ದರು. ಸ್ನಾನ ಮಾಡುತ್ತಿದ್ದಾಗ ಹೇಮಂತ್ ನಿಯಂತ್ರಣ ತಪ್ಪಿ ನೀರು ಪಾಲಾಗಿದ್ದಾರೆ. ಈಜು ಗೊತ್ತಿಲ್ಲದ ಕಾರಣ ಇವರು ನೀರಿನ ಸೆಳೆತಕ್ಕೆ ಸಿಲುಕಿದರು. ಇತರ ವಿದ್ಯಾರ್ಥಿಗಳು ತಕ್ಷಣ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದ ಅಗ್ನಿಶಾಮಕ ದಳದ ಘಟಕ ಪುತ್ತೂರಿನಿಂದ ಸ್ಥಳಕ್ಕೆ ಧಾವಿಸಿ ಪತ್ತೆ ಕಾರ್ಯ ನಡೆಸುತ್ತಿದೆ. ಆದರೆ ರಾತ್ರಿಯ ತನಕ ಶವ ಪತ್ತೆಯಾಗಿಲ್ಲ.
ಸಹೋದರರಿಬ್ಬರು ನೀರು ಪಾಲು
ತೀರ್ಥಹಳ್ಳಿ: ಸ್ನಾನಕ್ಕೆಂದು ನದಿಗಿಳಿದ ಇಬ್ಬರು ಯುವಕರು ಮೃತಪಟ್ಟ ದುರ್ಘಟನೆ ಕಮ್ಮರಡಿ ಸಮೀಪದ ಕೇಳೂರಿನಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ಕೇಳೂರಿನ ಸಮೀಪದಲ್ಲಿರುವ ಮಾಲತಿ ನದಿಗೆ ಸ್ನಾನಕ್ಕೆಂದು ಹೋಗಿದ್ದ ಆದೇಶ(20) ಹಾಗೂ ಅಭಿಷೇಕ್ (24) ಇಬ್ಬರೂ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದು, ಇದೂವರೆಗೆ ಮೃತರ ಶವ ಸಿಕ್ಕಿಲ್ಲ.
ಕೇಳೂರು ನಿವಾಸಿಯಾಗಿರುವ ಸತೀಶ್'ರ ಮಕ್ಕಳಾಗಿದ್ದು, ಮೃತರ ಮನೆಯಲ್ಲಿ ಶೋಕ ಮಡುಗಟ್ಟಿದೆ.