1993ರ ಮುಂಬೈ ಸರಣಿ ಸ್ಫೋಟ: ಅಬು ಸಲೆಮ್ ಸೇರಿ 6 ಜನರು ದೋಷಿಗಳೆಂದು ಕೋರ್ಟ್ ತೀರ್ಪು
ಅಬುಲ್ ಸಲೆಮ್, ಮುಸ್ತಾಫಾ ದೋಸ್ಸಾ, ತಾಹಿರ್ ಮರ್ಚೆಂಟ್ ಮತ್ತು ಫಿರೋಜ್ ಖಾನ್ ಅವರು ಬಾಂಬ್ ಸ್ಫೋಟ ಪ್ರಕರಣದ ಸಂಚು ರೂಪಿಸಿದವರಲ್ಲಿ ಪ್ರಮುಖರು ಎಂಬುದು ನ್ಯಾಯಾಲಯದ ಅನಿಸಿಕೆ. ಜೂನ್ 19ರಂದು ಎಲ್ಲಾ ದೋಷಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಪ್ರಕಟಿಸಲಿದೆ. ಒಟ್ಟಿನಲ್ಲಿ 24 ವರ್ಷಗಳ ಬಳಿಕ ಪ್ರಕರಣದಲ್ಲಿ ನ್ಯಾಯ ತೀರ್ಮಾನವಾಗಿದೆ.
ಮುಂಬೈ(ಜೂನ್ 16): 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕೊನೆಗೂ ನ್ಯಾಯ ತೀರ್ಮಾನವಾಗಿದೆ. ಎರಡು ದಶಕಗಳ ಸುದೀರ್ಘ ವಿಚಾರಣೆ ಬಳಿಕ ಟಾಡಾ ನ್ಯಾಯಾಲಯವು ಇಂದು ತೀರ್ಪು ನೀಡಿದೆ. ಭೂಗತಪಾತಕಿ ಅಬು ಸಲೆಮ್ ಹಾಗೂ ಇತರ 5 ಮಂದಿ ದೋಷಿಗಳೆಂದು ಕೋರ್ಟ್ ತೀರ್ಮಾನಿಸಿದೆ. ಅಬು ಸಲೆಮ್, ಮುಸ್ತಾಫ ದೋಸ್ಸಾ, ಫಿರೋಜ್ ಅಬ್ದುಲ್ ರಷೀದ್ ಖಾನ್, ತಾಹಿರ್ ಮರ್ಚೆಂಟ್, ಕರೀಮುಲ್ಲಾ ಶೇಖ್ ಮತ್ತು ರಿಯಾಜ್ ಸಿದ್ದಿಕಿ ಅವರನ್ನು ಅಪರಾಧಿಗಳೆಂದು ವಿಶೇಷ ಟಾಟಾ ನ್ಯಾಯಾಲಯ ಹೆಸರಿಸಿದೆ. ಮತ್ತೊಬ್ಬ ಆರೋಪಿ ಅಬ್ದುಲ್ ಖುವಾಯುಮ್'ರನ್ನು ಕೋರ್ಟ್ ಖುಲಾಸೆಗೊಳಿಸಿದೆ. ನಟ ಸಂಜಯ್ ದತ್ ಅವರಿಗೆ ನಿಷೇಧಿತ ಎಕೆ-47 ರೈಫಲ್ ಒದಗಿಸಿದ ಆರೋಪ ಅಬ್ದುಲ್ ಖುವಾಯುಮ್'ನ ಮೇಲಿತ್ತು.
ಅಬುಲ್ ಸಲೆಮ್, ಮುಸ್ತಾಫಾ ದೋಸ್ಸಾ, ತಾಹಿರ್ ಮರ್ಚೆಂಟ್ ಮತ್ತು ಫಿರೋಜ್ ಖಾನ್ ಅವರು ಬಾಂಬ್ ಸ್ಫೋಟ ಪ್ರಕರಣದ ಸಂಚು ರೂಪಿಸಿದವರಲ್ಲಿ ಪ್ರಮುಖರು ಎಂಬುದು ನ್ಯಾಯಾಲಯದ ಅನಿಸಿಕೆ. ಜೂನ್ 19ರಂದು ಎಲ್ಲಾ ದೋಷಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಪ್ರಕಟಿಸಲಿದೆ. ಎಲ್ಲಾ ದೋಷಿಗಳಿಗೂ ಮರಣದಂಡನೆ ಶಿಕ್ಷೆಯಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ 24 ವರ್ಷಗಳ ಬಳಿಕ ಪ್ರಕರಣದಲ್ಲಿ ನ್ಯಾಯ ತೀರ್ಮಾನವಾಗಿದೆ.
ಬಾಂಬ್ ಸ್ಫೋಟದ ಬಳಿಕ ದೇಶದಿಂದ ತಪ್ಪಿಸಿಕೊಂಡು ಹೋಗಿದ್ದ 48 ವರ್ಷದ ಅಬು ಸಲೆಮ್'ನನ್ನು 2002ರಲ್ಲಿ ಪೋರ್ಚುಗಲ್'ನಲ್ಲಿ ಬಂಧಿಸಲಾಗಿತ್ತು. 2005ರಲ್ಲಿ ಪೋರ್ಚುಗಲ್ ದೇಶವು ಆತನನ್ನು ಭಾರತಕ್ಕೆ ಹಸ್ತಾಂತರಿಸಿತ್ತು.
1993ರಲ್ಲಿ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನರು ದಾರುಣವಾಗಿ ಬಲಿಯಾಗಿದ್ದರು; 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.