ಪ್ರಸಾರ ಬಂದ್ ಮಾಡಿ ಎಂದು ಎನ್'ಡಿಟಿವಿ'ಗೆ ಶಿಕ್ಷೆ ಕೊಟ್ಟ ಸರ್ಕಾರ : ಸೂಕ್ಷ್ಮ ವಿಚಾರ ಪ್ರಸರಿಸಿದಕ್ಕೆ ಕ್ರಮ
ಸುದ್ದಿ ಪ್ರಸಾರ ಮಾಡದಂತೆ ಮಾಹಿತಿ ಮತ್ತು ತಂತ್ರಜ್ಞಾನದ ಆಂತರಿಕ ಸಮಿತಿ ಎನ್ ಡಿಟಿವಿಗೆ ಆದೇಶಿಸಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ಜನವರಿ ತಿಂಗಳಿನಲ್ಲಿ ನಡೆಸಲಾದ ಕಾರ್ಯಾಚರಣೆ ವೇಳೆ ಕೆಲ ಸೂಕ್ಷ್ಮ ಮಾಹಿತಿಗಳನ್ನು ವಾಹಿನಿ ಬಹಿರಂಗಪಡಿಸಿತ್ತು.
ನವದೆಹಲಿ(ನ.3): ಪಠಾಣ್ ಕೋಟ್ ಉಗ್ರರ ದಾಳಿ ಸಂದರ್ಭದಲ್ಲಿ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸುವ ಮೂಲಕ ಪ್ರಸಾರ ನಿಯಮ ಉಲ್ಲಂಘಿಸಿದೆ ಎಂಬ ಆರೋಪದಡಿ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ ಎನ್ನಲಾಗ್ತಿದೆ. ಎನ್ ಡಿಟಿವಿ ಇಂಡಿಯಾಗೆ 1 ದಿನದ ಕಾಲ ಯಾವುದೇ ಕಾರ್ಯಕ್ರಮಗಳು, ಸುದ್ದಿ ಪ್ರಸಾರ ಮಾಡದಂತೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಶಿಫಾರಸು ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಉಗ್ರರ ದಾಳಿಗಳ ಸುದ್ದಿ ಬಿತ್ತರದ ಕುರಿತು ವಾಹಿನಿಯೊಂದರ ವಿರುದ್ಧ ನೀಡಲಾಗುವ ಮೊದಲ ಆದೇಶ ಇದಾಗಲಿದ್ದು, ನ.9ರಂದು ಯಾವುದೇ ರೀತಿಯ ಕಾರ್ಯಾಚರಣೆಗಳು ಹಾಗೂ ಸುದ್ದಿ ಪ್ರಸಾರ ಮಾಡದಂತೆ ಮಾಹಿತಿ ಮತ್ತು ತಂತ್ರಜ್ಞಾನದ ಆಂತರಿಕ ಸಮಿತಿ ಎನ್ ಡಿಟಿವಿಗೆ ಆದೇಶಿಸಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ಜನವರಿ ತಿಂಗಳಿನಲ್ಲಿ ನಡೆಸಲಾದ ಕಾರ್ಯಾಚರಣೆ ವೇಳೆ ಕೆಲ ಸೂಕ್ಷ್ಮ ಮಾಹಿತಿಗಳನ್ನು ವಾಹಿನಿ ಬಹಿರಂಗಪಡಿಸಿತ್ತು.
ಪಠಾಣ್ ಕೋಟ್ ವಾಯುನೆಲೆಯಲ್ಲಿದ್ದ ಶಸ್ತ್ರಾಸ್ತ್ರಗಳ ದಾಸ್ತಾನು, ಮಿಗ್, ಯುದ್ಧ ವಿಮಾನಗಳು, ರಾಕೆಟ್ ಉಡಾವಕಗಳು, ಮಾರ್ಟರ್ ಗಳು ಹೆಲಿಕಾಪ್ಟರ್ ಗಳು, ಇಂದನ್ ಟ್ಯಾಂಕ್ ಇತ್ಯಾದಿಗಳ ವಿವರಗಳನ್ನು ವಾಹಿನಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರಸಾರ ನಿಯಮ ಉಲ್ಲಂಘನೆ ಮಾಡಿದ ವಾಹಿನಿ ವಿರುದ್ದ ಸಮಿತಿ ಕ್ರಮಕೈಗೊಳ್ಳಲು ಮುಂದಾಗಿದ್ದು, ಈಗಾಗಲೇ ಶೋಕಾಸ್ ನೋಟಿಸ್ ನ್ನು ವಾಹಿನಿಗೆ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.