Asianet Suvarna News Asianet Suvarna News

Uday Huttinagadde Passes Away; ಕನ್ನಡದ ಹಿರಿಯ ನಟ ಉದಯ್ ಹುತ್ತಿನಗದ್ದೆ ಇನ್ನಿಲ್ಲ

ಕನ್ನಡದ ಹಿರಿಯ ನಟ ಉದಯ್ ಹುತ್ತಿನಗದ್ದೆ ಇಹಲೋಕ ತ್ಯಜಿಸಿದ್ದಾರೆ.  1988 ರಲ್ಲಿ ಡಾ.ರಾಜ್ ಕುಮಾರ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ದೇವತಾ ಮನುಷ್ಯ ಸೇರಿ ಹಲವು ಚಿತ್ರದಲ್ಲಿ ಇವರು ನಟಿಸಿದ್ದರು.

Veteran Kannada actor  Uday Huttinagadde passes away gow
Author
Bengaluru, First Published Jun 2, 2022, 11:49 PM IST

ಬೆಂಗಳೂರು (ಜೂ.2): 80 ರ ದಶಕದ ಕೊನೆಯ ಹೊತ್ತಿಗೆ ತಮ್ಮ ನಿರ್ಮಾಣದ "ಆರಂಭ" ಎಂಬ ಸಿನಿಮಾ ದಲ್ಲಿ ನಾಯಕ ನಟನಾಗಿ ಮಿಂಚಿದ್ದ ಕನ್ನಡದ ಹಿರಿಯ ನಟ ಉದಯ್ ಹುತ್ತಿನಗದ್ದೆ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ರಾಜಾಜಿನಗರದ ತಮ್ಮ ಸ್ವಗೃಹದಲ್ಲಿ ನಟ ಉದಯ್ ಹುತ್ತಿನಗದ್ದೆ ಕೊನೆಯುಸಿರೆಳೆದಿದ್ದಾರೆ. 

 1987ರಲ್ಲಿ ಆರಂಭ, 1988 ರಲ್ಲಿ ಡಾ.ರಾಜ್ ಕುಮಾರ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ದೇವತಾ ಮನುಷ್ಯ ಚಿತ್ರದಲ್ಲಿ  ಸುಧಾರಾಣಿ ಅವರ ಜೋಡಿಯಾಗಿ ಉದಯ್ ಹುತ್ತಿನಗದ್ದೆ ಕಾಣಿಸಿಕೊಂಡಿದ್ದರು. ಜಯಭೇರಿ (1989), ಅಮೃತ ಬಿಂದು (1990), ಉದ್ಭವ (1990), ಶಿವಯೋಗಿ ಅಕ್ಕಮಹಾದೇವಿ (1991), ಕ್ರಮ (1991),  ಉಂಡೂ ಹೋದ ಕೊಂಡೂ ಹೋದ (1992),   'ಅಗ್ನಿಪರ್ವ', 'ಶುಭ ಮಿಲನ' ಸೇರಿ ಹಲವು ಚಿತ್ರದಲ್ಲಿ ಇವರು ನಟಿಸಿದ್ದರು.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬಸರಿಕಟ್ಟೆ ಎಂಬ ಊರಿನಲ್ಲಿ ಜನಿಸಿದವರು ಉದಯ್ ಹುತ್ತಿನಗದ್ದೆ. ಮೈಸೂರು ಹಾಗೂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದು ‘ಅಭಿನಯ ತರಂಗ’ದಲ್ಲಿ ನಟನೆ ತರಬೇತಿ ಪಡೆದರು. ಬಳಿಕ ಚಿತ್ರರಂಗಕ್ಕೆ ಬಂದ ಅವರು. ದಿಗ್ಗಜ ನಟರಾದ ರಾಜ್‌ಕುಮಾರ, ಅಂಬರೀಷ್,  ಶಂಕರ್ ನಾಗ್, ಅನಂತ್ ನಾಗ್, ಡಾ.ವಿಷ್ಣುವರ್ಧನ್, ಟೈಗರ್ ಪ್ರಭಾಕರ್ ಮುಂತಾದವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಕೆಲ ವರ್ಷಗಳ ಕಾಲ  ನಟನೆ ಬಳಿಕ ಅಭಿನಯದಿಂದ  ದೂರ ಉಳಿದಿದ್ದ ಅವರು  ತಮ್ಮ ತವರು  ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದರು ಮತ್ತು ಅದೇ ಉದ್ಯಮದಲ್ಲಿ ಹಾಗೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.

ಈ ಬಗ್ಗೆ ಹಿರಿಯ ರಂಗಕರ್ಮಿ ತಮ್ಮ ಫೇಸ್‌ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಸಾರಾಂಶ ಇಲ್ಲಿದೆ

ಉದಯ್ ಹುತ್ತಿನಗದ್ದೆ ಇನ್ನಿಲ್ಲವೆಂಬ ದುಃಖಕರ  ಸಂಗತಿ ಬೇಸರ ತರಿಸಿದೆ.  80 ರ ದಶಕದ ಕೊನೆಯ ಹೊತ್ತಿಗೆ ಆರಂಭ ಎಂಬ ಸಿನಿಮಾ ದಲ್ಲಿ ನಾಯಕ ನಟನಾಗಿ , ಮಲೆನಾಡ ಕೀರ್ತಿ ಹೆಚ್ಚಿಸಿದವರು ಅವರು.

ಯಾವ ಮಾಹಿತಿ ತಂತ್ರಜ್ಞಾನವೂ ಇರದ ಆ ಕಾಲದಲ್ಲಿ ಅತೀ ಹೆಚ್ಚು ಮಾಧ್ಯಮ ಪ್ರಚಾರವನ್ನು ಪಡೆದ ಸಿನಿಮಾ ಅದಾಗಿತ್ತು. ಈ ಕಾರಣಕ್ಕೆ ಉದಯ ಹುತ್ತಿನಗದ್ದೆ ಎಂಬ ಸ್ಪುರದ್ರೂಪಿ ನಟ ಅತ್ಯಂತ ಜನಪ್ರಿಯರಾದರು. ಆಗ ಎಲ್ಲರ ಬಾಯಲ್ಲಿ , ಎಲ್ಲಾ ಪತ್ರಿಕೆಗಳಲ್ಲು  ಆರಂಭದ್ದೇ ಸುದ್ಧಿ ಮತ್ತು ಉದಯ್ ಎಂಬ ಮಲೆನಾಡ ಪ್ರತಿಭೆಯನ್ನು ಎಲ್ಲರೂ ಕೊಂಡಾಡಿದ್ದ ಆ ನೆನಪುಗಳು ನನ್ನಲ್ಲಿ ಇನ್ನೂ ಹಸಿರಾಗಿವೆ.

ಉದಯ್ ರಾಜಾಜಿನಗರದ ಈಗಿನ ಡಾ ರಾಜ್ ಕುಮಾರ್ ರಸ್ತೆಯ ನವರಂಗ್ ಬಳಿ ಒಂದು ಫೋಟೋಗ್ರಫಿ ಸ್ಟುಡಿಯೋ ನಡೆಸುತ್ತಿದ್ದರು . ಆ ಸ್ಟುಡಿಯೋ ದ ವಿಶೇಷವೆಂದರೆ ಅಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರೂ ಮಲೆನಾಡಿಗರು . ಊರಿಂದ ಉದ್ಯೋಗ ಅರಸಿ ಹೋದ ಯುವಕರಿಗೆಲ್ಲಾ ಆ ಸ್ಟುಡಿಯೋ ಆಸರೆಯಾಗಿತ್ತು.  

ಪರಿಶೀಲನೆಗಾಗಿ ಪಠ್ಯಪುಸ್ತಕಗಳನ್ನು ಬಿಡುಗಡೆಗೊಳಿಸಿ: ಮುರುಘಾ ಶ್ರೀ

ನನ್ನ ಸ್ನೇಹಿತರಾದ ಕೆಮ್ಮಣ್ಣು ವಿಶ್ವನಾಥ , ರಾಜಶೇಖರ್ ಮೊದಲಾದವರು ಅಲ್ಲಿದ್ದರು.  ನಾನೂ ಆಗ ಒಂದು ಕಥೆ ಸಿದ್ಧಮಾಡಿಕೊಂಡು ಇದನ್ನು ಸಿನಿಮಾ ಮಾಡಿ ಎಂದು ಉದಯ್ ರ ಬೆನ್ನು ಬಿದ್ದಿದ್ದೆ. 

 ರಾಜಾಜಿನಗರದ ಆ ಸ್ಟುಡಿಯೋ ಒಂದು ಅನ್ನದಾತ ಕೇಂದ್ರದಂತೆ ಸದಾ ಆಪ್ತವಾಗಿರುತ್ತಿತ್ತು.    ಉದಯ್ ಆಗೆಲ್ಲಾ ತುಂಬಾ ಬ್ಯುಸಿ ಇರುತ್ತಿದ್ದರು. ಆ ನಡುವೆಯೂ ಊರಿನಿಂದ ಹೊಸ ಕನಸುಹೊತ್ತು ಬೆಂಗಳೂರಿಗೆ ಬರುವ ನನ್ನಂಥವರಿಗೆ ಸಮಯಕೊಡುತ್ತಿದ್ದರು ಮಾತ್ರವಲ್ಲ ಆಪ್ತವಾಗಿ ನಡೆದುಕೊಳ್ಳುತ್ತಿದ್ದರು.
  
 ನಂತರ ನಟಿ ಲಲಿತಾಂಜಲಿ ಅವರನ್ನು ಮದುವೆಯಾದರು.  ಆನಂದರಾವ್ ಸರ್ಕಲ್ ನಲ್ಲಿ ಅವರೊದ್ದೊಂದು ಪ್ರತಿಷ್ಠಿತ ಕಲರ್ ಲ್ಯಾಬ್ ಪ್ರಾರಂಭವಾಯ್ತು.  ಸಿನಿಮಾ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೂ ಉದ್ಯಮ ಕ್ಷೇತ್ರದಲ್ಲಿ  ಅಪಾರ ಹೆಸರು ಮಾಡಿದರು.  ನಂತರವೂ ಒಂದೆರಡು ಬಾರಿ ಅವರನ್ನು ಭೇಟಿ ಆಗಿದ್ದೆ.

ಉದಯ್ ನೂರಾರು ಯುವಕರಿಗೆ ಉದ್ಯೋಗ ಮತ್ತು ಮಾರ್ಗದರ್ಶನ ನೀಡಿ  ದಾರಿದೀಪವಾದವರು.    ಈ ಕಾರಣಕ್ಕೆ ಅವರ ಬಗ್ಗೆ ನನ್ನ ಗೌರವ ಸದಾ ಇಮ್ಮಡಿ.  ರಾಜಾಜಿನಗರದ ಪುಟ್ಟ ಅಟ್ಟದಿಂದ ಶುರುವಿಟ್ಟ ಮಲೆನಾಡ ಕನಸುಕಂಗಳ ಹುಡುಗನ ಸಾಹಸ ಅಮೋಘವೇ ಸರಿ. 

Suvarna News Reality Check; ಕೋಟಿ ಹಣ ಬಿಡುಗಡೆಯಾದ್ರೂ ಮಕ್ಕಳಿಗೆ ಕಳಪೆ ಬಿಸಿಯೂಟ!

ಇತ್ತೀಚಿನ ವರ್ಷಗಳಲ್ಲಿ ಅವರ ಬಳಕೆ ಇರಲಿಲ್ಲ. ತೀರಾ ಸಾಯುವಂಥ ವಯಸ್ಸೂ ಅಲ್ಲ.  ವಿಧಿ ಯ ಮುಂದೆ ನಾವು ನಿಸ್ಸಾಹಯಕರು. 

ನೀವು ಮಾಡಿದ ಸೇವೆ , ಚಲನಚಿತ್ರದಂಥ ಕ್ಷೇತ್ರವನ್ನು ಓರ್ವ ಮಲೆನಾಡಿಗರಾಗಿ ಅದು ಮರೀಚಿಕೆಯಾಗಿದ್ದ ಕಾಲಘಟ್ಟದಲ್ಲಿ  ಪ್ರವೇಶಿಸಿ ಅದ್ಧೂರಿಯ ಆರಂಭಪಡೆದ ಆ ನಿಮ್ಮ ಸುವರ್ಣಯುಗ ನನ್ನ ವಯೋಮಾನದವರಿಗೆ ಒಂದು ಸ್ಪೂರ್ತಿಯೇ ಹೌದು.

  ನಾಡು, ಮಲೆನಾಡು  ಮರೆಯದು ನಿಮ್ಮ. 
 ಅಂದಿನ ಆ " ಆರಂಭ " ಕ್ಕೆ ಅಂತ್ಯವಿಲ್ಲ. 

  ನಿಮ್ಮ ಆತ್ಮಕ್ಕೆ ಚಿರಶಾಂತಿ ಲಭಿಸಲಿ.  ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ. 

      - ರಮೇಶ್ ಬೇಗಾರ್.

Follow Us:
Download App:
  • android
  • ios