* ವಿಜ್ಞಾನ ಅರ್ಥವಾಗದಿದ್ದರೆ ಸುಮ್ಮನಿರಿ: ನೆಟ್ಟಿಗರ ಟಾಂಗ್‌* ಇಸ್ರೋ ಮಂಗಳಯಾನಕ್ಕೆ ಪಂಚಾಂಗ ಬಳಸಿತ್ತು: ಮಾಧವನ್‌

ಚೆನ್ನೈ(ಜೂ.26): ‘2102ರಲ್ಲಿ ಮಂಗಳಯಾನಕ್ಕಾಗಿ ಇಸ್ರೋ ಹಿಂದೂ ಪಂಚಾಂಗವನ್ನು ಬಳಸಿತ್ತು’ ಎಂದು ನಟ ಆರ್‌. ಮಾಧವನ್‌ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಇತ್ತೀಚೆಗೆ ಮಾಧವನ್‌ ನಿರ್ದೇಶನದ ಮೊದಲ ಚಿತ್ರ ‘ರಾಕೆಟ್ರಿ- ದಿ ನಂಬಿ ಇಫೆಕ್ಟ್’ ಚಿತ್ರದ ಪ್ರಚಾರದ ವೇಳೆಯಲ್ಲಿ ‘ವಿದೇಶಗಳಲ್ಲಿ ಮಂಗಳಯಾನಕ್ಕೆ ಬಳಸುವ ರಾಕೆಟ್‌ಗಳು ಹೊಂದಿರುವಂತೆ ಭಾರತದ ರಾಕೆಟ್‌ಗಳು ಘನ, ದ್ರವ ಹಾಗೂ ಕ್ರಯೋಜೆನಿಕ್‌ ಎಂಜಿನ್‌ಗಳನ್ನು ಹೊಂದಿರಲಿಲ್ಲ. ಹೀಗಾಗಿ ಪಂಚಾಂಗವನ್ನು ಬಳಸಲಾಯಿತು. ಪಂಚಾಂಗ ವಿವಿಧ ಗ್ರಹಗಳು, ಗುರುತ್ವಾಕರ್ಷಣೆ ಸೆಳೆತ ಹಾಗೂ ಸೌರಜ್ವಾಲೆಗಳ ವಿಚಲನ ಮೊದಲಾದ ಮಾಹಿತಿಯನ್ನೊಳಗೊಂಡಿದ್ದು, ಇದೆಲ್ಲವನ್ನು ಸುಮಾರು 1000 ವರ್ಷಗಳ ಹಿಂದೆಯೇ ನಿಖರವಾಗಿ ಲೆಕ್ಕ ಹಾಕಲಾಗಿತ್ತು. ಈ ಮಾಹಿತಿಯನ್ನು ಬಳಸಿಕೊಂಡು ರಾಕೆಟ್‌ ಉಡಾಯಿಸಿದ್ದಕ್ಕೆ, ಅದು ಮಂಗಳನ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿತ್ತು’ ಎಂದು ಹೇಳಿದ್ದರು.

ಮಾಧವನ್‌ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ ಆಗುತ್ತಿದೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಬಳಕೆದಾರನೊಬ್ಬ, ‘ವಿಜ್ಞಾನವು ಎಲ್ಲರಿಗೂ ಅರ್ಥವಾಗುವುದಿಲ್ಲ. ಆದರೆ ನಿಜವಾಗಿ ಇವೆಲ್ಲ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಮಾಹಿತಿ ಇಲ್ಲದಿದ್ದಾಗ ಸುಮ್ಮನಿರುವುದು ಉತ್ತಮ. ವ್ಯಾಟ್ಸಾಪ್‌ನಲ್ಲಿರುವ ಮಾಹಿತಿಯನ್ನು ಹೇಳಿ ನಿಮ್ಮನ್ನೇ ನೀವು ಅಪಹಾಸ್ಯಕ್ಕೆ ಗುರಿಯಾಗಿಸಿಕೊಳ್ಳುತ್ತಿದ್ದೀರಿ’ ಎಂದು ಕಾಮೆಂಟ್‌ ಮಾಡಿದ್ದಾರೆ.

ಈ ಹಿಂದೆ, ಇಸ್ರೋ ಮಂಗಳಯಾನಕ್ಕೆ ನ. 13, 2013ರಂದು ಚಾಲನೆ ನೀಡಿತ್ತು. ಸೆ. 24, 2014ರಂದು ಇಸ್ರೋ ಹಾರಿಬಿಟ್ಟರಾಕೆಟ್‌ ಯಶಸ್ವಿಯಾಗಿ ಮಂಗಳನ ಕಕ್ಷೆ ಪ್ರವೇಶಿಸಿತ್ತು.