ರಸ್ತೆ ಬದಿ ನಿಂತಿದ್ದ ಕಾರಿಗೆ ನಟನ ಕಾರು ಡಿಕ್ಕಿ: ದೂರು ಪ್ರತಿದೂರು!
ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ತಮ್ಮ ಕಾರಿಗೆ ಕಿರುತೆರೆ ನಟ ದಿಲೀಪ್ ಶೆಟ್ಟಿತಮ್ಮ ಕಾರಿನಿಂದ ಡಿಕ್ಕಿ ಹೊಡೆಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದಕ್ಕೆ ಪ್ರತಿಯಾಗಿ ಕಿರುತೆರೆ ನಟ ಕೂಡ ಪ್ರತಿದೂರು ನೀಡಿದ್ದಾರೆ.
ಬೆಂಗಳೂರು (ಆಗಸ್ಟ್ 23): ನಟ ದಿಲೀಪ್ ಗುರುವಾರ ತಡರಾತ್ರಿ ಎರಡು ಗಂಟೆ ಸುಮಾರಿಗೆ ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿಕೊಂಡು ಬಂದು, ಚಾಮರಾಜಪೇಟೆಯಲ್ಲಿ ರಸ್ತೆ ಬದಿ ನಿಂತಿದ್ದ ತಮ್ಮ ಇನ್ನೋವಾರ ಕಾರಿಗೆ ಡಿಕ್ಕಿ ಹೊಡೆಸಿದ್ದಾರೆ.
ಪರಿಣಾಮ ಇನ್ನೋವಾ ಕಾರಿನ ಮುಂಭಾಗ ಜಖಂಗೊಂಡಿದೆ. ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದಕ್ಕೆ ದಿಲೀಪ್ ರಿಪೇರಿ ಖರ್ಚು ಭರಿಸುವುದಾಗಿ ಹೇಳಿ ಸ್ಥಳದಿಂದ ತೆರಳಿದ್ದರು. ಇದೀಗ ಕಾರು ರಿಪೇರಿ ಮಾಡಿಸಿ ಕೊಡಲು ದಿಲೀಪ್ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ತಿಪ್ಪೇಸ್ವಾಮಿ ಎಂಬುವರು ಚಿಕ್ಕಪೇಟೆ ಸಂಚಾರ ಠಾಣೆಗೆ ದೂರು ನೀಡಿದ್ದಾರೆ.
‘ಮಗಳು ಜಾನಕಿ’ ಮಂಗಳತ್ತೆ ಅಪಘಾತದಲ್ಲಿ ದುರ್ಮರಣ
ಇದಕ್ಕೆ ಪ್ರತಿ ದೂರು ಕೊಟ್ಟಿರುವ ನಟ ದಿಲೀಪ್ ಶೆಟ್ಟಿ, ಇನ್ನೋವಾ ಕಾರು ನನ್ನ ಐ20 ಕಾರಿಗೆ ಡಿಕ್ಕಿ ಹೊಡೆದಿದೆ. ಈ ಕುರಿತು ತನಿಖೆ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ದೂರು-ಪ್ರತಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಸ್ಥಳೀಯ ಸಿಸಿಟಿವಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.