Asianet Suvarna News Asianet Suvarna News

'ಸಾ.ರಾ. ಮಹೇಶ್‌ ತಾಲೂಕನ್ನೇ ಒಡೆದಿದ್ದಾರೆ, ಹುಣಸೂರು ಜಿಲ್ಲೆ ಯಾಕಾಗ್ಬಾರ್ದು'..?

ಹುಣಸೂರು ಜಿಲ್ಲೆ ಪ್ರಸ್ತಾಪ ಚುನಾವಣೆ ಗಿಮಿಕ್‌ ಅಲ್ಲ ಎಂದು ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಹುಣಸೂರು ಜಿಲ್ಲೆಯ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Hunsur district proposal is not election gimmick says h vishwanath
Author
Bangalore, First Published Oct 16, 2019, 3:03 PM IST

ಮೈಸೂರು(ಅ.16): ಹುಣಸೂರು ತಾಲೂಕನ್ನು ಕೇಂದ್ರವಾಗಿರಿಸಿಕೊಂಡು ಕೆ.ಆರ್‌. ನಗರ, ಪಿರಿಯಾಪಟ್ಟಣ, ಎಚ್‌.ಡಿ. ಕೋಟೆ ಮತ್ತು ಸರಗೂರು ತಾಲೂಕನ್ನು ಒಳಗೊಂಡ ‘ಡಿ. ದೇವರಾಜ ಅರಸು ಜಿಲ್ಲೆ’ಯ ಪ್ರಸ್ತಾಪ ನಿನ್ನೆ ಮೊನ್ನೆಯದಲ್ಲ ಅಥವಾ ಚುನಾವಣೆ ಗಿಮಿಕ್‌ ಕೂಡ ಅಲ್ಲ. ಕಳೆದೊಂದು ವರ್ಷದಿಂದ ಈ ಬೇಡಿಕೆ ಇಡುತ್ತಿದ್ದೇನೆ ಎಂದು ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವಿಷಯ ಪ್ರಸ್ತಾಪವಾದಾಗ ಪರ-ವಿರೋಧ ಚರ್ಚೆಗಳು ಸಹಜ. ಅದರಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಸಾ.ರಾ. ಮಹೇಶ್‌ ಆಕ್ಷೇಪಿಸಿದ್ದಾರೆ. ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಚಾಮರಾಜನಗರ ಜಿಲ್ಲೆಯಾಯಿತು. ಧಾರವಾಡ-ಗದಗ- ಹಾವೇರಿ ಜಿಲ್ಲೆಯಾಯಿತು. ಆಗ ಆಗಿದ್ದು ಈಗ ಯಾಕಾಗಬಾರದು. ಸಾ.ರಾ. ಮಹೇಶ್‌ ಕೆ.ಆರ್‌.ನಗರ ತಾಲೂಕನ್ನೇ ಒಡೆದು ಸಾಲಿಗ್ರಾಮ ಮಾಡಿಲ್ಲವೇ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

ಸಾ.ರಾ.ಗೆ ಟಾಂಗ್‌:

ಹುಣಸೂರು ಜಿಲ್ಲಾ ಕೇಂದ್ರವಾಗಿಸುವ ಸಲುವಾಗಿಯೇ ನಾನು ಕಳೆದೊಂದು ವರ್ಷದಿಂದ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕೆಎಸ್‌ಆರ್‌ಟಿಸಿ ವಿಭಾಗೀಯ ಕೇಂದ್ರ ಬಂದಿದೆ, ಕೆಇಬಿ ಸರ್ಕಲ್‌ ಕಚೇರಿ ಸ್ಥಾಪನೆಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳಿಗೆ ಅನುದಾನ ತಂದಿದ್ದೇನೆ. ಅಂದ ಮೇಲೆ ಇದು ಹೇಗೆ ಉಪಚುನಾವಣೆಯ ಗಿಮಿಕ್‌ ಆಯಿತು? ಇದೆಲ್ಲ ರಿಯಲ್‌ ಎಸ್ಟೇಟ್‌ ನಡೆಸುವವರಿಗೆ ಗೊತ್ತಾಗಲ್ಲ ಎಂದು ಸಾ.ರಾ.ಮಹೇಶ್‌ಗೆ ಟಾಂಗ್‌ ನೀಡಿದ್ದಾರೆ.

ಅರಸು ಹೆಸರು ಸೂಕ್ತ:

ಹೊಸ ಜಿಲ್ಲೆಗೆ ಮಾಜಿ ಸಿಎಂ ಡಿ. ದೇವರಾಜ ಅರಸು ಹೆಸರೇ ಸೂಕ್ತ. ಅರಸು ಎಂದರೆ ರೋಮಾಂಚನ. ತಮಿಳುನಾಡಿನಲ್ಲಿ ಪೆರಿಯಾರ್‌, ಎಂಜಿಆರ್‌ ಹೆಸರಿನ ಜಿಲ್ಲೆಗಳಿವೆ. ಚಾಮರಾಜನಗರ ಜಿಲ್ಲೆಯೂ ವ್ಯಕ್ತಿಯ ಹೆಸರಲ್ಲವೇ? ಪ್ರತ್ಯೇಕ ಜಿಲ್ಲೆಗಳಾಗಲು ಎಲ್ಲ ಸೌಕರ್ಯಗಳೂ ಇಲ್ಲಿವೆ. ಕೇವಲ ಎರಡು ತಾಲೂಕುಗಳಿರುವ ಕೊಡಗು ಜಿಲ್ಲೆಯಾಗುತ್ತದೆ ಎಂದರೆ 6 ತಾಲೂಕುಗಳು ಯಾಕೆ ಹೊಸ ಜಿಲ್ಲೆಯಾಗಬಾರದು ಎಂದು ವಿಶ್ವನಾಥ್‌ ಸ್ಪಷ್ಟಪಡಿಸಿದರು.

ಶಾಸಕ ಸ್ಥಾನಕ್ಕೆ JDS ಶಾಸಕ ಸಾ ರಾ ಮಹೇಶ್ ರಾಜೀನಾಮೆ!?

ನಾನು ದೇವರಾಜ ಅರಸರ ಶಿಷ್ಯನೇ ಹೊರತು, ವಾರಸುದಾರನಲ್ಲ. ಕೆ.ಆರ್‌.ನಗರ, ಸಾಲಿಗ್ರಾಮವು ಹೊಸ ಜಿಲ್ಲೆಗೆ ಸೇರಿಸಲು ಬಿಡೆನು ಎಂದಿರುವ ಸಾ.ರಾ. ಮಹೇಶ್‌ ಅವುಗಳ ಮಾಲೀಕನೂ ಅಲ್ಲ ಎಂದು ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

'ಗುರುವಾರ ಚಾಮುಂಡಿ ಬೆಟ್ಟಕ್ಕೆ ಬನ್ನಿ, ಜತೆಗೆ ಕೊಂಡುಕೊಂಡವರನ್ನು ಕರೆತನ್ನಿ'

Follow Us:
Download App:
  • android
  • ios