ಮುಡಾ ಅಕ್ರಮ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಅವರು ನ್ಯಾಯಾಲಯದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದಿಂದ ಹಿಂದೆ ಸರಿಯಲು ತಮಗೆ 50 ಕೋಟಿ ರೂ. ಲಂಚದ ಆಮಿಷ ಒಡ್ಡಲಾಗಿತ್ತು ಮತ್ತು ತಮ್ಮ ವಿರುದ್ಧ ವಾಮಾಚಾರ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು (ಫೆ.28): ಮುಡಾ ಅಕ್ರಮ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅತ್ಯಂತ ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ. ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ವಿರುದ್ಧದ ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ ಅವರು, ತಮಗೆ ಈ ಕೇಸ್‌ನಿಂದ ಹಿಂದೆ ಸರಿಯಲು 50 ಕೋಟಿ ರೂಪಾಯಿ ಲಂಚದ ಆಮಿಷ ಒಡ್ಡಲಾಗಿದೆ ಎಂದು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

50 ಕೋಟಿ ಆಮಿಷ ಮತ್ತು ವಾಮಾಚಾರದ ಆರೋಪ:

ನ್ಯಾಯಾಲಯದಲ್ಲಿ ನೇರವಾಗಿ ವಾದ ಮಂಡಿಸಿದ ಸ್ನೇಹಮಯಿ ಕೃಷ್ಣ, 'ಆರೋಪಿಗಳು ನನ್ನನ್ನು ಹತ್ತಿಕ್ಕಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಪತ್ನಿ ಪಾರ್ವತಿ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ನನಗೆ 50 ಕೋಟಿ ರೂಪಾಯಿ ಲಂಚದ ಆಮಿಷ ನೀಡಿದ್ದರು. ಅಷ್ಟೇ ಅಲ್ಲದೆ, ಹರ್ಷ ಮತ್ತು ಶ್ರೀನಿಧಿ ಎಂಬುವವರು ಮೂಟೆಗಟ್ಟಲೆ ಹಣ ಹಿಡಿದುಕೊಂಡು ಬಂದಿದ್ದರು. ಈ ಬಗ್ಗೆ ವಿಡಿಯೋ ಸಮೇತ ನಾನು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ' ಎಂದು ಅಳಲು ತೋಡಿಕೊಂಡರು. ಇದರ ಜೊತೆಗೆ, ಪ್ರಕರಣದಲ್ಲಿ ದೂರು ನೀಡಿದ್ದಕ್ಕಾಗಿ ತನ್ನ ವಿರುದ್ಧ ವಾಮಾಚಾರ ನಡೆಸಿ, ಕುರಿ ಬಲಿ ಕೊಡಲಾಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.

ಪೊಲೀಸರ ವಿರುದ್ಧ ಕಿಡಿ:

ಸೈಬರ್ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಕೃಷ್ಣ, 'ನಾನು ಕೋರ್ಟ್‌ಗೆ ಹಾಜರಾಗಲು ಬಂದಾಗ ಸೈಬರ್ ಪೊಲೀಸರು ನನ್ನನ್ನು ವಶಕ್ಕೆ ಪಡೆದು ಕಿರುಕುಳ ನೀಡಿದ್ದಾರೆ. ನಾನು ವಿಚಾರಣೆ ಮುಗಿಸಿ ಬರುತ್ತೇನೆ ಎಂದರೂ ಕೇಳಲಿಲ್ಲ. ನನ್ನನ್ನು ಅಧಿಕೃತವಾಗಿ ಬಂಧಿಸದೇ ಇದ್ದರೂ, 'ಬಂಧಿಸಲಾಗಿದೆ' ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿ ನನ್ನ ಘನತೆಗೆ ಧಕ್ಕೆ ತಂದಿದ್ದಾರೆ' ಎಂದು ನ್ಯಾಯಾಧೀಶರ ಮುಂದೆ ದೂರಿದರು.

ಡಿ.ಬಿ. ನಟೇಶ್ ರಕ್ಷಣೆಗೆ ನಿಂತಿದೆಯೇ ಸರ್ಕಾರ?

ಡಿ.ಬಿ. ನಟೇಶ್ ವಿರುದ್ಧದ ತನಿಖೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ನ್ಯಾಯಾಧೀಶರು ಪ್ರಾಸಿಕ್ಯೂಷನ್ ಅನ್ನು ತರಾಟೆಗೆ ತೆಗೆದುಕೊಂಡರು. ಪಿಸಿ ಕಾಯ್ದೆ 17A ಪ್ರಕಾರ ನವೆಂಬರ್ ತಿಂಗಳಲ್ಲೇ ತನಿಖೆಗೆ ಅನುಮತಿ ಸಿಕ್ಕಿದ್ದರೂ ಈವರೆಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಡಿ.ಬಿ. ನಟೇಶ್ ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ನೀಡದ ಪ್ರಾಸಿಕ್ಯೂಷನ್ ಅಧಿಕಾರಿಗಳ ವಿರುದ್ಧ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಾಲಯದ ಸೂಚನೆ:

ಸ್ನೇಹಮಯಿ ಕೃಷ್ಣ ಅವರ ವಾದವನ್ನು ಆಲಿಸಿದ ನ್ಯಾಯಾಧೀಶರು, ಲಂಚದ ಆಮಿಷದ ಬಗ್ಗೆ ಪ್ರತ್ಯೇಕ ದೂರು ನೀಡಲು ಸೂಚಿಸಿದರು. ಅಲ್ಲದೆ, ಬಿ-ರಿಪೋರ್ಟ್ ವಿಚಾರದಲ್ಲಿ ತೃಪ್ತಿ ಇಲ್ಲದಿದ್ದರೆ ಮೇಲ್ಮನವಿ ಸಲ್ಲಿಸಬಹುದು ಎಂದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು, ಮುಂದಿನ ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕರು (SPP) ಖುದ್ದು ಹಾಜರಿರಬೇಕು ಎಂದು ತಾಕೀತು ಮಾಡಿ, ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿದೆ.