Asianet Suvarna News Asianet Suvarna News

ಮೈಸೂರು: ದಸರಾ ಗಜಪಡೆಗೆ ಸಮೂಹ ವಿಶ್ರಾಂತಿ

ಜಂಬೂಸವಾರಿಯಲ್ಲಿ ಭಾಗವಹಿಸಿದ ಆನೆಗಳೀಗ ಸಮೂಹ ವಿಶ್ರಾಂತಿ ಪಡೆದುಕೊಳ್ಳುತ್ತಿದೆ. ದಸರಾ ಮುಗಿದ ನಂತರ ತಣ್ಣೀರಲ್ಲಿ ಸ್ನಾನ ಮಾಡಿದ ಆನೆಗಳು ಆಹಾರ ಸೇವಿಸಿ ಆರಾಮವಾಗಿ ವಿಶ್ರಾಂತಿ ಪಡೆದುಕೊಂಡಿವೆ. ಅರಮನೆ ನೋಡಲು ಬಂದಿದ್ದ ಪ್ರವಾಸಿಗರು ಮತ್ತು ಸ್ಥಳೀಯರು ಆನೆಗಳನ್ನು ನೋಡಲು ಮುಗಿಬಿದ್ದರು.

elephants are taking rest after dasara in mysore
Author
Bangalore, First Published Oct 10, 2019, 9:18 AM IST

ಮೈಸೂರು(ಅ.10): ಅಂತೂ ಇಂತೂ 409ನೇ ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯನ್ನು ಯಶಸ್ವಿಗೊಳಿಸಿದ ಗಜಪಡೆಯು ಮೈಸೂರು ಅರಮನೆ ಆವರಣದ ಆನೆ ಬಿಡಾರದಲ್ಲಿ ಬುಧವಾರ ವಿಶ್ರಾಂತಿಯಲ್ಲಿದ್ದವು.

ದಸರಾ ಜಂಬೂಸವಾರಿಯ ಕೇಂದ್ರಬಿಂದುವಾಗಿದ್ದ ಗಜಪಡೆ ಮತ್ತು ಪರಿವಾರದಲ್ಲಿ ಯಶಸ್ವಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಿದ ತೃಪ್ತಿ ಇತ್ತು. ಅಲ್ಲದೆ, ಗುರುವಾರ ಮತ್ತೆ ಕಾಡಿಗೆ ಹೋಗುವ ತವಕ, ಸಂತೋಷದಲ್ಲಿ ಆನೆ ಮಾವುತರು, ಕಾವಾಡಿಗಳ ಕುಟುಂಬದವರು ಇದ್ದರು. ಮರಳಿ ಹಾಡಿಗಳಲ್ಲಿರುವ ತಮ್ಮ ಮನೆಗಳತ್ತ ಹೋಗಲು ಸಿದ್ಧತೆ ಸಹ ಮಾಡಿಕೊಳ್ಳುತ್ತಿದ್ದರು.

ಸ್ನಾನ ಮಾಡಿ ಹೊರ ಆನೆಗಳು:

ಅರಮನೆ ಆವರಣದ ನೀರಿನ ತೊಟ್ಟಿಯಲ್ಲಿ ಆನೆಗಳನ್ನು ಒಂದೊಂದಾಗಿ ಅದರ ಮಾವುತರು ಮತ್ತು ಕಾವಾಡಿಗಳು ತಂದು ಸ್ನಾನ ಮಾಡಿಸುತ್ತಿದ್ದರು. ಸತತ 8 ಬಾರಿ ಅಂಬಾರಿ ಹೊತ್ತ ಅರ್ಜುನ ಆನೆಯನ್ನು ಮಾವುತ ವಿನು ನೀರಿನ ತೊಟ್ಟಿಗೆ ಕರೆದುಕೊಂಡು ಹೋಗಿ ತಣ್ಣೀರು ಸ್ನಾನ ಮಾಡಿಸಿದರು. ಅದೇ ನೀರಿನ ತೊಟ್ಟಿಯ ಮತ್ತೊಂದು ಬದಿಯಲ್ಲಿ ಮಹಿಳೆಯರು ಬಟ್ಟೆ ತೊಳೆಯುತ್ತಿದ್ದರು.

ಪ್ರತಾಪ್‌ ಸಿಂಹನ್ನ ನಂಬಬೇಡ, ಹುಷಾರಾಗಿರು: ಸಚಿವ ಸೋಮಣ್ಣಗೆ ಸಿದ್ದು ಎಡ್ವೈಸ್..!

ಅರಮನೆ ನೋಡಲು ಬಂದಿದ್ದ ಪ್ರವಾಸಿಗರು ಮತ್ತು ಸ್ಥಳೀಯರು ಆನೆಗಳನ್ನು ನೋಡಲು ಮುಗಿಬಿದ್ದರು. ಕೆಲವರು ಆನೆಗಳೊಂದಿಗೆ ನಿಂತು ಫೋಟೋ, ಸೆಲ್ಫಿ ಕ್ಲಿಕ್‌ ಮಾಡಿಕೊಂಡರು. ಇನ್ನೂ ಕೆಲವರು ದೂರದಲ್ಲಿ ನಿಂತು ಆನೆಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿದ್ದರು.

ಆಹಾರ ಸೇವಿಸಿ ವಿಶ್ರಾಂತಿ:

ಅಂಬಾರಿ ಆನೆ ಅರ್ಜುನಗೆ ಕುಮ್ಕಿ ಆನೆಗಳಾಗಿ ಸಾಗಿದ ಕಾವೇರಿ ಮತ್ತು ವಿಜಯ, ನಿಶಾನೆ ಆನೆ ಬಲರಾಮ, ನೌಫತ್‌ ಆನೆ ಅಭಿಮನ್ಯು, ಸಾಲಾನೆಗಳಾಗಿ ಸಾಗಿದ ವಿಕ್ರಮ, ಗೋಪಿ, ಧನಂಜಯ, ಗೋಪಾಲಸ್ವಾಮಿ ಮತ್ತು ದುರ್ಗಾಪರಮೇಶ್ವರಿ ಆನೆಗಳು ತಣ್ಣೀರು ಸ್ನಾನ ಮುಗಿಸಿ, ಆಹಾರ ಸೇವಿಸಿ ವಿಶ್ರಾಂತಿಯಲ್ಲಿದ್ದವು.

ಬೊಕ್ಕಸ ಖಾಲಿ, ಯಡಿಯೂರಪ್ಪ ಹೇಳಿಕೆ ಅಕ್ಷರಶಃ ಸತ್ಯ ಎಂದ ಬಿಜೆಪಿ ಸಂಸದ

ಇದೇ ಮೊದಲ ಬಾರಿಗೆ ಕಾಡಿನಿಂದ ನಾಡಿಗೆ ದಸರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಈಶ್ವರ, ಜಯಪ್ರಕಾಶ್‌ ಮತ್ತು ಲಕ್ಷ್ಮಿ ಆನೆಗಳಿಗೆ ಜಂಬೂಸವಾರಿಯಲ್ಲಿ ಭಾಗವಹಿಸುವ ಅವಕಾಶ ಸಿಗದೇ ಅರಮನೆ ಆನೆ ಬಿಡಾರದಲ್ಲಿ ಉಳಿದುಕೊಂಡಿದ್ದವು. ಈ ಆನೆಗಳು ಸಹ ವಿಶ್ರಾಂತಿ ಪಡೆಯುತ್ತಿದ್ದವು.

ದಸರಾ ಯಶಸ್ವಿ, ಇನ್ನೇನಿದ್ದರೂ ನಿರಾಶ್ರಿತರಿಗೆ ಮನೆ: ಸೋಮಣ್ಣ

ಇನ್ನೂ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಆನೆಗಳಿಗೆ ತೊಡಿಸಲಾಗಿದ್ದ ಛತ್ರಿ, ಆನೆ ಹಣೆಪಟ್ಟಿ, ಜುಲಾ, ಮಾವಿನ ಸರ, ಅರಳಿ ಎಲೆ ಸರ, ಆನೆಗಳ ನಾಮಫಲಕ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು, ಮಾವುತರು ಮತ್ತು ಕಾವಾಡಿಗಳ ಸಮವಸ್ತ್ರ , ಟೋಪಿಗಳನ್ನು ಆನೆ ಬಿಡಾರದಲ್ಲಿ ಜೋಡಿಸಿ, ಎಲ್ಲ ವಸ್ತುಗಳ ಇರುವಿಕೆ ಖಚಿತ ಪಡಿಸಿಕೊಂಡ ಬಳಿಕ ಅರಮನೆ ಮಂಡಳಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ತಲುಪಿಸಿದರು.

ಬುಧವಾರ ಹಿಂದಿರುಗಿನ 3 ಆನೆ

ಜಂಬೂಸವಾರಿ ಮುಗಿದ ಮಾರನೆಗೆ ಅಂದರೆ ಬುಧವಾರವೇ ಮೂರು ಆನೆಗಳು ಕಾಡಿಗೆ ಮರಳಿದವು. ಬಂಡೀಪುರ ಅರಣ್ಯ ಪ್ರದೇಶದಲ್ಲಿ ಹುಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅಭಿಮನ್ಯು, ಗೋಪಾಲಸ್ವಾಮಿ ಮತ್ತು ಜಯಪ್ರಕಾಶ್‌ ಆನೆಗಳನ್ನು ಬುಧವಾರ ಸಂಜೆ ಲಾರಿ ಏರಿ ತೆರಳಿದವು. ಉಳಿದ ಹತ್ತು ಆನೆಗಳು ಗುರುವಾರ ಕಾಡಿಗೆ ಹೊರಡಲಿವೆ.

ಹುಲಿಕಾರ್ಯಾಚರಣೆಗೆ ತೆರಳಿದ ಆನೆ:

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಹುಲಿ ಕಾರ್ಯಾಚರಣೆಗಾಗಿ ಅಭಿಮನ್ಯು, ಗೋಪಾಲಸ್ವಾಮಿ ಮತ್ತು ಜಯಪ್ರಕಾಶ್‌ ಆನೆಗಳನ್ನು ಬುಧವಾರ ಕಳುಹಿಸಲಾಗಿದೆ. ಉಳಿದ 10 ಆನೆಗಳನ್ನು ವಿವಿಧ ಆನೆ ಶಿಬಿರಗಳಿಗೆ ಅ.10 ರಂದು ಕಳುಹಿಸಲಾಗುವುದು ಎಂದು ಡಿಸಿಎಫ್‌ ಅಲೆಕ್ಸಾಂಡರ್‌ ಹೇಳಿದ್ದಾರೆ.

ದಸರಾ ಆನೆಗಳನ್ನು ಲಾರಿಗಳ ಮೂಲಕ ವಿವಿಧ ಆನೆಗಳ ಶಿಬಿರಕ್ಕೆ ಕಳುಹಿಸಲು ಅರಣ್ಯ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ. ಪೂಜೆ ಸಲ್ಲಿಸಿದ ಬಳಿಕ ಆನೆಗಳನ್ನು ಲಾರಿಗಳಲ್ಲಿ ಆನೆ ಶಿಬಿರಗಳಿಗೆ ತೆರಳಿದೆ. ಆನೆಗಳ ಜೊತೆಗೆ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರು ಸಹ ತೆರಳಲಿದ್ದಾರೆ ಎಂದು ದಸರಾ ಆನೆ ವೈದ್ಯ ಡಾ.ಡಿ.ಎನ್‌. ನಾಗರಾಜು ಹೇಳಿದ್ದಾರೆ.

ತೂಕ ಹೆಚ್ಚಳದಲ್ಲಿ ಅಭಿಮನ್ಯು- ಈಶ್ವರ ಸಮಬಲ!

ದಸರೆಗೆ ಆಗಮಿಸುವ ಆನೆಗಳನ್ನು ಅರಣ್ಯ ಇಲಾಖೆ ವತಿಯಿಂದ ಬರುವಾಗ ಹಾಗೂ ಹೊಗುವಾಗ ತೂಕ ಪರಿಶೀಲಿಸಲಾಗುತ್ತದೆ. ಈ ಬಾರಿ ಮೊದಲ ತಂಡದಲ್ಲಿ ಆಗಮಿಸಿದ 6 ಆನೆಗಳನ್ನು ಬಂದಾಗ ತೂಕ ಪರಿಶೀಲಿಸಲಾಗಿತ್ತು. ಗರ್ಭಿಣಿಯಾದ ವರಲಕ್ಷ್ಮಿ ಆನೆಯು ಕಾಡಿಗೆ ವಾಪಸ್‌ ಆಗಿದ್ದರಿಂದ ಮೊದಲ ತಂಡದ 5 ಆನೆಗಳ ತೂಕ ಪರೀಕ್ಷಿಸಲಾಯಿತು.

ಪೊಲೀಸರ ಕ್ಷಮೆ ಕೇಳಿದ ಸಂಸದ ಪ್ರತಾಪ್ ಸಿಂಹ, ಯಾವ ವಿಚಾರ?

ಈ ಬಲ ಪರೀಕ್ಷೆಯಲ್ಲಿ ಅಭಿಮನ್ಯು ಮತ್ತು ಈಶ್ವರ ಆನೆಗಳು ಸಮಬಲ ಸಾಧಿಸಿವೆ. ಈ ಎರಡು ಆನೆಗಳು ತಲಾ 275 ಕೆ.ಜಿ ತೂಕ ಹೆಚ್ಚಿಸಿಕೊಂಡಿವೆ. ಉಳಿದಂತೆ ಕಳೆದ ವರ್ಷ ಬರೋಬರಿ 525 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದ ಧನಂಜಯ ಆನೆಯು ಈ ಬಾರಿ 250 ಕೆ.ಜಿ ಮಾತ್ರ ಹೆಚ್ಚಿಸಿಕೊಂಡು 2ನೇ ಸ್ಥಾನ ಪಡೆದುಕೊಂಡಿದೆ. ಸತತ 8ನೇ ಬಾರಿ ಅಂಬಾರಿ ಹೊತ್ತ ಅರ್ಜುನ ಆನೆಯು 240 ಕೆ.ಜಿ ತೂಕ ಹೆಚ್ಚಿಸಿಕೊಂಡು 3ನೇ ಸ್ಥಾನಕ್ಕೆ ತೃಪ್ತಿಕೊಂಡಿದೆ. ವಿಜಯ ಆನೆಯು 145 ಕೆ.ಜಿ ತೂಕ ಹೆಚ್ಚಿಸಿಕೊಂಡಿದೆ.

-ಬಿ. ಶೇಖರ್‌ ಗೋಪಿನಾಥಂ

Follow Us:
Download App:
  • android
  • ios