ಪೋಷಕರು ಮತ್ತು ಹದಿಹರೆಯದವರು ನೋಡಲೇಬೇಕಾದ 'ಅಡೋಲಸೆನ್ಸ್' ವೆಬ್ ಸಿರೀಸ್

Synopsis
ಹದಿಹರೆಯದಲ್ಲಿ ಮಕ್ಕಳು ಎದುರಿಸುವ ಸಂಶಯಗಳು, ಮಾನಸಿಕ ಏರುಪೇರುಗಳು, ದೈಹಿಕ ಬೆಳವಣಿಗೆಗಳು ಮತ್ತು ಅವುಗಳನ್ನು ನಿಭಾಯಿಸುವಲ್ಲಿ ಅವರ ಅಸಹಾಯಕತೆಯನ್ನು 'ಅಡೋಲಸೆನ್ಸ್' ಚಿತ್ರ ಸುಂದರವಾಗಿ ಚಿತ್ರಿಸುತ್ತದೆ.
ಹದಿಹರೆಯ ಎಂಬ ಸಿಹಿವಿಷ:
ಅಡೋಲಸೆನ್ಸ್ ಅಂದರೆ ಹದಿಹರೆಯ. ಈ ವಯಸ್ಸಿನಲ್ಲಿ ಮಕ್ಕಳಲ್ಲಿ ಉಂಟಾಗುವ ಸಂಶಯಗಳು ಮಾನಸಿಕ ಏರುಪೇರು ದೈಹಿಕ ಬೆಳವಣಿಗೆಗಳು ಅದನ್ನು ನಿಭಾಯಿಸಲಾಗದ ಅವರ ಅಸಹಾಯಕತೆ, ಅವರ ಹರೆಯದ ಬಗೆಗಿನ ಕುತೂಹಲ ಇವೆಲ್ಲವನ್ನು ಬಹಳ ಅಚ್ಚುಅಕಟ್ಟಾಗಿ ಹೆಣೆದು ಪಾತ್ರಪೋಷಣೆ ಮಾಡಿ ಸಿನಿಮಾ ಆಗಿಸಿದ್ದಾರೆ. ನೆಟ್ ಫ್ಲಿಕ್ಸ್ ನಲ್ಲಿ ಓಡುತ್ತಿರುವ ಅಡೋಲೆನ್ಸ್ ಚಿತ್ರ ಎಲ್ಲರೂ ನೋಡಲೇ ಬೇಕು.
ಜಾಮಿ ಒಬ್ಬ 13 ವರ್ಷದ ಬಾಲಕ. ಆಗ ತಾನೆ ಹದಿಹರೆಯಲ್ಲಿ ಕಾಲಿಡುತ್ತಿರುವ ಷೋಡಶ. ಒಬ್ಬ ಅಕ್ಕ, ತಂದೆ ತಾಯಿ ಇರುವ ಪುಟ್ಟ ಸಂಸಾರದ ಕಣ್ಮಣಿ. ತನ್ನ ಸಹಪಾಟಿ ಕೇಟ್ ಳನ್ನು ಕೊಂದ ಅಪರಾಧಕ್ಕಾಗಿ ಅವನನ್ನು ಒಂದು ದಿನ ಬೆಳ್ಳಂಬೆಳಗ್ಗೆ ಅವನಿನ್ನೂ ಸಕ್ಕರೆಯ ಸವಿನಿದ್ರೆಯಲ್ಲಿ ಇರುವಾಗಲೇ ಪೊಲೀಸರು ಅವನ ಮನೆ ಪ್ರವೇಶಿಸಿ ಬಂಧಿಸುತ್ತಾರೆ. ಅವನ ತಂದೆ ತಾಯಿ ಅಕ್ಕ ಎಲ್ಲರೂ ಈ ಘಟನೆಯಿಂದ ಆಘಾತಕ್ಕೆ ಒಳಗಾಗುತ್ತಾರೆ. ಅವನನ್ನು ರಿಮಾಂಡ್ ಹೋಮಿಗೆ ತರಲಾಗುತ್ತದೆ. ಅಲ್ಲಿ ಅವನನ್ನು ಪ್ರಾಥಮಿಕ ತಪಾಸಣೆ ಮಾಡಿ ಒಂದು ರೂಮಿನಲ್ಲಿ ಇರಿಸುತ್ತಾರೆ. ಎಲ್ಲಿಯೂ ಅವನನ್ನು ಪೊಲೀಸಿನವರು ಹೊಡೆಯುವುದಿಲ್ಲ ಬೆದರಿಸುವುದಿಲ್ಲ ಕೆಟ್ಟದಾಗಿ ನಡೆಸಿಕೊಳ್ಳುವುದಿಲ್ಲ ಇದು ನಾವು ಗಮನಿಸಬೇಕಾದ ಅಂಶ. ಅವನನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಕೊಲೆಯನ್ನು ಮಾಡಿಲ್ಲ ಎಂದೇ ಸಾಧಿಸುತ್ತಾನೆ. ತನ್ನ ತಂದೆಗೂ ಅದನ್ನೇ ಹೇಳುತ್ತಾನೆ. 'ಅಪ್ಪಾ ನಾನು ಕೊಲೆ ಮಾಡಿಲ್ಲ' ಎಂಬುದೇ ಅವನ ವಾದ.
ಅವನ ತಂದೆತಾಯಿ ಮಗನ ಪರಿಸ್ಥಿತಿಗೆ ಕಣ್ಣೀರಾಗುತ್ತಾರೆ. ತಮ್ಮ ಪಾಲನೆ ಪೋಷಣೆಯಲ್ಲಿ ಏನಾದರೂ ತಪ್ಪಾಯಿತೇ ಎಂದು ದುಃಖಿಸುತ್ತಾರೆ. ಜಾಮಿಯ ಅಕ್ಕ ತನ್ನ ತಮ್ಮನ ದುಃಸ್ಥಿತಿಗೆ ಮರುಗುತ್ತಾಳೆ. ಬಿಕ್ಕಳಿಸುತ್ತಾಳೆ. ಹೀಗೆ ಎಲ್ಲರ ಕಣ್ಮಣಿಯಾಗಿದ್ದ ಜಾಮಿ ತನ್ನ ಸಹಪಾಟಿಯನ್ನೇ ಕೊಂದದ್ದು ಯಾಕೆ? ಯಾರು ಎಷ್ಟೇ ಪ್ರಶ್ನಿಸಿದರೂ ಅವನು ತಾನು ಕೊಲೆ ಮಾಡಿಲ್ಲ ಎಂದೇ ಸಾಧಿಸುತ್ತಾನೆ. ಕಿರುಚುತ್ತಾನೆ ಅಳುತ್ತಾನೆ. ಇದೆಲ್ಲ ನೋಡುವ ಪ್ರೇಕ್ಷಕರಿಗೂ ಮನಸ್ಸಿಗೆ ಕಸಿವಿಸಿಯಾಗುತ್ತದೆ. ಅದರಲ್ಲೂ ಹದಿಹರೆಯದ ಮಕ್ಕಳಿದ್ದವರು ಈ ಚಿತ್ರವನ್ನು ನೋಡುವಾಗ ಒಂದು ವಿಧದ ಆತಂಕಕ್ಕೆ ಒಳಗಾಗುತ್ತಾರೆ. ಎಲ್ಲ ವಯಸ್ಸಿನ ಪೋಷಕರನ್ನೂ ಚಿಂತನೆಗೆ ಹಚ್ಚುವ ಅಡೋಲಸೆನ್ಸ್ ತಮ್ಮ ಮಕ್ಕಳನ್ನು ತಾವು ಬೆಳೆಸುತ್ತಿರುವ ಅಥವಾ ಬೆಳೆಸಿರುವ ರೀತಿ ಸರಿ ಇದೆಯೇ ಎಂದು ಮುಟ್ಟಿನೋಡಿಕೊಳ್ಳುವಂತೆ ಮಾಡುತ್ತದೆ.
ಜಾಮಿಯನ್ನು ಬಂಧಿಸಿ ಪೊಲೀಸ್ ಆಫಿಸರ್ ಹಾಗೂ ಅವನ ಮಹಿಳಾ ಸಹಾಯಕಿ ಈ ಕೇಸನ್ನು ಶೋಧನೆ ಮಾಡುವುದಕ್ಕಾಗಿ ಪ್ರಮಾಣಿಕವಾದ ಪ್ರಯತ್ನ ಮಾಡುತ್ತಾರೆ. ಜಾಮಿ ವಯಸ್ಕನಲ್ಲ ಇನ್ನೂ ಬಾಲಕ ಎಂದು ಅವನನ್ನು ಬಹಳ ಪ್ರೀತಿ ಮತ್ತು ಸ್ನೇಹದಿಂದ ಅವನ ವಿಚಾರಣೆ ಮಾಡುತ್ತಾರೆ. ಅವರಿಗೂ ಜಾಮಿಯಂಥ ಹದಿವಯಸ್ಸಿನ ಹುಡುಗ ಇಂಥ ಪ್ರಕರಣದಲ್ಲಿ ಸಿಕ್ಕಿಕೊಂಡಿರುವುದು ವಿಷಾದವೆನಿಸುತ್ತದೆ.
ಯಾರು ಏನು ಕೇಳಿದರೂ ಬಾಯಿ ಬಿಡದ ಜಾಮಿಯಿಂದ ನಿಜ ಹೊರಬರಿಸಲು ಒಬ್ಬ ಮನೋವೈದ್ಯರನ್ನೂ ಕರೆಸುತ್ತಾರೆ. ಆ ಮನೋವೈದ್ಯೆ ಸ್ನೇಹದಿಂದ ಪ್ರೀತಿಯಿಂದ ಜಾಮಿಯ ಬಳಿ ಮಾತನಾಡುತ್ತಾಳೆ. ಎಲ್ಲವನ್ನೂ ಅವನ ಬಾಯಿಂದ ಹೊರಡಿಸುತ್ತಾಳೆ. ಅವನ ಹದಿಹರೆಯದ ಕುತೂಹಲ ಅವನ ಬೆಳೆಯುತ್ತಿರುವ ದೇಹದ ಬಗ್ಗೆ ಮನಸ್ಸಿನ ಬಗ್ಗೆ ಅವನ ಆಸೆಗಳು ಆಸಕ್ತಿಗಳು ಮನೆಯಲ್ಲಿ ಅವನೊಂದಿಗೆ ಅವನ ತಂದೆತಾಯಿ ಅಕ್ಕ ನಡೆದುಕೊಳ್ಳುವ ರೀತಿ ಎಲ್ಲವನ್ನೂ ವಿಚಾರಿಸುತ್ತಾಳೆ.
ಅವನ ಮಾತಿನಿಂದ ಆ ಮನೋವೈದ್ಯೆಗೆ ಎಲ್ಲಿಯೂ ಅವನ ತಂದೆತಾಯಿಯ ನಡವಳಿಕೆ ಪ್ರಶ್ಣಾರ್ಥಕವಾಗಿ ಕಾಣಿಸುವುದಿಲ್ಲ. ಒಂದು ಮಧ್ಯಮ ತರಗತಿಯ ಸುಂದರ ಸಂಸಾರ. ತಮ್ಮ ಮಕ್ಕಳನ್ನು ಪ್ರೀತಿಸುವ ಪೋಷಕರು. ವಿದ್ಯೆಗೆ ಮಕ್ಕಳ ಆಸಕ್ತಿಗೆ ನೀರೆರೆದು ಪ್ರೋತ್ಸಾಹಿಸುವ ಪೋಷಕರು ಎಲ್ಲಿಯೂ ಅನುಮಾನಾಸ್ಪದ ಎನಿಸುವುದಿಲ್ಲ. ತಂದೆತಾಯಿ ಅಕ್ಕನ ನಡವಳಿಕೆಯಿಂದ ಇವನು ಕೊಲೆ ಮಾಡುವ ಮಟ್ಟಕ್ಕೆ ಹೋಗಬಹುದು ಎಂಬ ಕೂದಳೆಯಷ್ಟೂ ಸಂಶಯ ಬರುವುದಿಲ್ಲ. ಆದರೆ ಅವನ ಹೆಣ್ಣಿನ ಬಗ್ಗೆ ಇರುವ ಕುತೂಹಲವನ್ನು ವಿಚಾರಿಸಿದಾಗ ಆ ಮನೋವೈದ್ಯೆಗೆ ಮೂರ್ಚೆ ಬರುವುದೊಂದು ಬಾಕಿ. ಹೆಣ್ಣಿನ ಬಗ್ಗೆ ಹೆಣ್ಣಿನ ದೈಹಿಕ ರಚನೆಯ ಬಗ್ಗೆ ಏನೆಲ್ಲ ಕಲ್ಪನೆಗಳು ಜಾಮಿಯಲ್ಲಿವೆ ಎಂದು ಅಚ್ಚರಿಯಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಸಿಗುವ ಮಾಹಿತಿಗಳು ಸಿನಿಮಾಗಳು ಅವನ ಈ ಮನಸ್ಥಿತಿಗೆ ಕಾರಣವಿರಬಹುದು ಎಂದು ಆ ವೈದ್ಯೆ ಊಹಿಸುತ್ತಾಳೆ.
ಕೇಟ್ ಳೊಡನೆ ಅವನ ಸ್ನೇಹ ಯಾವಮಟ್ಟದ್ದು ಎಂದು ಉಪಾಯವಾಗಿ ಬಾಯಿಬಿಡಿಸುತ್ತಾಳೆ. ಕೇಟ್ ಳೊಂದಿಗೆ ಸ್ನೇಹ ಒಡನಾಟ ಜಾಮಿಗೆ ಇಷ್ಟ ಹಾಗೆಯೇ ಹದಿಹರೆಯದಲ್ಲಿ ಕಾಲಿಡುತ್ತಿರುವ ಅವನಿಗೆ ಹೊಸ ಹೊಸ ಅನುಭವಗಳ ಬಗ್ಗೆ ತಿಳಿದುಕೊಳ್ಳುವ ಉಮೇದು. ಕೇಟ್ ಳನ್ನು ಮುಟ್ಟುವುದು ತನಗೆ ಸಂತೋಷ ಕೊಡುತ್ತದೆ ಎಂದು ಹೇಳುತ್ತಾನೆ. ಎಲ್ಲೆಲ್ಲಿ ಮುಟ್ಟಿದರೆ ತನಗೆ ಹಿತಕರ ಅನುಭವ ಆಗುತ್ತದೆ ಎಂದು ವೈದ್ಯೆಯಲ್ಲಿ ತಿಳಿಸಿದಾಗ ಆಕೆಗೆ ಷಾಕ್ ಆಗುತ್ತದೆ. ಕೇಟ್ ಳನ್ನು ಮುಟ್ಟಿ ಇನ್ನೇನೋ ಮಾಡಲು ಮುಂದುವರೆಯಲು ಹೋದಾಗ ಅವಳು ಪ್ರತಿಭಟಿಸುವುದರಿಂದ ಕೋಪಗೊಂಡ ಜಾಮಿ ಅವಳನ್ನು ಕೊಂದಿರಬಹುದು ಎಂದು ಆ ಮನೋವೈದ್ಯೆಗೆ ಅನಿಸುತ್ತದೆ. ಕೇಠ್ ಳೊಂದಿಗಿನ ಎಲ್ಲ ಅನುಭವವನ್ನೂ ಹೇಳೊಕೊಳ್ಳುವ ಜಾಮಿ ಕೊನೆಯಲ್ಲಿ ತಾನು ಕೊಲೆ ಮಾಡಿಲ್ಲ ಎಂದೇ ಸಾಧಿಸುತ್ತಾನೆ. ಆದರೆ ಸಿಸಿ ಟಿವಿಯ ಫೂಟೇಜ್ ಅವನೇ ಕೊಲೆಗಾರ ಎಂದು ದೃಢಪಡಿಸಿರುತ್ತದೆ.
ಜಾಮಿಯ ಕೇಸನ್ನು ತನಿಖೆ ಮಾಡುತ್ತಿರುವ ತನಿಖಾಧಿಕಾರಿ ಅವನ ಶಾಲೆಗೆ ಹೋಗಿ ಜಾಮಿಯ ಸಹಪಾಟಿಗಳನ್ನು ಅವನ ಸ್ನೇಹಿತರನ್ನು ಮಾತನಾಡಿಸುತ್ತಾರೆ. ಕೇಟ್ ಳ ಆಪ್ತ ಸ್ನೇಹಿತೆ ಕೂಡ ಜಾಮಿಯೇ ಕೇಟ್ ಳನ್ನು ಕೊಂದಿದ್ದಾನೆ ತನ್ನ ಆಪ್ತ ಸ್ನೇಹಿತೆಯ ಹತ್ಯೆಯಾಗಿದೆ ಎಂದು ಅಳುತ್ತಾಳೆ. ಕೇಟ್ ಳ ತಾಯಿಯ ಹೃದಯ ವಿದ್ರಾವಕ ಅಳು ನಮ್ಮನ್ನು ನಡುಗಿಸುತ್ತದೆ. ಇಬ್ಬರು ಸಹಪಾಟಿಗಳು ಜಾಮಿಯ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುವುದಿಲ್ಲ. ಆದರೆ ಅವರಿಬ್ಬರೂ ಜಾಮಿ ಕೊಲೆ ಮಾಡುವುದಕ್ಕೆ ಪರೋಕ್ಷ ಕಾರಣರಾಗಿರುತ್ತಾರೆ. ಜಾಮಿಯ ಹರೆಯದ ಬಗ್ಗೆ ಸಂಶಯಭರಿತ ಮಾತುಗಳನ್ನು ಆಡುವುದು ಅವನನ್ನು ಛೇಡಿಸುವುದು ಮಾಡಿರುತ್ತಾರೆ. ಅವನ ಪುರುಷತ್ವದ ಬಗ್ಗೆಯೂ ಅವಮಾನಕರವಾಗಿ ಮಾತನಾಡಿರುತ್ತಾರೆ. ಇದರಿಂದ ಕೋಪ ಅಥವಾ ಪ್ರಚೋದನೆಗೊಂಡ ಜಾಮಿ ಕೇಟ್ ಳ ಬಳಿ ಅನುಚಿತವಾಗಿ ವರ್ತಿಸಿ ಅವಳು ಪ್ರತಿಭಟಿಸಿದಾಗ ಕೊಲೆ ಮಾಡಿರುತ್ತಾನೆ.
ಜಾಮಿಯನ್ನು ವಿಚಾರಣಾಧೀನ ಕೈದಿಯಾಗಿಯೇ ಉಳಿಸಿಕೊಳ್ಳುತ್ತಾರೆ. ಎಲ್ಲ ಸಾಕ್ಷ್ಯಗಳು ಜಾಮಿಯತ್ತ ಬೆರಳು ತೋರಿಸುತ್ತಿದ್ದರೂ ಅವನ ತಪ್ಪೊಪ್ಪಿಗೆ ಮುಖ್ಯವಾಗಿರುತ್ತದೆ.
ಇದನ್ನೂ ಓದಿ: ವಿದ್ಯಾಪತಿ ಸಿನಿಮಾ ವಿಮರ್ಶೆ: ಉತ್ತರನ ಪೌರುಷ, ಅರ್ಜುನನ ವೀರಾವೇಶ
13 ತಿಂಗಳು ರಿಮಾಂಡ್ ಹೋಮಿನಲ್ಲೇ ಇರುವ ಜಾಮಿ ಒಂದು ದಿನ ತನ್ನ ತಂದೆಗೆ ಕರೆ ಮಾಡಿ ತಾನು ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡು ಶಿಕ್ಷೆ ಅನುಭವಿಸುತ್ತೇನೆ ಎಂದು ಹೇಳುತ್ತಾನೆ. ಆದಿನ ಜಾಮಿಯ ತಂದೆ ಎಡ್ಡಿಯ ಜನ್ಮದಿನವಾಗಿರುತ್ತದೆ. ಜಾಮಿ ತಂದೆಗೆ ತಾನೆ ಬರೆದ ಪೇಂಟಿಂಗ್ ಅನ್ನು ಗ್ರೀಟಿಂಗ್ ಕಾರ್ಡನ್ನು ಕಾಣಿಕೆಯಾಗಿ ಕಳಿಸಿರುತ್ತಾನೆ. ಈ 13 ತಿಂಗಳಲ್ಲಿ ಎಡ್ಡಿಯ ಮನೆಯವರು ತಮ್ಮ ನೆರೆಹೊರೆಯವರಿಂದ ಜಾಮಿಯ ಸಹಪಾಟಿ ಹುಡುಗರಿಂದ ಸಾಕಷ್ಟು ಅವಹೇಳನ ಕುಹಕ ಹಿಂಸೆಯನ್ನು ಅನುಭವಿಸಿರುತ್ತಾರೆ. ಆದರೂ ಅವರಿಗೆ ಜಾಮಿಯ ಮೇಲೆ ಪ್ರೀತಿ ಇರುತ್ತದೆ. ಒಂದಲ್ಲ ಒಂದು ದಿನ ಮಗ ನಿರಪರಾಧಿಯಾಗಿ ಬರಬಹುದು ಎಂಬ ನಿರೀಕ್ಷೆ ಇರುತ್ತದೆ. ಎಡ್ಡಿ ತನ್ನ ಮಗ ಕೇಟ್ ಳಿಗೆ ಇರಿಯುತ್ತಿರುವ ವೀಡಿಯೋ ನೋಡಿದ್ದರೂ ಎಲ್ಲೋ ಏನೋ ದೂರದ ಆಸೆ ಮಗ ನಿರಪರಾಧಿಯಾಗಿ ಬರಲಿ ಎಂದು. ಆ ಫೂಟೇಜನ್ನು ತನ್ನ ಹೆಂಡತಿ ಮಗಳಿಗೂ ತೋರಿಸಿರುವುದಿಲ್ಲ.
ಅಂತೂ ಕೊನೆಗೆ ಜಾಮಿ ತಪ್ಪೊಪ್ಪಿಗೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡುತ್ತಾನೆ. ತನ್ನ ತಂದೆಗೆ ಕರೆಮಾಡಿ ಹುಟ್ಟುಹಬ್ಬಕ್ಕೆ ವಿಷ್ ಮಾಡಿ "ಡ್ಯಾಡ್ ಐ ಕನ್ ಫೆಸ್ ಮೈ ಕ್ರೈಮ್" ಎನ್ನುತ್ತಾನೆ. ಎಡ್ಡಿಗೆ ಎದೆಯೊಡೆದಂತಾಗುತ್ತದೆ. ಸಂಭಾಳಿಸಿಕೊಂಡು 'ಆಗಲಿ 'ಮಗನೆ ನೀನೀ ನಿರ್ಧಾರಕ್ಕೆ ಬರುವುದರಲ್ಲಿ ಖಚಿತವಾಗಿದ್ದೀಯ ಯಾವುದೇ ಒತ್ತಡ ಇಲ್ಲವೇ' ಎಂದು ಕೇಳುತ್ತಾನೆ. ಮಗನಿಂದ ಖಚಿತ ಉತ್ತರ ಪಡೆದು 'ಒಳ್ಳೆಯದು ನಿನ್ನ ನಿರ್ಧಾರ ಸ್ವಾಗತಿಸುತ್ತೇನೆ ನಿನಗೆ ಒಳ್ಳೆಯದಾಗಲಿ' ಎಂದು ರುದ್ಧ ಕಂಠದಿಂದ ಹೇಳಿ ಕಾಲ್ ಕಟ್ ಮಾಡುತ್ತಾನೆ. ಜಾಮಿಯ ಮಾತುಗಳನ್ನು ಕೇಳಿಸಿಕೊಳ್ಲುತ್ತಿದ್ದ ಅವನ ಅಮ್ಮ ಅಕ್ಕ ಎಲ್ಲರೂ ಆಘಾತಕ್ಕೆ ಒಳಗಾಗಿ ಅಳುತ್ತಾರೆ. ಎಡ್ಡಿ ಮಗನ ಕೋಣೆಗೆ ಹೋಗಿ ಅವನ ಹಾಸಿಗೆಯ ಮೇಲೆ ಕುಸಿದು ಬಿದ್ದು ಹೃದಯವಿದ್ರಾವಕವಾಗಿ ಅಳುವುದರೊಂದಿಗೆ ಚಿತ್ರ ಮುಗಿಯುತ್ತದೆ. ಜಾಮಿಯ ಮುಗ್ಧಮುಖ ನಮ್ಮ ಮನದಾಳದಲ್ಲಿ ನಿಂತು ಬಿಡುತ್ತದೆ.
ಈ ಚಿತ್ರ ಎಲ್ಲ ಪೋಷಕರೂ ನೋಡಬೇಕು, ಜಾಮಿ ಯಾಕೆ ಜೈಲಿಗೆ ಹೋಗುವಂಥ ಅಪರಾಧ ಮಾಡಿದ, ಕೊಲೆ ಯಾಕೆ ಮಾಡಿದ ಎಂಬುದು ಎಲ್ಲರಿಗೂ ಅರ್ಥವಾಗಬೇಕು. ತಮ್ಮ ಹದಿಹರೆಯದ ಮಕ್ಕಳಿಗೂ ಈ ಚಿತ್ರ ತೋರಿಸಬೇಕು ಇದರ ಒಳಿತು ಕೆಡುಕುಗಳನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕು. ಇಂಥ ಅಪರಾಧಗಳನ್ನು ಮಾಡಿ ಸೆರೆಮನೆಗೆ ಹೋಗುವ ಮಕ್ಕಳಿಗೆ ಆಗುವ ನಷ್ಟವೇನು ಎಂದು ತಿಳಿದುಕೊಳ್ಳಬೇಕು. ವಿದ್ಯೆ ನಷ್ಟ, ಸಮಾಜದಲ್ಲಿ ಕೆಟ್ಟ ಹೆಸರು ಯಾರೂ ನಂಬದಂಥ ಪರಿಸ್ಥಿತಿ. ತಂದೆತಾಯಿಯರ ದುಃಖ ಮುಂದಿನ ಕತ್ತಲ ಭವಿಷ್ಯ ಎಲ್ಲವೂ ಅರ್ಥವಾಗಬೇಕು. ಹಾಗೆಯೇ ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಮಾಹಿತಿಗಳಲ್ಲಿ ಒಳ್ಳೆಯದು ಕೆಟ್ಟದ್ದು ಎಂಬ ಅರಿವು ಇರಬೇಕು. ಸೆಕ್ಸ್ ಬಗ್ಗೆ ಒಂದು ನಿರ್ದಿಷ್ಟ ಮಾಹಿತಿ ಖಂಡಿತಾ ಮಕ್ಕಳಿಗೆ ಅವಶ್ಯಕ. ಏನೋ ಏನೋ ಎಂಬ ಕುತೂಹಲಕ್ಕಿಂತ ಇದು ಇಷ್ಟೇ ಎಂಬಂತೆ ಆದರೆ ಬಾಲಾಪರಾಧಿಗಳು ಕಡಿಮೆಯಾಗುತ್ತಾರೇನೋ? ಹದಿಹರೆಯದ ಮಕ್ಕಳು ಬಾಲಾಪರಾಧಿಗಳಾಗಿ ಸೆರೆಮನೆಗ ಹೋಗುವುದು ಒಂದು ಶೋಚನೀಯ ಅಷ್ಟೇ ಆಘಾತಕರ ಸಂಗತಿ.
ಇದನ್ನೂ ಓದಿ: ಅಜ್ಞಾತವಾಸಿ ಸಿನಿಮಾ ವಿಮರ್ಶೆ: ತಣ್ಣಗೆ ಕಾಡುವ ಸಾವು, ಬದುಕು, ಪ್ರೀತಿ
ಒಳ್ಳೆಯ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕಾದರೆ ಮಕ್ಕಳ ಮನಸ್ಸು ನಿರ್ಮಲವಾಗಿರಬೇಕು. ಶಿಕ್ಷಣ ಮಾರ್ಗದರ್ಶನ ಸರಿಯಾಗಿರಬೇಕು. ತಮ್ಮ ದೈಹಿಕ ಬದಲಾವಣೆಗಳನ್ನು ಪರಸ್ಪರ ಸಹಪಾಟಿಗಳಲ್ಲಿ ಚರ್ಚಿಸುವಾಗ ಆರೋಗ್ಯಕರ ಚರ್ಚೆ ಅಗತ್ಯ. ಇಲ್ಲಿ ಕುಹಕ ಛೇಡನೆ ಇರಬಾರದು. ಅಡೋಲಸೆನ್ಸ್ಅಡೋಲಸೆನ್ಸ್ ಸಿನಿಮಾ ನಮ್ಮನ್ನು ಬಹಳ ಚಿಂತನೆಗೆ ಹಚ್ಚುತ್ತದೆ. ಮಕ್ಕಳ ಪೋಷಕರ ಇಬ್ಬರ ಜವಾಬ್ದಾರಿಯೂ ಹೆಚ್ಚೆನಿಸುತ್ತದೆ. ಪರಸ್ಪರ ಸ್ನೇಹ ವಿಶ್ವಾಸ ಬೆಳೆಸಿಕೊಳ್ಳಬೇಕು ಎನಿಸುತ್ತದೆ. ಮಕ್ಕಳ ಬಳಿ ಯಾವ ವಿಷಯವನ್ನೂ ಮುಚ್ಚುಮರೆ ಮಾಡಬಾರದು. ಕಾಲಕಾಲಕ್ಕೆ ಅವರೊನೆ ಮುಕ್ತ ಚರ್ಚೆ ಮಾಡುವ ಮನೋಭಾವ ಪೋಷಕರದ್ದೂ ಆಗಿರಬೇಕು.