ಮಂಡ್ಯದಲ್ಲಿ ಹೆಚ್ಚಾಯ್ತು ಧರ್ಮ ದಂಗಲ್ ವ್ಯಾಪಾರ, ಹಲಾಲ್, ಆಜಾನ್ ಬಳಿಕ ವಿಗ್ರಹ ವಾರ್ ಮುಸ್ಲಿಮರು‌ ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಮಂಡ್ಯ (ಎ.7): ರಾಜ್ಯದಲ್ಲಿ ಹಿಜಾಬ್ (Hijab) ವಿವಾದದಿಂದ ಆರಂಭಗೊಂಡ ಧರ್ಮ ಸಂಘರ್ಷ (Religious conflict) ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕೋರ್ಟ್‌ ತೀರ್ಪು ವಿರೋಧಿಸಿ ಕೆಲ ಮುಸ್ಲಿಂ ಸಂಘಟನೆಗಳು ಬಂದ್ ಕರೆ ನೀಡುತ್ತಿದ್ದಂತೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹಲಾಲ್ ಕಟ್ (Halal Cut) ನಿಷೇಧ, ಮುಸ್ಲಿಂ ವ್ಯಾಪಾರಿಗಳಿಗೆ ಬಾಯ್ಕಾಟ್, ಆಜಾನ್‌ಗೆ ತಡೆ ಹೀಗೆ ಹಲವು ವಿಚಾರಗಳನ್ನ ಹಿಂದೂ ಕಾರ್ಯಕರ್ತರು ವಿರೋಧಿಸುತ್ತಿದ್ದಾರೆ. ಇದೀಗ ವಿಗ್ರಹ ( idol ) ವಿಚಾರದಲ್ಲೂ ವಾರ್ ಶುರುವಾಗಿದ್ದು ಮುಸ್ಲಿಮರು ಕೆತ್ತನೆ ಮಾಡಿದ ಹಿಂದೂ ದೇವರ ವಿಗ್ರಹ ಖರೀದಿಸದಂತೆ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ.

ವಿಶ್ವಕರ್ಮರು ಕೆತ್ತಿದ ವಿಗ್ರಹ ಪ್ರತಿಷ್ಠಾಪನೆಗೆ ಒತ್ತಾಯ: ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಹೇಳಿಕೆ ನೀಡಿ ಕೋಲಾರ ಶಿವಾರಪಟ್ಟಣದ ಮುಸ್ಲಿಂ ಕುಟುಂಬ ಕಳೆದ 30 ವರ್ಷಗಳಿಂದ ಹಿಂದು ದೇವರ ವಿಗ್ರಹ ಕೆತ್ತನೆ ಮಾಡುವ ಕೆಲಸ ಮಾಡುತ್ತಿದೆ. ಈಗ ಮುಸ್ಲಿಮರನ್ನ ಬಾಯ್ಕಾಟ್ ಮಾಡುತ್ತಿರುವವರು ವಿಗ್ರಹ ಕೆತ್ತನೆ ಮಾಡುವ ಮುಸ್ಲಿಂ ಕುಟುಂಬ ಏನು ಮಾಡ್ತೀರಿ ಎಂದು ಪ್ರಶ್ನಿಸಿದ್ದರು.

ಹೆಚ್‌ಡಿಕೆ‌ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ಮೇಲುಕೋಟೆ ದೇವಾಲಯದ 4 ನೇ ಸ್ಥಾನಿಕ ಶ್ರೀನಿವಾಸನ್ ಗೂರೂಜಿ , ಕುಮಾರಸ್ವಾಮಿ ಅವರು ಮುಸ್ಲಿಂ ಕುಟುಂಬ ವಿಗ್ರಹ ಕೆತ್ತುವ ವಿಚಾರ ನೆನಪಿಸಿದ್ದಾರೆ. ಮುಸ್ಲಿಮರು ವಿಗ್ರಹ ಕೆತ್ತನೆ ಮಾಡುವುದು ಧರ್ಮ ಬಾಹಿರ. ಶಾಸ್ತ್ರ ತಿಳಿದಿರುವ ವಿಶ್ವಕರ್ಮ ಸಮುದಾಯದವರು ಮಾತ್ರ ಮೂರ್ತಿ ಕೆತ್ತನೆ ಮಾಡ್ತಾರೆ. ಪುರೋಹಿತರು, ಆಗಮಿಕರು ವಿಗ್ರಹ ಪ್ರತಿಷ್ಠಾಪಿಸುತ್ತಾರೆ. ಧರ್ಮ, ಶಾಸ್ತ್ರದ ಮೇಲೆ ನಂಬಿಕೆ ಪ್ರೀತಿ ಇರುವವರು ಮಾತ್ರ ಈ ಕೆಲಸ ಮಾಡಬೇಕು. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಕೆತ್ತನೆ ಕೆಲಸ ಕಲಿತ ಮಾತ್ರಕ್ಕೆ ಅನ್ಯಧರ್ಮೀಯರು ವಿಗ್ರಹ ಕೆತ್ತನೆ ಮಾಡೋದು ನಿಷಿದ್ಧ.
ವಿಶ್ವಕರ್ಮ ಸಮುದಾಯದವರಿಂದಲೇ ಹಿಂದೂ ದೇವರ ವಿಗ್ರಹ ಖರೀದಿಸಿ ಎಂದು ಮನವಿ ಮಾಡಿದರು‌.

Karnataka Politics: ನನ್ನತ್ರ ಎಲ್ಲರ ಫೈಲಿದೆ: ಸಚಿವ ಅಶ್ವತ್ಥನಾರಾಯಣ ವಿರುದ್ಧ ಹರಿಹಾಯ್ದ ಭಾಸ್ಕರ್‌ ರಾವ್‌

ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಜಾಗೃತಿ, ರಾಜ್ಯ ಪ್ರವಾಸ: ಸಕ್ಕರೆ ನಾಡು ಮಂಡ್ಯಕ್ಕೂ (Mandya) ಧರ್ಮ ದಂಗಲ್ ಕಾಲಿಟ್ಟಿದೆ. ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಖರೀದಿಸದಂತೆ ಒತ್ತಾಯಗಳು ಕೇಳಿಬರುತ್ತಿವೆ. ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ 4ನೇ ಸ್ಥಾನಿಕ ಶ್ರೀನಿವಾಸನ್ ಗೂರೂಜಿ ಮುಸ್ಲಿಮರು ತಯಾರಿಸಿದ ವಿಗ್ರಹ ನಿಷೇಧಿಸಲು ಮನವಿ ಮಾಡಿದ್ದು, ಏಪ್ರಿಲ್ 15 ರಿಂದ ಇಡೀ ರಾಜ್ಯ ಪ್ರವಾಸ ಕೈಗೊಂಡು ಜಾಗ್ರತೆ ಮೂಡಿಸಲು ನಿರ್ಧಾರ ಮಾಡಿದ್ದಾರೆ. ರಾಜ್ಯದಲ್ಲಿ ಎಲ್ಲೆಲ್ಲಿ ದೇವಾಲಯಗಳು ನಿರ್ಮಾಣ ಆಗ್ತಿವೆಯೇ ಅಲ್ಲಿಗೆ ಭೇಟಿ ಕೊಟ್ಟು ಗ್ರಾಮದ ಯಜಮಾನರು, ಎಲ್ಲಾ ಜನಾಂಗದ ಮುಖಂಡರು ಬಳಿ ಮುಸ್ಲಿಮರಿಂದ ವಿಗ್ರಹ ಖರೀದಿಸದಂತೆ ಮನವಿ ಮಾಡುತ್ತೇನೆ. ಧರ್ಮದ ಮೇಲೆ ಪ್ರೀತಿ, ನಂಬಿಕೆ ಇರುವವರು ಮಾತ್ರ ಈ ಕೆಲಸ ಮಾಡಬೇಕು. ಕೂಲಿಗಾಗಿ ಕೆಲಸ ಕಲಿತ ಮಾತ್ರಕ್ಕೆ ಹಿಂದು ದೇವರ ವಿಗ್ರಹ ವನ್ನು ಅನ್ಯಧರ್ಮೀಯರು ಕೆತ್ತನೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಅನ್ಯಧರ್ಮೀಯರ ಬಳಿ ಪೂಜಾ ಸಾಮಗ್ರಿಗಳನ್ನು ಖರೀದಿಸದಂತೆ ಜಾಗೃತಿ: ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ ನಡೆಸಲಿರುವ ಶ್ರೀನಿವಾಸನ್ ಗೂರೂಜಿ ಹಿಂದು ದೇವಾಲಯಗಳ ಬಳಿ ಅಂಗಡಿ ಇಟ್ಟುಕೊಂಡಿರುವ ಮುಸ್ಲಿಂ ವ್ಯಾಪಾರಿಗಳಿಂದ ಪೂಜಾ ಸಾಮಗ್ರಿಗಳನ್ನು ಖರೀದಿಸದಂತೆ ಕರೆ ನೀಡಿದ್ದಾರೆ. ಮುಸ್ಲಿಮರ ಬದಲು ಹಿಂದೂಗಳ ಬಳಿಯೇ ವ್ಯಾಪಾರ ನಡೆಸಿ ನಮ್ಮ ಹಣ, ವ್ಯಾಪಾರ ನಮ್ಮವರ ಜೊತೆಯೇ ನಡೆಯಲಿ ಎಂದು ಮನವಿ ಮಾಡಿದ್ದಾರೆ.

ಪರಿಸರ ಜಾಗೃತಿಗಾಗಿ ಗದಗದ 52ರ ವೃದ್ಧನಿಂದ 300 ಕಿ.ಮೀ ಸೈಕಲ್ ಜಾಥಾ!

ದೀವಟಿಗೆ ಸಲಾಂ ವಿಚಾರ, ವರದಿ ಕೇಳಿದ ಜಿಲ್ಲಾಡಳಿತ: ಮೇಲುಕೋಟೆ ಚೆಲುವನಾರಾಯಣ ದೇವಾಲಯದಲ್ಲಿ (melukote cheluvanarayana swamy) ಪ್ರತಿನಿತ್ಯ ಸಂಜೆ ನಡೆಯುವ ದೀವಟಿಗೆ ಸಲಾಂ ಆರತಿ ಹೆಸರು ಬದಲಿಸುವಂತೆ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ನವೀನ್ ಮನವಿ ಸಲ್ಲಿಸಿದ ಬಳಿಕ ದೇವಾಲಯದ ಆಡಳಿತ ಮಂಡಳಿ ವರದಿ ಕೇಳಿರುವ ಜಿಲ್ಲಾಡಳಿತ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದು ಸ್ಪಷ್ಟ ಅಭಿಪ್ರಾಯ ತಿಳಿಸುವಂತೆ ಸೂಚಿಸಿತ್ತು.

ಅದರಂತೆ ಒಕ್ಕೊರಲ ಅಭಿಪ್ರಾಯ ತಿಳಿಸಿರುವ ದೇಗುಲದ ಸ್ಥಾನಿಕರು. ದೀವಟಿಗೆ ಸಲಾಂ ಕೈ ಬಿಡಬೇಕು. ಮುಸ್ಲಿಂ ದಾಳಿ ಕೋರರಿಂದ ಸಂಧ್ಯಾರತಿ ಬದಲಿಗೆ ದೀವಟಿಗೆ ಸಲಾಂ ಎಂಬ ಪದ ಬಂದಿದೆ. ಸಲಾಂ ಪದ ತೆಗೆದು ಸಂಧ್ಯಾರತಿ ಎಂದು ಹೆಸರಿಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಇಓ ಹಾಗು ಎಸಿಯವರಿಗೆ ಲಿಖಿತ ರೂಪದಲ್ಲಿ ಅಭಿಪ್ರಾಯ ತಿಳಿಸಿರುವ ಅರ್ಚಕರು‌. ಸಲಾಂ ಪದ ತೆಗೆದು ಹಾಕುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.