ಸ್ನಾತಕೋತ್ತರ ಪದವೀಧರನ ಮಿಡಿಸೌತೆ ಸಾಹಸ
ಡಿಗ್ರಿ ಪದವೀಧರನ ಕೃಷಿ ಸಾಧನೆ ಇದು.
- ಚಳ್ಳಕೆರೆ ವೀರೇಶ್
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂನ ದುಗ್ಗಾವರ ಗ್ರಾಮದ ಎಚ್.ಟಿ.ಶಿವಕುಮಾರ್ ಹಾಗೂ ಸತೀಶ್ ಎಂಬ ಯುವಕರು ಸೌತೆಕಾಯಿ ಮಿಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ. ತಮ್ಮ ಎಚ್.ಟಿ ಶಿವಕುಮಾರ್ ಎಂಎಸ್ಡಬ್ಲ್ಯೂನ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿಯಾದರೆ, ಅಣ್ಣ ಸತೀಶ್ ಸ್ನಾತಕೋತ್ತರ ಸಮಾಜಶಾಸ್ತ್ರ ಪದವೀಧರ. ಸತೀಶ್ ಅವರು ಉದ್ಯೋಗಕ್ಕಾಗಿ ವರ್ಷಗಳ ಕಾಲ ಹುಡುಕಾಟ ನಡೆಸಿ ಬೇಸತ್ತಾಗ, ತಮ್ಮ ಶಿವಕುಮಾರ್ ಅವರಿಗೆ ಖಾಸಗಿ ಕಂಪನಿಯವರು ಮಿಡಿ ಸೌತೆಕಾಯಿ ಬೆಳೆಯಲು ಸಲಹೆ ನೀಡಿದರು. ಇದನ್ನು ಸವಾಲಾಗಿ ಸ್ವೀಕರಿಸಿದ ಸತೀಶ್, ಇಂದು ಕಂಪೆನಿಯ ಬೆಂಬಲದಲ್ಲಿ ಮಿಡಿಸೌತೆಕಾಯಿ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.
ಕೃಷಿಗೆ ಕಂಪನಿ ಪ್ರೋತ್ಸಾಹ: ಬೆಂಗಳೂರು ಮೂಲದ ರಿವಿನ ಫುಡ್ ಪ್ರೈವೆಟ್ ಲಿಮಿಟೆಡ್ ಕಂಪನಿ, ಸಣ್ಣ ಹಾಗೂ ಆರ್ಥಿಕ ಸಂಕಷ್ಟದಲ್ಲಿನ ರೈತರಿಗೆ ಮಿಡಿ ಸೌತೆ ಸೇರಿದಂತೆ ಹಲವಾರು ಬೆಳೆ ಬೆಳೆಯಲು ಎಲ್ಲಾ ಪ್ರೋತ್ಸಾಹ ನೀಡುತ್ತಿದೆ. ರೈತರಿಗೆ ಬೆಳೆ ಬೆಳೆಯಲು ಅಗತ್ಯವಿರುವ ಬೀಜ, ಡ್ರಿಪ್, ಗೊಬ್ಬರ, ಔಷಧಿಯ ವೆಚ್ಚವನ್ನು ಕಂಪನಿಯೇ ಸಾಲದ ರೀತಿಯಲ್ಲಿ ಭರಿಸುತ್ತದೆ. ಕಂಪೆನಿಯವರೇ ಪ್ರತಿನಿತ್ಯ ಹೊಲಕ್ಕೆ ಬಂದು ಮಿಡಿ ಸೌತೆಕಾಯಿಯನ್ನು ಖರೀದಿ ಮಾಡಿಕೊಳ್ಳುವುದರಿಂದ ರೈತರಿಗೆ ಮಾರುಕಟ್ಟೆಯ ಸಮಸ್ಯೆಯೂ ಇಲ್ಲವಾಗಿದೆ.
ಮಿಡಿ ಸೌತೆ ನಾಟಿ ಹೇಗೆ?:
ಇಳಿಮುಖಕ್ಕೆ ಅಡ್ಡಲಾಗಿ ಸಾಲಿಂದ ಸಾಲಿಗೆ ೩.೫ಯಿಂದ ೪ ಅಡಿಗಳ ಅಂತರದಲ್ಲಿ ಬದು ನಿರ್ಮಿಸಬೇಕು. ಕೊಟ್ಟಿಗೆ ಗೊಬ್ಬರ, ಡಿಎಪಿ, ಪೊಟ್ಯಾಶ್ ಗೊಬ್ಬರವನ್ನು ನೀಡಬೇಕು. 4 ಅಡಿಗಳ ಅಂತರದಲ್ಲಿ ಬೀಜ ನಾಟಿ ಮಾಡಬೇಕು. ಇದು ನಾಟಿ ಮಾಡಿದ ೨೪ ದಿನಕ್ಕೆ ಫಸಲು ಬಿಡಲಾರಂಭಿಸುತ್ತದೆ. ತೋಟದಲ್ಲಿ ಒಂದು ಬೋರ್ವೆಲ್ನಲ್ಲಿ ಒಂದು ಇಂಚು ನೀರು ಬರುತ್ತಿದ್ದು, ಹನಿ ನೀರಾವರಿ ಅಳವಡಿಸಲಾಗಿದೆ. ಈ ಬೆಳೆ ಪೋಷಿಸಿದಷ್ಟು ಕಾಲ ಬೆಳೆ ನೀಡಲಿದ್ದು, ಈಗಾಗಲೇ ಕಂಪನಿ ಸಾಕಷ್ಟು ಫಸಲು ಖರೀದಿಸಿದೆ. ಈ ಮಿಡಿ ಸೌತೆ ಜರ್ಮನಿಗೆ ರಫ್ತಾಗಲಿದ್ದು ನಾಲ್ಕು ಮಟ್ಟದಲ್ಲಿ ಇದರ ದರ ನಿಗಡಿ ಮಾಡಲಾಗುತ್ತದೆ. ಎಳಬು-32 ರೂ, ಸ್ಪಲ್ಪದೊಡ್ಡ-15, ದಪ್ಪ-9 ತೀರಾ ದಪ್ಪ-2 ರಿಂದ 3 ರೂಗೆ ಖರೀದಿಸುತ್ತಾರೆ. ಗುಣಮಟ್ಟದ ಆಧಾರದ ಮೇಲೆ ಪ್ರತಿದಿನಕ್ಕೆ 9 ರಿಂದ 15 ಸಾವಿರದವರೆಗೂ ಹಣ ಸಿಗುತ್ತದೆ.
ಸಂಸ್ಕರಣೆ ಹೇಗೆ?:
ಮಿಡಿ ಸೌತೆಕಾಯಿ ಪ್ರತಿ ದಿನ 75 ಕೆಜಿಯಿಂದ ಒಂದು ಕ್ವಿಂಟಾಲ್ವರೆಗೂ ಬೆಳೆ ಬರುತ್ತದೆ. ಗಿಡದಿಂದ ಕಿತ್ತ ನಂತರ ತೇವಾಂಶದ ಗೋಣಿ ಚೀಲದಲ್ಲಿ ಇಡಬೇಕು. ಇಲ್ಲವಾದಲ್ಲಿ ಅವು ಒಣಗಿಹೋಗುತ್ತವೆ. ಹುಳದಿಂದ ಬಳ್ಳಿ ರಕ್ಷಣೆ: ಬಳ್ಳಿಗೆ ಬರುವ ದೋನಿರೋಗ, ಕೊರಕ, ಕೆಂಜಿಗೆ, ಲೋಳೆ ಹುಳುಗಳಿಂದ ರಕ್ಷಣೆಗಾಗಿ ಒಂದು ಆಕರ್ಷಕ ಬಾಕ್ಸ್ ಬಿಸ್ಕತ್ ಡಬ್ಬವನ್ನು ಅಲ್ಲಲ್ಲಿ ನೇತು ಹಾಕಲಾಗಿದೆ. ಇದರಿಂದ ಹೂ, ಕಾಯಿ ರಕ್ಷಣೆ ಮಾಡಲಾಗುತ್ತದೆ. ಇದಲ್ಲದೆ ರೋಗಕ್ಕೆ ಅನುಗುಣವಾಗಿ ರೆಕ್ಸೊಲಿನ್ ಔಷಧಿಯಿಂದ ಸಿಂಪಡಣೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೆ ಸತೀಶ್ ಅವರ ಮೊಬೈಲ್ ಸಂಖ್ಯೆ 9844811879ಗೆ ಸಂಪರ್ಕಿಸಿ.
ಸುಮಾರು 30 ಸಾವಿರಕ್ಕೂ ಕಡಿಮೆ ಖರ್ಚು ಬಂದಿದೆ. ಮನೆಯ ಸದಸ್ಯರೇ ಕೃಷಿ ನಿರ್ವಹಿಸುವ ಕಾರಣ ಕೂಲಿಗಳ ಅವಶ್ಯಕತೆ ಇಲ್ಲ. 40 ರಿಂದ 50 ಸಾವಿರ ಲಾಭದಲ್ಲಿದ್ದೇನೆ.
- ಸತೀಶ್, ಕೃಷಿಕ